ಮೂಡುಬಿದಿರೆ ಲೆಪ್ಪದ ಬಸದಿಯಲ್ಲಿ ಅಟ್ಟಳಿಗೆ ಅಭಿಷೇಕ
ಮೂಡುಬಿದಿರೆ: ಇಲ್ಲಿನ ಲೆಪ್ಪದ ಬಸದಿಯ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನೀ ಅಮ್ಮನವರ ವಾರ್ಷಿಕ ಅಟ್ಟಳಿಗೆ ಅಭಿಷೇಕವು ಶನಿವಾರ ರಾತ್ರಿ ವಿಜ್ರಂಭಣೆಯಿಂದ ನಡೆಯಿತು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಶನಿವಾರ ಬೆಳಗ್ಗೆ ಕೆರೆಬಸದಿ ಶ್ರೀ ಮಲ್ಲಿನಾಥ ಸ್ವಾಮಿ ಮತ್ತು ದೇರಮ್ಮ ಶೆಟ್ರ ಬಸದಿ ಶ್ರೀ ಅರಮಲ್ಲಿ ಮುನಿಸುವ್ರತ ಸ್ವಾಮಿ ಬಿಂಬಗಳಿಗೆ ಪಂಚಾಮೃತ ಅಭಿಷೇಕ ನಡೆದವು. ವಿಮಾನಶುದ್ಧಿ ಆರಂಭ, ಮಧ್ಯಾಹ್ನ ಶ್ರೀ ಮಾತೆ ಜ್ವಾಲಾಮಾಲಿನಿ ದೇವೀ ಅಮ್ಮನವರ ಪ್ರತಿಷ್ಠಾ ಮಹೋತ್ಸವ ಆರಂಭವಾಗಿ, ಸಂಜೆ ಮಾಜಿ ಸಚಿವ ಕೆ. ಅಭಯಚಂದ್ರ-ಮಂಜುಳಾ ದಂಪತಿಯ ಸೇವೆಯಾಗಿ ಶ್ರೀ ಜ್ವಾಲಾಮಾಲಿನಿ ದೇವೀ ಅಮ್ಮನವರ ಮುಖವಸ್ತ್ರ ಉದ್ಘಾಟನೆಗೊಂಡಿತು.
ಬಳಿಕ ರಾತ್ರಿ ಅಗ್ರೋದಕ ಮೆರವಣಿಗೆ, 8ಕ್ಕೆ ಅಂಬಾತನಯ ಮುದ್ರಾಡಿ ಅವರಿಂದ ಜಿನಕಥೆ ನಡೆದು ರಾತ್ರಿ 9ಕ್ಕೆ ಅಟ್ಟಳಿಗೆಯಲ್ಲಿ ಚಂದ್ರನಾಥ ಸ್ವಾಮಿಗೆ 108 ಕಲಶ ಮಹಾಭಿಷೇಕ ನಡೆದು ಪ್ರಸಾದ ವಿತರಿಸಲಾಯಿತು.
ಮೊಕ್ತೇಸರರಾದ ಪಟ್ಣಶೆಟ್ಟಿ ಎಂ. ಸುದೇಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್, ಎಂ. ಪದ್ಮಪ್ರಸಾದ್ ಅರಮನೆ, ಚೌಟರ ಅರಮಣೆಯ ಎಂ. ವೀರೇಂದ್ರ, ಸಹೋದರರು, ಸಹೋದರಿ, ಕುಟುಂಬಸ್ಥರ ಸಹಿತ ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು.