ಶ್ರೀ ಸಿಂಚನಾ ಸಂಸ್ಥೆಯಿಂದ ಸ್ವ ಸಹಾಯ ಸಂಘಗಳ ಸಮಾವೇಶ
ಮೂಡುಬಿದಿರೆ: ಸ್ವಸಹಾಯ ಸಂಘಗಳು ಜನಸಾಮಾನ್ಯರಿಗೆ ಸ್ವಾಭಿಮಾನದಿಂದ ಬದುಕುವ ಶಕ್ತಿ ನೀಡಿದ್ದು, ಈ ಮೂಲಕ ಅನೇಕ ಕುಟುಂಬಗಳು ಗೌರವಯುತ ಜೀವನ ನಡೆಸಲು ಸಹಕಾರಿಯಾಗಿವೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಶ್ರೀ ಸಿಂಚನ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಮತ್ತು ಶ್ರೀ ಸಿಂಚನ ಸೇವಾ ಟ್ರಸ್ಟ್ ಮೂಡುಬಿದಿರೆ ವತಿಯಿಂದ ಸ್ವರ್ಣ ಮಂದಿರದಲ್ಲಿ ಭಾನುವಾರ ನಡೆದ ಸ್ವ ಸಹಾಯ ಸಂಘಗಳ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಸ್ವಸಹಾಯ ಸಂಘಗಳಿಂದ ಕಷ್ಟಕಾಲದಲ್ಲಿ ನಾವು ಸಾಲ ಪಡೆಯುತ್ತೇವೆ. ಪಡೆದ ಸಾಲವನ್ನು ಕ್ಲಪ್ತ ಸಮಯದಲ್ಲಿ ಹಿಂತಿರುಗಿಸುವುದು ಸದಸ್ಯರ ಜವಬ್ದಾರಿಯಾಗಿರುತ್ತದೆ. ನಮ್ಮ ಹಿರಿಯರು ಜೀವನಾಧಾರಕ್ಕೆ ಕೃಷಿಯನ್ನೆ ಅವಲಂಬಿಸಿದ್ದರೆ, ಈಗ ಬದುಕಿಗೆ ಅನೇಕ ಅವಕಾಶಗಳಿದ್ದು ಅದನ್ನು ಬಳಸಿಕೊಳ್ಳಬೇಕು ಎಂದರು.
ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ಸಂಯುಕ್ತ ಮಹಾಪ್ರಬಂಧಕ ಗಜಾನನ ಪೈ ತೋನ್ಸೆ ಮುಖ್ಯ ಅತಿಥಿಯಾಗಿ ಮಾತನಾಡಿ, ಜನಸಾಮಾನ್ಯರನ್ನು ಅಸಮಾನ್ಯರನ್ನಾಗಿಸುವ ಶಕ್ತಿ ಸ್ವಸಹಾಯ ಗುಂಪುಗಳಿಗಿದ್ದು, ಈ ಗುಂಪುಗಳು ಸಮಾಜದಲ್ಲಿ ಮೌನ ಕ್ರಾಂತಿಯನ್ನುಂಟು ಮಾಡುತ್ತಿವೆ ಎಂದರು.ಪ್ರತಿಭಾನ್ವಿತ ವಿಘ್ನೇಶ್, ಅಶ್ವಿನಿ ಹಾಗೂ ರಶ್ಮಿತಾ ಅವರನ್ನು ಪುರಸ್ಕರಿಸಲಾಯಿತು. ಸ್ವಸಹಾಯ ಸಂಘಗಳಿಗೆ ಲಾಭಾಂಶವನ್ನು ವಿತರಿಸಲಾಯಿತು. ಅತ್ಯುತ್ತಮ ಸ್ವಸಹಾಯ ಗುಂಪುಗಳಾದ ಜನನಿ ಮಾರೂರು, ಸುಬ್ರಹ್ಮಣ್ಯ ಕೇಮಾರು, ನಾಗಬ್ರಹ್ಮ ಲಾಡಿ, ಮತ್ತು ದುರ್ಗಾಂಬಿಕ ಇರುವೈಲು ಇವುಗಳನ್ನು ಪುರಸ್ಕರಿಸಲಾಯಿತು. ಸ್ವಸಹಾಯ ಸಂಘಗಳ ವಿವರಗಳನ್ನು ಕುಮುದಾಕ್ಷ ಕೋಟ್ಯಾನ್ ನೀಡಿದರು. ಸಂಸ್ಥೆಯ ನಿರ್ದೇಶಕ ಗೋಪಾಲಕೃಷ್ಣ ಕೆ ವರದಿ ವಾಚಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಿಂಚನ ಸೌಹಾರ್ದ ಕ್ರೆಡಿಟ್ ಕೊಆಪರೇಟಿವ್ ಮತ್ತು ಸಿಂಚನ ಸೇವಾ ಟ್ರಸ್ಟ್ ಅಧ್ಯಕ್ಷರಾದ ಮೋಹನ್ ಪ್ರಭು ಕೆ., ನಮ್ಮ ಸಂಸ್ಥೆಯಿಂದ ಗ್ರಾಹಕರಿಗೆ ಆನ್ಲೈನ್ ಸೇವೆಗಳನ್ನು ನೀಡುವುದರ ಜತೆಗೆ ಪ್ರತ್ಯೇಕ ಆ್ಯಪ್ ಸೌಲಭ್ಯವನ್ನು ಕೂಡ ಒದಗಿಸಲಾಗಿದೆ ಎಂದರು. ಹಿರಿಯ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ಬಂಗೇರ, ಸಂಸ್ಥೆಯ ಸಿಇಒ ಎಂ. ಪುರುಷೋತ್ತಮ ಶೆಟ್ಟಿ, ಮೆನೇಜರ್ ರತ್ನಾಕರ ಹೆಗ್ಡೆ, ನಿರ್ದೇಶಕರಾದ ಶಾಲಿನಿ ಉಪಸ್ಥಿತರಿದ್ದರು. ವಿನೋದ್ ಕುಮಾರ್ ಸ್ವಾಗತಿಸಿದರು. ಮಾಯಾ ನಿರೂಪಿಸಿದರು. ಸಂಗೀತ ಪ್ರಭು ವಂದಿಸಿದರು.