ಕಲ್ಲಡ್ಕ: ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಜು.28ರಂದು ಗುರುವಾರ ಆಟಿ ಅಮಾವಾಸ್ಯೆಯ ಪ್ರಯುಕ್ತ ವಿಶೇಷ ಆಚರಣೆ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

“ತುಳು ಜನಪದ ಸಂಸ್ಕೃತಿಗೂ ಆಟಿ ತಿಂಗಳಿಗೂ ಅವಿನಾಭಾವ ಸಂಬಂಧ. ಹಿಂದಿನ ಕಾಲದಆಟಿ ತಿಂಗಳ ಕಷ್ಟ ಮತ್ತು ಸಾಂಸ್ಕೃತಿಕ ಸತ್ವಗಳು ಇಂದಿನ ತಲೆಮಾರಿಗೆ ತಲುಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.ಈ ಮೂಲಕ ತುಳುನಾಡಿನ ಆಚರಣೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ನಾವೆಲ್ಲರೂ ಕೈ ಜೋಡಿಸಬೇಕಿದೆ.

ತುಳುನಾಡಿನಲ್ಲಿ ಬರುವ ಆಟಿ ಅಮಾವಾಸ್ಯೆಗೆ ಬಹಳ ಮಹತ್ವವಿದೆ. ಈ ದಿನ ತೀರ್ಥಸ್ನಾನ ಹಾಗೂ ಪಿತೃತರ್ಪಣಕ್ಕೂ ಪ್ರಸಿದ್ಧಿ.” ನಂತರ ಹಾಲೆ ಮರದ ಪರಿಚಯ ಹಾಗೂ ಮರದಕೆತ್ತೆ ಸಂಗ್ರಹದ ವಿಧಾನ ವಿವರಿಸುತ್ತಾ “ಹಾಲೆ ಮರದ ಬೇರು ಭೂಮಿಯ ಆಳಕ್ಕೆ ಹೋಗಿ ಮಣ್ಣಿನ ಸತ್ವ ಹೀರುವುದರಿಂದ ಮರದಲ್ಲಿ ಔಷಧೀಯ ಗುಣವು ಇರುತ್ತದೆ.

ಈ ಕಷಾಯ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯು ವೃದ್ಧಿಯಾಗುತ್ತದೆ. ಇದು ವೈಜ್ಞಾನಿಕವಾಗಿ ಸಂಶೋಧನೆಗೆ ಒಳಗಾಗಿರುವ ಸಂಗತಿಯಾಗಿದೆ. ನಸುಕಿನಲ್ಲಿ ಹಾಲೆ ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತಂದು ಕಡೆದು ಹಾಲನ್ನಾಗಿಸಿ ನೀಡುವ ಪದ್ಧತಿ ಪರಂಪರಾಗತವಾಗಿ ಬೆಳೆದು ಬಂದಿದೆ. ಇದರಲ್ಲಿ ಉಷ್ಣ ಪಿತ್ತದಿಂದ ಕೂಡಿದ ಅಂಶವಿರುವುದರಿಂದ ಮೆಂತೆ ತೆಂಗಿನಕಾಯಿಯ ಗಂಜಿ ತಿಂದು ದೇಹವನ್ನು ತಂಪಾಗಿಸುವುದು ಪದ್ದತಿ.

ಇಂತಹ ಮರಗಳ ಮಹತ್ವವನ್ನು ಅರಿತುಕೊಳ್ಳುವುದರಿಂದ ವೃಕ್ಷ ಸಂರಕ್ಷಣೆಯ ಜಾಗೃತಿಯೊಂದಿಗೆ ತುಳುನಾಡಿನ ಆಚರಣೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನುಮಕ್ಕಳಲ್ಲಿ ಎಳವೆಯಲ್ಲಿ ಮೂಡಿಸಬೇಕು.” ಇದರೊಂದಿಗೆ ಮನೆಮನೆಯಲ್ಲಿಯೂ ಕಷಾಯ ಕುಡಿದು ಸಂಭ್ರಮಿಸಿ ಆರೋಗ್ಯವಂತರಾಗಬೇಕು ಎಂದು ಶ್ರೀರಾಮ ಶಾಲೆಯ ಅಧ್ಯಾಪಕರಾದ ಸುಮಂತ್ ಆಳ್ವ ಎಂ ಆಟಿ ಅಮಾವಾಸ್ಯೆಯ ಮಹತ್ವ ತಿಳಿಸುತ್ತಾ ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಅಧ್ಯಾಪಕರಾದ ದೇವಿಕಾರವರು ಹಾಲೆಮರದ ತೊಗಟೆಯಿಂದ ಕಷಾಯ ತಯಾರಿಕೆಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.
ಕಾರ್ಯಕ್ರಮದಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಬಸ್ ಚಾಲಕ, ನಿರ್ವಾಹಕರಿಗೆ ಕಷಾಯ ವಿತರಣೆಯೊಂದಿಗೆ ಮೆಂತೆಗಂಜಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ರವಿ ರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನುಅಧ್ಯಾಪಕರಾದರಮ್ಯಜೆ ನಿರ್ವಹಿಸಿದರು. ಎಲ್ಲಾ ಅಧ್ಯಾಪಕರು ಸಹಕರಿಸಿದರು.
