ನವದೆಹಲಿ : ಭಾರತದಿಂದ ಬಾಸ್ಮತಿ ಅಕ್ಕಿಯನ್ನು ಖರೀದಿಸುವ ಪ್ರಮುಖ ರಾಷ್ಟ್ರಗಳಲ್ಲಿ ಇರಾನ್ ಕೂಡ ಒಂದಾಗಿದೆ. ದೇಶದ ಬಾಸ್ಮತಿ ಅಕ್ಕಿಯ ಒಟ್ಟು ರಫ್ತಿನಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಇರಾನ್ ಖರೀದಿಸುತ್ತಿತ್ತು. ಇರಾನ್ ಅಮೇರಿಕ ನಡುವಿನ ದಾಳಿಯ ಪ್ರಭಾವದಿಂದ ಪೆಟ್ರೋಲ್, ಡೀಸೆಲ್ ಮೇಲೆ ತೀವ್ರವಾದ ಎಫೆಕ್ಟ್ ಬಿದ್ದಿತ್ತು ಆದರೆ ಇದೀಗ ಇರಾನ್ ಸೇನಾಧಿಕಾರಿ ಹತ್ಯೆಯ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಇದರ ಪರಿಣಾಮ ಭಾರತದ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡದಂತೆ ತಡೆ ಹಿಡಿಯುವ ಸಾಧ್ಯತೆ ಎದುರಾಗಿದೆ. ಈಗಾಗಲೆ ದಾಳಿಯ ತೀವ್ರತೆ ಮುಗಿಲು ಮುಟ್ಟಿದ್ದು ಸದ್ಯದ ಪರಿಸ್ಥಿತಿಯಲ್ಲಿ ಇರಾನ್ಗೆ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡಲು ಸಾಧ್ಯವಿಲ್ಲ, ತಿಳಿಯಾಗುವವರೆಗೂ ರಫ್ತು ಬೇಡಿಕೆ ಸ್ವೀಕರಿಸಬೇಡಿ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ತನ್ನ ಸದಸ್ಯರಿಗೆ ತಿಳಿಸಿದೆ.
ಈಗಾಗಲೆ ಇರಾನ್ ವಿರುದ್ಧ ಅಮೆರಿಕಾ ಆರ್ಥಿಕ ದಿಗ್ಬಂಧನದ ಹಿನ್ನಲೆ ಕಳೆದ ವರ್ಷದ ರಫ್ತಿಗೆ ಸಂಬಂಧಿಸಿದಂತೆ ಸುಮಾರು 900 ಕೋಟಿ ಪಾವತಿ ಬಾಕಿ ಉಳಿದಿದೆ. ಡಿಸೆಂಬರ್ನಲ್ಲಿ ಇರಾನ್ ದೇಶವು ಭಾರತದಿಂದ 2 ಲಕ್ಷ ಟನ್ ಬಾಸ್ಮತಿಗಾಗಿ ಹೊಸ ಟೆಂಡರ್ ತೆರೆದಿತ್ತು ಹೀಗಾಗಿ ಭಾರತದ ಅಕ್ಕಿ ರಫ್ತುದಾರರು ವ್ಯಾಪಾರದಲ್ಲಿ ವೇಗ ಕಾಣಬಹುದೆಂದು ನಿರೀಕ್ಷಿಸಿದ್ದರು.ಆದರೆ ಈಗ ರಫ್ತಿಗೆ ತಡೆ ಬೀಳುವ ಸಾಧ್ಯತೆ ಇರುವುದರಿಂದ ಭಾರತದಲ್ಲಿ ಬಾಸ್ಮತಿ ಅಕ್ಕಿಯ ಸಂಗ್ರಹ ಹೆಚ್ಚಳಗೊಳ್ಳಲಿದೆ. ಇದರ ಪರಿಣಾಮ ಅಕ್ಕಿಯ ಬೆಲೆ ಕಡಿಮೆಯಾಗಿ ಬೆಳೆಗಾರರ ಆದಾಯಕ್ಕೆ ಹೊಡೆತ ಬೀಳಲಿದೆ” ಎಂದು ಎಐಆರ್ಎಇ ಅಧ್ಷಕ್ಷ ಎನ್.ಆರ್ ತಿಳಿಸಿದ್ದಾರೆ.

