ಕೈಕಂಬ : ಅಶಕ್ತರು ಮತ್ತು ತೊಂದರೆಗೀಡಾದವರಿಗೆ ಪರೋಕ್ಷವಾಗಿ ನೆರವಾಗುವಂತಹ ರಕ್ತದಾನ ಶಿಬಿರ ನಿಜಕ್ಕೂ ಶ್ಲಾಘನೀಯ. ಗುರುಪುರ ಬ್ಲಾಕ್ನ ಇನ್ನೂ ಕೆಲವು ಕಡೆ ರಕ್ತದಾನ, ನೇತ್ರ ಹಾಗೂ ದಂತ ತಪಾಸಣಾ ಶಿಬಿರ ಹಮ್ಮಿಕೊಂಡು ಜನರ ಆರೋಗ್ಯ ಪಾಲನೆ ದೃಷ್ಟಿಯಲ್ಲೂ ಪಕ್ಷವನ್ನು ಜನ ಗುರುತಿಸುವಂತಾಗಬೇಕು ಎಂದು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಮೊಹಿಯುದ್ದಿನ್ ಬಾವ ಅಭಿಪ್ರಾಯಪಟ್ಟರು. 
ಅಡ್ಡೂರಿಗೆ ಸಮೀಪದ ಕಾಂಜಿಲಕೋಡಿ ಬದ್ರುಲ್ ಹುದಾ ಜುಮ್ಮಾ ಮಸೀದಿ ಸಭಾಂಗಣದಲ್ಲಿ ಬುಧವಾರ ಗುರುಪುರ ಮಹಿಳಾ ಬ್ಲಾಕ್ ಕಾಂಗ್ರೆಸ್ ಹಾಗೂ ರೈಡರ್ಸ್ ಫ್ರೆಂಡ್ಸ್ ಕ್ಲಬ್ ಕಾಂಜಿಲಕೋಡಿ ಇವರು ಕೆಎಂಸಿ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ, ಉಚಿತ ವೈದ್ಯಕೀಯ ಶಿಬಿರ, ನೇತ್ರ, ದಂತ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು , “ಈ ದೇಶದಲ್ಲಿ ಕಾಂಗ್ರೆಸ್ಸಿನಿಂದ ಮಾತ್ರ ಕ್ರಾಂತಿಕಾರಿ ಬದಲಾವಣೆಯಾಗಿದೆ. ಮಹಿಳೆಯರಿಗೆ ಮೀಸಲಾಯಿತಿ ನೀಡಲಾಗಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಪಕ್ಷ ಪ್ರಮುಖ ಆದ್ಯತೆ ನೀಡಿದೆ. ಸಿಎಂ ಸಿದ್ದರಾಮಯ್ಯ ಚುನಾವಣೆಗೆ ಮುಂಚೆ ಜನರಿಗೆ ನೀಡಿದ್ದ 165 ಆಶ್ವಾಸನೆಗಳ ಪೈಕಿ 159ನ್ನು ಈಗಾಗಲೇ ಪೂರೈಸಿದ್ದಾರೆ. ರಾಜ್ಯ ಸರ್ಕಾರ ಪರಿಚಯಿಸಿರುವ ಎಲ್ಲ ಕ್ಷೇತ್ರಾಭಿವೃದ್ಧಿ ಕಾರ್ಯಕ್ರಮಗಳು ತನ್ನ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಲು ಕಟಿಬದ್ಧನಾಗಿದ್ದೇನೆ” ಎಂದರು.
ಒಂದೇ ಸೂರಿನಡಿ ಎಲ್ಲ ಕಾಯಿಲೆಗಳ ತಪಾಸಣೆ ಇಂತಹ ಶಿಬಿರಗಳಿಂದ ಮಾತ್ರ ಸಾಧ್ಯ. ಇದರಿಂದ ಬಡವರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಇದು ಸೌಹಾರ್ದತೆ ಮತ್ತು ಕಾಂಗ್ರೆಸ್ ಪಕ್ಷದ ಜಾತ್ಯಾತೀತ ನಿಲುವಿಗೆ ಸಂಕೇತವಾಗಿದೆ. ಇದೇ ರೀತಿ ನಮ್ಮೆಲ್ಲರಿಂದ ಗ್ರಾಮದ ಅಭಿವೃದ್ಧಿ ಕೆಲಸವಾಗಬೇಕು ಎಂದು ಜಿಪಂ(ಗುರುಪುರ) ಸದಸ್ಯ ಯು ಪಿ ಇಬ್ರಾಹಿಂ ತಿಳಿಸಿದರು.
ರಕ್ತದಾನ ಮಾಡಿ ಸತ್ತವರಿಲ್ಲ, ರಕ್ತವಿಲ್ಲದೆ ಸತ್ತವರಿದ್ದಾರೆ’. ರಕ್ತ ನಮಗೆ ದೈವದತ್ತವಾಗಿದ್ದು, ರಕ್ತ ಉತ್ಪಾದಿಸುವ ಫ್ಯಾಕ್ಟರಿಗಳು ಜಗತ್ತಿನ ಎಲ್ಲೂ ಇಲ್ಲ. ಪರಿಣಾಮ, ಯುವ ಜನಾಂಗ ಸಹಿತ ಎಲ್ಲರೂ ರಕ್ತದ ಮೌಲ್ಯ ತಿಳಿದುಕೊಳ್ಳುವ ಅಗತ್ಯವಿದೆ. ನಿಮ್ಮ ರಕ್ತ ಚೆಲ್ಲಬೇಡಿ ; ದಾನ ಮಾಡಿ” ಎಂದು ರಕ್ತದಾನದ ಮಹತ್ವದ ಬಗ್ಗೆ ಬಜಪೆ ಪೊಲೀಸ್ ಉಪ-ನಿರೀಕ್ಷಕ ರಾಜಾರಾಂ ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಗುರುಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಂದ್ರ ಬಿ. ಕಂಬಳಿ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕಾಧ್ಯಕ್ಷೆ ಶಾಲೆಟ್ ಪಿಂಟೋ, ಸುರತ್ಕಲ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ ಕಾಮತ್ ಸಂದರ್ಭೋಚಿತ ಮಾತನಾಡಿದರು. 
ತಾ.ಪಂ.ಸದಸ್ಯ ಸಚಿನ್ ಅಡಪ, ಯೂತ್ ಕಾಂಗ್ರೇಸ್ ಅಧ್ಯಕ್ಷ ಗಿರೀಶ್ ಆಳ್ವ,ಮಹಿಳಾ ಬ್ಲಾಕ್ ಅಧ್ಯಕ್ಷೆ ಸಲೀನಾ ಫೆರ್ನಾಂಡಿಸ್,ಮಹೀಳಾ ಕಾಂಗ್ರೇಸ್ ಉಪಾಧ್ಯಕ್ಷೆ ಜಯಲಕ್ಷ್ಮೀ ಸುಭಾಸ್ ಚಂದ್ರ, ಗುರುಪುರ ಗ್ರಾ.ಪಂ.ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ.ಎಮ್.ಉದಯ ಭಟ್, ಕೆ.ಪಿ.ಸಿ.ಸಿ ಸದಸ್ಯ ಯಶವಂತ ಶೆಟ್ಟಿ ,ಹನೀಪ್, ಅಹಮದ್ ಬಾವ, ಇಮ್ರಾನ್ ಅಡ್ಡೂರು, ಎಮ್.ಯಚ್. ಮೈಯದಿ, ರುಕ್ಮಯಾ ಉಳಿಯ, ಹಸನ್ ನೂಯಿ, ಗಂಜಿಮಠ ಗ್ರಾ.ಪಂ. ಅಧ್ಯಕ್ಷೆ ಮಾಲತಿ ಎಂ. ಕಂದಾವರ ಗ್ರಾ.ಪಂ.ಅಧ್ಯಕ್ಷೆ ವಿಜಯ ಸುವರ್ಣ ಮುಂತಾದವರು ಉಪಸ್ಥಿತರಿರುವರು. ಸುಭಾಸ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಕೆಲವು ಸಮಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಪೊನ್ನೆಲದ ಚಂದ್ರಾವತಿಗೆ ರೈಡರ್ಸ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಸಹಾಯಧನ ಚೆಕ್ಕನ್ನು ಅವರ ಗಂಡ ಸುಂದರ ಅವರಿಗೆ ವಿತರಿಸಲಾಯಿತು. ಉಚಿತ ಆರೋಗ್ಯ ಶಿಬಿರದಿಂದ ನೂರಾರು ಮಂದಿ ಲಾಭ ಪಡೆದರು.
*ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.






