ಎಡಪದವು : ದಕ್ಷಿಣ ಕನ್ನಡ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ(ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಸರಕಾರಿ ಪ್ರೌಢ ಶಾಲೆ ಗುರುಪುರ ಇದರ ಜಂಟಿ ಆಶ್ರಯದಲ್ಲಿ ಸೆ. 26ರಂದು ಎಡಪದವು ಸ್ವಾಮಿ ವಿವೇಕಾನಂದ ಪ್ರೌಢ ಶಾಲಾ ಮೈದಾನದಲ್ಲಿ `ಗುರುಪುರ ಹೋಬಳಿ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟ-2017′ ನಡೆಯಿತು.

ಬೆಳಿಗ್ಗೆ 10.30ಕ್ಕೆ ಧ್ವಜಾರೋಹಣ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿ ಪಂ (ಗುರುಪುರ) ಸದಸ್ಯ ಯು ಪಿ ಇಬ್ರಾಹಿಂ ದೀಪ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. “ಮಕ್ಕಳ ಕ್ರೀಡಾ ಪ್ರತಿಭೆ ಪ್ರಕಟಿಸಲು ಇದೊಂದು ಉತ್ತಮ ಅವಕಾಶ. ಸ್ಪರ್ಧೆಯಲ್ಲಿ ಸೋಲು ಗೆಲವು ಸಾಮಾನ್ಯವಾಗಿದ್ದು, ಸೋತವರು ಮಾನಸಿಕವಾಗಿ ಕುಗ್ಗದೆ ಮುಂದಿನ ಸ್ಪರ್ಧೆಗೆ ತಮ್ಮನ್ನು ಅಣಿಗೊಳಿಸಬೇಕು. ಕ್ರೀಡೆ ಸಹೋದರತೆಗೆ ಮತ್ತು ಮಕ್ಕಳ ದೈಹಿಕ ಶಕ್ತಿ ವೃದ್ಧಿಸುವಲ್ಲಿ ಸಹಕಾರಿಯಾಗಲಿದೆ” ಎಂಂದು ಉದ್ಗಾಟಕ ಯುಪಿ ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಗುರುಪುರ ಸರಕಾರಿ ಸಂಯುಕ್ತ ಕಿರಿಯ ಕಾಲೇಜಿನ ಪ್ರಾಂಶುಪಾಲ ವಾಸುದೇವ ಕಾಮತ್, ದೈಹಿಕ ಶಿಕ್ಷಕಿ ಜಯಲಕ್ಷ್ಮೀ ಶೆಟ್ಟಿ, ಗುರುಪುರ ಗ್ರಾ ಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್, ತಾ ಪಂ ಸದಸ್ಯ(ಗುರುಪುರ) ಸಚಿನ್ ಅಡಪ, ತಾಲೂಕು ದೈಹಿಕ ಸಂಯೋಜಕ ಗುರುನಾಥ ಬಾಗೇವಾಡಿ, ಶೇಖರ ಕಡ್ತಲ(ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ), ಪ್ರದೀಪ್, ಡೊನಾಲ್ಡ್ ಲೋಬೊ, ಸಿನಿಲ್ ಮಿರಾಂಡ(ನೋಡೆಲ್ ಶಿಕ್ಷಕ), ಶಾಂತಾರಾಂ(ಪ್ರಧಾನ ತೀರ್ಪುಗಾರ) ಸುಬ್ರಹ್ಮಣ್ಯ ಮುಗೇರಾಯ ಮೊದಲಾದವರು ಉಪಸ್ಥಿತರಿದ್ದರು. ಉದ್ಯಮಿ ಯಶವಂತ ಆಳ್ವ ವಿದ್ಯಾರ್ಥಿಗಳ ಸಹಿತ ಅತಿಥಿಗಳನ್ನು ಸ್ವಾಗತಿಸಿದರು. ಗುರುಪುರ ಸರ್ಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ರೂಪಾ ಡಿಎನ್ ವಂದನಾರ್ಪಣೆಗೈದರು.
ಕ್ರೀಡಾಕೂಟದಲ್ಲಿ ಹೋಬಳಿ ವ್ಯಾಪ್ತಿ 38 ಪ್ರೌಢ ಶಾಲೆಗಳ 520 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕ್ರೀಡಾಕೂಟಕ್ಕೆ ಕೆಎಂಎಫ್, ಎಂಆರ್ಪಿಎಲ್ ಮತ್ತು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಪ್ರಾಯೋಜಕತ್ವ ನೀಡಿತು.
