ಕೈಕಂಬ : ಇಂದು ಗುರುಪುರ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದ ಜಮಾಬಂಧಿ ಸಭೆಯಲ್ಲಿ 2016-17ರ ಸಾಲಿನಲ್ಲಿ ಗ್ರಾಮದಲ್ಲಿ ಗ್ರಾಪಂ ವತಿಯಿಂದ ನಡೆಲಾದ ಉದ್ಯೋಗ ಖಾತರಿ ಯೋಜನೆ ಹಾಗೂ ಸರ್ಕಾರದ ಇತರ ಯೋಜನೆಗಳಡಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಯಿತು.

ಗ್ರಾಮಸ್ಥರಿಂದ ಇದೇ ರೀತಿ ಸಹಕಾರ ವ್ಯಕ್ತವಾದಲ್ಲಿ ಮುಂದೆಯೂ ಗ್ರಾಮದಲ್ಲಿ ಹೆಚ್ಚೆಚ್ಚು ಅಭಿವೃದ್ಧಿ ನಡೆಸಲು ಸುಲಭವಾಗಲಿದೆ ಎಂದು ಜಿಪಂ ಗುರುಪುರ ಸದಸ್ಯ ಯು ಪಿ ಇಬ್ರಾಹಿಂ, ರಸ್ತೆ ನಿರ್ಮಾಣದಂತಹ ಕಾಮಗಾರಿಗಳಿಗೆ ಸಾರ್ವಜನಿಕರು ಜಾಗ ನೀಡಲು ಸಹಕರಿಸಿದಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಕುಡಿಯುವ ನಳ್ಳಿ ನೀರಿಗೆ ಮೀಟರ್ ಅಳವಡಿಸಲು ಗ್ರಾಮಸ್ಥರು ಆಗ್ರಹಿಸಿದರು. ಆದರೆ ಇದು ಗ್ರಾಮದ ಕಾಮಗಾರಿ ಅನಾವರಣ ಜಮಾಬಂಧಿ ಸಭೆಯಾಗಿರುವುದರಿಂದ ಇದರಲ್ಲಿ ಮೀಟರ್ ಅಳವಡಿಸುವ ವಿಷಯದಲ್ಲಿ ಚರ್ಚಿಸಲು ಅವಕಾಶವಿಲ್ಲ. ಅದನ್ನು ಮುಂದಿನ ಗ್ರಾಮಸಭೆಯಲ್ಲಿ ಚರ್ಚಿಸಬಹುದೆಂದು ಗ್ರಾಪಂ ಸದಸ್ಯ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಯಶವಂತ ಶೆಟ್ಟಿ ಮತ್ತು ಯು ಪಿ ಇಬ್ರಾಹಿಂ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಕಚೇರಿಯ ಆವರಣದಲ್ಲಿ ಸ್ವ-ಸೇವಾ ಸಂಘಗಳ ಮಹಿಳೆಯರಿಗೆ ಉಪ್ಪಿನಕಾಯಿ ಹಾಗೂ ಇತರ ಗೃಹೋಪಯೋಗಿ ಸೊತ್ತು ಉತ್ಪಾದನೆ ಬಗ್ಗೆ ತರಬೇತಿ ನೀಡುವ `ಸಂಜೀವಿನಿ’ ಹೆಸರಿನ ಕಟ್ಟಡವೊಂದರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಇದು ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ 14 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.
ತಾ ಪಂ ಕಾರ್ಯನಿರ್ವಹಣಾಧಿಕಾರಿ ಸದಾನಂದ ಅಧ್ಯಕ್ಷತೆ ವಹಿಸಿದ್ದರು ಸಭೆಯಲ್ಲಿ ಪಂಚಾಯತ್ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್, ಪಿಡಿಒ ಅಬೂಬಕ್ಕರ್, ಜಿ ಪಂ ಸದಸ್ಯ ಯು ಪಿ ಇಬ್ರಾಹಿಂ, ಸದಾಶಿವ ಶೆಟ್ಟಿ, ಯಶವಂತ ಶೆಟ್ಟಿ, ತಾಲೂಕು ಇಂಜಿನಿಯರ್ ಪ್ರದೀಪ್ ಭಟ್,ಕೆ.ಡಿ.ಪಿ.ಸದಸ್ಯ ಜಿ .ಮಹಮ್ಮದ್ ಉಂಞ್ಙ ಹಾಗೂ ಗ್ರಾಪಂನ ಇತರ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
