ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮತ್ತು ಪತ್ರಕರ್ತೆ ಅಮೃತಾ ರಾಯ್ ಪ್ರೇಮ ವ್ಯವಹಾರದ ಬಗ್ಗೆ ಅಮೃತಾ ಪತಿ ಆನಂದ್ ಪ್ರಧಾನ್ ನೋವಿನ ನಡುವಲ್ಲೂ ಬೆಸ್ಟ್ ಆಫ್ ಲಕ್ ಹೇಳಿದ್ದಾರೆ. ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ ಅಮೃತಾ ಗಂಡ ಆನಂದ್ ಪ್ರಧಾನ್ ತನಗೆ ಮಾನಸಿಕ ಸ್ಥೈರ್ಯ ತುಂಬಲು ಸ್ನೇಹಿತರಿಗೆ ಮನವಿ ಮಾಡಿಕೊಂಡಿದ್ದಾರೆ.

ಇಂಡಿಯನ್ ಇನ್ಸ್’ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಶನ್’ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಆನಂದ್ ಪ್ರಧಾನ್ ಬಹಳ ಭಾವುಕರಾಗಿದ್ದಾರೆ.
“ನಾನೀಗ ತುಂಬಾ ಸಂಕಷ್ಟದ ಗಳಿಗೆಯನ್ನ ಎದುರಿಸುತ್ತಿದ್ದೇನೆ. ಬಹಳ ಕಾಲದಿಂದ ನಾನು ಮತ್ತು ಅಮೃತಾ ಪ್ರತ್ಯೇಕ ಜೀವನ ನಡೆಸುತ್ತಿದ್ದೆವು. ಪರಸ್ಪರ ಸಮ್ಮತಿ ಮೇರೆ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೇವೆ. ಕಾನೂನಿನ ಪ್ರಕಾರವಾಗಿ ಸಾಗಬೇಕಿರುವುದರಿಂದ ಅದರದ್ದೇ ಆದ ಸಮಯ ಹಿಡಿಯುತ್ತದೆ. ಆದರೆ, ನಾವು ಮುಂಚೆ ಹೊಂದಿದ್ದ ಸಂಬಂಧ ಬಹಳ ಹಿಂದೆಯೇ ಮುಗಿದುಹೋಗಿತ್ತು” ಎಂದು ಆನಂದ್ ಪ್ರಧಾನ್ ತಮ್ಮ ಫೇಸ್’ಬುಕ್ ಪ್ರೊಫೈಲ್’ನಲ್ಲಿ ಅಪ್’ಡೇಟ್ ಮಾಡಿದ್ದಾರೆ.
“ತನ್ನ ಭವಿಷ್ಯದ ಬಗ್ಗೆ ನಿರ್ಧರಿಸಲು ಅಮೃತಾ ಸಂಪೂರ್ಣ ಸ್ವತಂತ್ರಳಿದ್ದಾಳೆ. ಆಕೆಯ ನಿರ್ಧಾರವನ್ನ ಗೌರವಿಸುತ್ತೇನೆ. ಆಕೆಯ ಭವಿಷ್ಯ ಜೀವನಕ್ಕೆ ನಾನು ಶುಭ ಹಾರೈಸುತ್ತೇನೆ, ನನ್ನ ಅನೇಕ ಸ್ನೇಹಿತರು, ಹಿತೈಷಿಗಳು, ವಿದ್ಯಾರ್ಥಿಗಳು, ಸಹೋದ್ಯೋಗಿಗಳು ನನ್ನ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿರುವುದು ನನಗೆ ಗೊತ್ತಿದೆ. ಅವರೆಲ್ಲರೂ ನನ್ನೊಂದಿಗಿದ್ದಾರೆ. ಈ ಕಷ್ಟದ ಗಳಿಗೆಗಳಿಂದ ಹೊರಬರುತ್ತೇನೆ ಎಂಬ ವಿಶ್ವಾಸವಿದೆ. ನೀವೆಲ್ಲಾ ನನ್ನ ಗೌಪ್ಯತೆಯನ್ನ ಗೌರವಿಸುತ್ತೀರೆಂದು ಅಪೇಕ್ಷಿಸುತ್ತೇನೆ. ಇಂಥ ಸಂದರ್ಭಗಳಲ್ಲಿ ನಿಜವಾದ ಸ್ನೇಹಿತರನ್ನು ನಾವು ಗುರುತಿಸಬಹುದು, ಗಂಡು-ಹೆಣ್ಣಿನ ಸಂಬಂಧದ ಸೂಕ್ಷ್ಮಗಳನ್ನ ನೋಡಲು ಸಿದ್ಧರಿಲ್ಲದ; ಶೋಷಣೆಯ ಮತ್ತು ಗಂಡಿನ ದೃಷ್ಟಿಕೋನದಲ್ಲೇ ಮಹಿಳೆಯರ ಅಸ್ತಿತ್ವ ಮತ್ತು ವ್ಯಕ್ತಿತ್ವನ್ನ ಶೋಧಿಸುವ; ಮಹಿಳೆಯನ್ನ ಖಾಸಗಿ ಸ್ವತ್ತು ಅಥವಾ ಮಗು ಹೆರುವ ಯಂತ್ರವಾಗಿ ನೋಡುವ; ಮಹಿಳೆಯರ ಘನತೆಗೆ ಬೆಲೆ ಕೊಡದವರು – ಇವರೆಲ್ಲರಿಗೂ ಈ ಪ್ರಕರಣ ಒಂದು ರೀತಿ ಹಾಸ್ಯದ, ಗಾಸಿಪ್ಪಿನ ವಿಷಯವಾಗುತ್ತದೆ. ಇದಷ್ಟೇ ಅವರಿಗೆ ಗೊತ್ತಿರುವುದು. ಇವರ ಚಿಂತನೆ ಮತ್ತು ರಾಜಕೀಯದ ಪರಿಧಿ ಇಷ್ಟೆಯೇ. ಇವರೆಲ್ಲರಿಂದ ಇದಕ್ಕಿಂತ ಹೆಚ್ಚಿನದನ್ನ ನಾನು ನಿರೀಕ್ಷಿಸುತ್ತಿಲ್ಲ” – ಹೀಗೆಂದು ಅಮೃತಾ ರಾಯ್ ಪತಿ ಆನಂದ್ ಪ್ರಧಾನ್ ಹೇಳಿಕೊಂಡಿದ್ದಾರೆ.



