ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
ಬಂಟ್ವಾಳ: ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ಕಲ್ಲಡ್ಕ ಮ್ಯೂಸಿಯಂನ ಸಂಸ್ಥಾಪಕ, ಬಾಲವಿಕಾಸ ಶಾಲೆಯ ಹಿರಿಯ ವಿದ್ಯಾರ್ಥಿ ಮೊಹಮ್ಮದ್ ಯಾಸಿರ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಬಾಲವಿಕಾಸ ಶಾಲೆಯು ಇದೀಗ ಎಲ್ಲಾ ಸೌಕರ್ಯಗಳನ್ನು ಅಳವಡಿಸಿಕೊಂಡು ಬೆಳೆಯುತ್ತಿದೆ. ವಿಸ್ತಾರವಾದ ಆಟದ ಮೈದಾನವನ್ನು ಹೊಂದಿದ್ದು ಕ್ರೀಡಾಪಟುಗಳಿಗೆ ಉತ್ತಮ ಅವಕಾಶ ನೀಡುತ್ತಿದೆ, ಶಾಲಾ ವಿದ್ಯಾರ್ಥಿಗಳು ಈ ಸೌಕರ್ಯಗಳನ್ನು ಬಳಸಿಕೊಂಡು ಕ್ರೀಡೆಯಲ್ಲಿ ಉತ್ತಮ ಸಾಧನೆಗೈಯುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆ ಅವರು ಮಾತನಾಡಿ “ಇಂದಿನ ಮಕ್ಕಳಿಗೆ ವ್ಯಾಯಾಮದ ಅಗತ್ಯವಿದೆ, ಅದು ಕ್ರೀಡೆಯಲ್ಲಿ ದೊರೆಯುತ್ತದೆ. ಶಿಕ್ಷಣ ಎಂದರೆ ಕೇವಲ ಅಂಕಗಳನ್ನು ಗಳಿಸುವುದು ಮಾತ್ರವಲ್ಲ, ಪ್ರತಿಭೆಯ ಅನ್ವೇಷಣೆಯೂ ಶಿಕ್ಷಣವಾಗಿದೆ” ಎಂದರು. ಕ್ರೀಡೋತ್ಸವದಲ್ಲಿ ಕ್ರೀಡಾ ಜ್ಯೋತಿಯ ಆಗಮನ ಹಾಗೂ ಆಕರ್ಷಣೀಯ ಪಥಸಂಚಲನವು ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಬಾಲವಿಕಾಸ ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಜೆ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ. ಶೆಟ್ಟಿ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ದಿನಕರ್ ಪೂಜಾರಿ ಹಾಗೂ ವಿಶಾಲಾಕ್ಷಿ ಎಚ್ ಆಳ್ವ ಸಹಕರಿಸಿದರು. ಶಿಕ್ಷಕಿ ಮೋಹಿನಿ ಎ. ರೈ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ ಶೆಟ್ಟಿ ವಂದಿಸಿದರು. ಶಿಕ್ಷಕಿಯರಾದ ರಶ್ಮಿ ಫೆರ್ನಾಂಡಿಸ್ ಹಾಗೂ ಯಜ್ಞೇಶ್ವರಿ ಎನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.