ಇರುವೆಗಳು ಕಚ್ಚಿದ್ದಕ್ಕೆ 3ದಿನದ ಹಸುಗೂಸು ಬಲಿ
ಲಕ್ನೋ: ಇರುವೆಗಳು ಕಚ್ಚಿದ್ದರಿಂದ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿದ್ದ (ಎನ್ಐಸಿಯು) ಮೂರು ದಿನದ ಹಸುಗೂಸು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮಹಿಳಾ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ. ಅಲ್ಲದೇ ವೈದ್ಯರು ನಮ್ಮ ಬಳಿ 6,500 ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸುವ ಮೂಲಕ ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಲ್ಪಹಾರ್ ತಹಸಿಲ್ ಪ್ರದೇಶದ ಮುಧರಿ ಗ್ರಾಮದ ನಿವಾಸಿ ಸುರೇಂದ್ರ ರೈಕ್ವಾರ್ ಅವರು ಮೇ 30 ರಂದು ತಮ್ಮ ಗರ್ಭಿಣಿ ಪತ್ನಿ ಸೀಮಾ ಅವರೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಈ ದಂಪತಿಗೆ ಗಂಡು ಮಗುವಿಗೆ ಜನಿಸಿತ್ತು. ಆದರೆ ನವಜಾತ ಶಿಶು ಅಸ್ವಸ್ಥಗೊಂಡ ಹಿನ್ನೆಲೆ ವೈದ್ಯರು ವಿಶೇಷ ನವಜಾತ ಶಿಶು ನಿಗಾ ಘಟಕಕ್ಕೆ ದಾಖಲಿಸಿದ್ದರು.
ವಾರ್ಡ್ ಬಹಳ ಕೊಳಕಾಗಿದ್ದು, ಇರುವೆಗಳಿರುವ ಬಗ್ಗೆ ಈ ಮುನ್ನವೇ ಸಿಬ್ಬಂದಿ ಹಾಗೂ ವೈದ್ಯರಿಗೆ ದೂರು ನೀಡಿದ್ದರೂ ಗಮನಹರಿಸಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಈ ಘಟನಾ ಸ್ಥಳಕ್ಕೆ ಆಗಮಿಸಿದ ಎಸ್ಡಿಎಂ ಸದರ್ ಜಿತೇಂದ್ರ ಕುಮಾರ್ ಅವರು, ಮುಖ್ಯ ವೈದ್ಯಕೀಯ ಅಧೀಕ್ಷಕರನ್ನು(ಸಿಎಂಎಸ್) ತನಿಖೆಗೆ ಒಳಪಡಿಸುವಂತೆ ಆದೇಶಿಸಿದ್ದಾರೆ.