ಅಜೆಕಾರು: ಕಡ್ತಲ ಸಿರಿಬೈಲಿನಲ್ಲಿ ಜನವರಿ ೨೪ ರಂದು ನಡೆಯುವ ಮೂರನೇ ಆದಿಗ್ರಾಮೋತ್ಸವ ಗ್ರಾಮ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಮೌರೀಸ್ ತಾವ್ರೋ ಅವರ ತುಳು-ಕನ್ನಡ- ಕೊಂಕಣಿ ತ್ರಿಭಾಷಾ ಕವನ ಸಂಕಲನ ಕವಿತಾ ಕಿರಣ ವನ್ನು ಅಜೆಕಾರು ಚರ್ಚ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಗುರುಗಳಾದ ಸುನೀಲ್ ಡಿಸಿಲ್ವಾ ಅವರು ಲೋಕಾರ್ಪಣೆಗೊಳಿಸಿದರು.
ಸುಮಾರು ೫೦ ವರ್ಷಗಳ ಹಿಂದಿನ ಸಮಾಜಕ್ಕೆ ಕನ್ನಡಿ ಹಿಡಿಯುವ ಇಂದಿಗೂ ಪ್ರಸ್ತುತವಾಗುವ ಮೂರು ಭಾಷೆಯ ಚೇತೋಹಾರಿಯಾದ ಕವನಗಳು ಕವಿತಾ ಕಿರಣದಲ್ಲಿವೆ. ಅಂದಿನ ಕಾಲದಲ್ಲಿ ಬರೆದ ಕವನಗಳನ್ನು ಇದುವರೆಗೆ ಕಾಪಾಡಿಕೊಂಡು ಈಗ ಶ್ರೀ ಮಾಧ್ಯಮ ಮತ್ತು ಪ್ರಕಾಶನದ ಮೂಲಕ ಹೊರ ತರುತ್ತಿರುವುದು ಸಂತೋಷ ಎಂದು ಅವರು ಹೇಳಿದರು. ಸಂಕಲನದಲ್ಲಿ ಅವರನ್ನು ಆಕರ್ಷಿಸಿದ ಕವನಗಳನ್ನು ಲಯಬದ್ಧವಾಗಿ ಓದಿ ಗಮನಸೆಳೆದರು.
ಕವಿತೆ ಬರೆಯುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಮೌರೀಸ್ ಅವರಿಗೆ ಆ ಕಲೆ ಒಲಿದಿದೆ, ಅವರ ಇನ್ನಷ್ಟು ಕೃತಿಗಳು ಪ್ರಕಟವಾಗಲಿ ಎಂದು ಕ್ಯಾಥಲಿಕ್ ಎಜ್ಯುಕೇಶನ್ ಸೊಸೈಟಿಯ ನಿರ್ದೇಶಕ, ಧರ್ಮಗುರುಗಳಾದ ವಿನ್ಸೆಂಟ್ ಕ್ರಾಸ್ಟಾ ಹೇಳಿದರು.ಊರಿನ ಪ್ರತಿಭೆಗಳಿಗೆ ಊರಿನವರು ಮೊದಲು ಪ್ರೋತ್ಸಾಹ ನೀಡ ಬೇಕು. ಮತ್ತೊಬ್ಬರ ಸಾಧನೆಯನ್ನು ಶುದ್ಧ ಮನಸ್ಸಿನಿಂದ ಪ್ರೋತ್ಸಾಹಿಸುವ ಗುಣ ನಮ್ಮಲ್ಲಿರ ಬೇಕು. ಮೌರೀಸ್ ಅವರೊಬ್ಬ ದಾರ್ಶನಿಕ ಶಿಕ್ಷಕ ಎಂದು ಅಧ್ಯಕ್ಷತೆ ವಹಿಸಿದ್ದ ಶ್ರೀ ಮಾಧ್ಯಮ ಮತ್ತು ಪ್ರಕಾಶನದ ಮುಖ್ಯಸ್ಥ ಡಾ.ಶೇಖರ ಅಜೆಕಾರು ಅಭಿಪ್ರಾಯಪಟ್ಟರು.
ಸಾಹಿತ್ಯದ ಒಲವು, ಸಾಂಸ್ಖೃತಿಕ ಆಸಕ್ತಿಗಳು ಕಡಿಮೆ ಆಗುತ್ತಿರುವ ಕಾಲಘಟ್ಟದಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಮಾಡುತ್ತಿರುವವರಿಗೆ ಸೂಕ್ತ ಪ್ರೋತ್ಸಾಹದ ನೀಡ ಬೇಕು ಎಂದು ವಿಶ್ರಾಂತ ದ.ಕ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ಕರುಣಾಚಂದ್ರ.ಪಿ ಕರೆ ನೀಡಿದರು.೫೦ ವರ್ಷಗಳ ಬಳಿಕ ನನ್ನದೊಂದು ಕೃತಿ, ನಾನು ಆರಾಧಿಸುತ್ತಾ ಬಂದಿರುವ ಅಜೆಕರಿನ ಧಾರ್ಮಿಕ ಕೇಂದ್ರದಲ್ಲಿ ಕೇಂದ್ರದ ಗುರುಗಳ ಮುತುವರ್ಜಿಯಿಂದ ಚರ್ಚ್ನ ವಾರ್ಷಿಕ ಹಬ್ಬದ ಪೂಜಾ ಸಂದರ್ಭದಲ್ಲಿ ಬಿಡುಗಡೆ ಆಗುತ್ತಿರುವುದು ಸಾರ್ಥಕ ಭಾವವನ್ನು ಉಂಟುಮಾಡಿದೆ ಎಂದು ತ್ರಿಭಾಷಾ ಕವಿ ಮೌರಿಸ್ ತಾವ್ರೋ ಹೇಳಿದರು.
ಚರ್ಚ್ನ ಪಾಲನಾ ಮಂಡಳಿಯ ಉಪಾಧ್ಯಕ್ಷ, ಮರ್ಣೆ ಗ್ರಾಮ ಪಂಚಾಯತ್ ನೂತನ ಸದಸ್ಯ ಜಾನ್ ಟೆಲಿಸ್ ಅವರು ಸ್ವಾಗತಿಸಿದರು.ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಲೀನಾ ಮಸ್ಕರೇನಸ್ ವಂದಿಸಿದರು. ಪ್ರಕಾಶ್ ಡಿಸೋಜಾ, ಅಲೆಕ್ಸ್ ಡಿಸೋಜಾ ಸಹಿತ ಗಣ್ಯರು ಉಪಸ್ಥಿತರಿದ್ದರು.
