ಮೂಜೂರು ಹಿರ್ಗಾನದಲ್ಲಿ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನ ಸಾಹಿತ್ಯ ಸಮ್ಮೇಳನ ಊರಿಗೆ ಶೋಭೆ ತರುತ್ತದೆ- ಅಶೋಕ್ ನಾಯಕ್
ಅಜೆಕಾರು: ಮುಜೂರಿನಲ್ಲಿ ಮೊದಲ ಸಾಹಿತ್ಯ ಸಮ್ಮೇಳನ ಬಿ.ಎಂ.ಅನುದಾನಿತ ಶಾಲೆಯಲ್ಲಿ ನಡೆಯುತ್ತಿರುವುದು ನಮಗೆ ಸಂತೋಷ. ಸಾಹಿತ್ಯ ಮತ್ತು ಸಾಂಸ್ಖೃತಿಕ ಸಮ್ಮೇಳನಗಳು ಊರಿಗೆ ಶೋಭೆ ತರುತ್ತವೆ ಎಂದು ಶ್ರೀ ಆದಿಲಕ್ಷ್ಮಿ ಮಹಾಲಕ್ಷ್ಮಿ ದೇವಸ್ಥಾನ ಹಿರ್ಗಾನದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್ ಹೇಳಿದರು.
ಅವರು ಮೂಜೂರು- ಹಿರ್ಗಾನದಲ್ಲಿ ಆದಿಗ್ರಾಮೋತ್ಸವ ಸಮಿತಿ, ಅಖಿಲಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಲಯನ್ಸ್ ಕ್ಲಬ್ ಮುನಿಯಾಲು ಸಂಸ್ಥೆಗಳ ಆಶ್ರಯದಲ್ಲಿ ಹಿರ್ಗಾನ ಬಿ.ಎಂ ಶಾಲೆಯ ರಾಮಕೃಷ್ಣ ಕಡಂಬ ಮತ್ತು ಶಿಲ್ಪಿ ವಾದಿರಾಜ ಆಚಾರ್ಯ ಸ್ಮರಣಾವೇದಿಕೆಯಲ್ಲಿ ಸಂಪನ್ನ ಗೊಂಡ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳನಾಧ್ಯಕ್ಷರಿಗೆ ಶಾಲು ಹೊದಿಸಿ ಗೌರವಿಸುವ ಮೂಲಕ ಉದ್ಘಾಟಿಸಿದರು.
ಶಾಲೆಯಲ್ಲಿ ಕನ್ನಡದ ಕಾರ್ಯಕ್ರಮಗಳು ನಿರಂತರ ನಡೆದರೆ ಮಕ್ಕಳಲ್ಲಿ ಸಾಹಿತ್ಯ ಪ್ರಜ್ಞೆ ಜಾಗೃತವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ನನ್ನೂರು ಸಂತೋಷ, ಸಮೃದ್ಧಿಯಿಂದ ಕೂಡಿರ ಬೇಕು. ಹಿರಿಯರು ಹಾಕಿಕೊಟ್ಟ ಅಭಿವೃದ್ಧಿಯ ಮಂತ್ರಗಳ ಆಧಾರದಲ್ಲಿಯೇ ಹೆಚ್ಚಿನ ಪ್ರಗತಿಯನ್ನು ಸಾಧಿಸ ಬೇಕು ಎಂದು ಸಮ್ಮೇಳನದ ಆಶಯ ಭಾಷಣ ಮಾಡಿದ ಪತ್ರಕರ್ತ, ವಿಶ್ವವಾಣಿ ಪತ್ರಿಕೆಯ ಮಂಗಳೂರು ಬ್ಯೂರೋ ಮುಖ್ಯಸ್ಥ ಜಿತೇಂದ್ರ ಕುಂದೇಶ್ವರ ಹೇಳಿದರು.
ಸಮ್ಮೇಳನಾಧ್ಯಕ್ಷ ಮಂಜುನಾಥ ಬೊರ್ಗಲ್ಗುಡ್ಡೆ ಅವರು ಆಧುನಿಕ, ತಾಂತ್ರಿ, ವೇಗದ ಈ ಯುಗದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಪೊಳ್ಳು ಸಮಾಜ ನಿರ್ಮಾಣವಾಗುವ ಆತಂಕವಿದೆ. ನಮಗೆ ಇಷ್ಟವಾಗುವಂತೆ ಬಂದ ಅಭಿಪ್ರಾಯಗಳನ್ನು ಹಿಂದೆ ಮುಂದೆ ನೋಡದೆ, ತಾನು ಇಷ್ಟ ಪಡುವ ಬರೆಹಗಾರ ಬರೆದ ಲೇಖನವನ್ನು ವಿಮರ್ಶಿಸದೆ ಲೈಕು, ಕಮೆಂಟು, ಶೇರು, ಫಾರ್ವರ್ಡ್ ಮಾಡುವ ಮೂಲಕ ಸುಳ್ಳನ್ನು ಹರಡುವ ಕಟ್ಟ ಸಂಪ್ರದಾಯ ಬೆಳೆಯುತ್ತಿದೆ. ಆ ಕುರಿತ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.
ಉದ್ಯಮಿ ಚೇತನ ಕುಮಾರ್ ಕೊರಳ, ಸಹಕಾರಿ ದುರೀಣ ಶಿರಿಯಣ್ಣ ಶೆಟ್ಟಿ ಮಾಜೂರು, ಶಾಲಾ ಮುಖ್ಯೋಪಾಧ್ಯಾಯಿನಿ ಆಶಾ ಕ್ಲೇರಾ ವಾಜ್, ಕಾಪು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಮರಾಠೆ, ಹಾಡಿ ಗರಡಿ ಆಡಳಿತ ಆಡಳಿತ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಶೆಣೈ, ಕಾರ್ಕಳ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಆಧ್ಯಕ್ಷ ರಮಾನಂದ ಶೆಣೈ , ಹೆಬ್ರಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ ಪುಜಾರಿ, ಯುವ ಉದ್ಯಮಿ ಜಗದೀಶ ಶೆಟ್ಟಿ ದೆಪ್ಪುತ್ತೆ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಉದಯಕುಮಾರ್ ಕೆ.ಪಿ, ಸಣ್ಣ ಉಳಿತಾಯದ ಮಹಿಳಾ ಸಾಧಕಿ. ಕೆ.ಪಿ ಪದ್ಮಾವತಿ ಯುವವಾಗ್ಮಿ ಪ್ರದ್ಯುಮ್ನಮೂರ್ತಿ ಕಡಂದಲೆ, ಸಮಿತಿಯ ಮಕ್ಕಳ ವಿಭಾಗದ ಸುನಿಧಿ ಎಸ್.ಅಜೆಕಾರು, ಸುನಿಜ ಅಜೆಕಾರು, ಮೂಜೂರು ಹಿರ್ಗಾನ ಪ್ರೌಢಶಾಲೆಯ ಶಿಕ್ಷಕ ಸಂತೋಷ ಕುಮಾರ್ ಶೆಟ್ಟಿ, ಮೊದಲಾದವರು ಅತಿಥಿಗಳಾಗಿದ್ದರು. ಹೆಬ್ರಿ ಎಸ್ಆರ್ ಶಿಕ್ಷಣ ಸಮೂಹ ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಸಮಿತಿಯ ಪ್ರಧಾನ ಕಾರ್ಯದರ್ಶಿ ದೀಪಕ್.ಎನ್ ದುರ್ಗಾ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನ ಸಂಘಟಕ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಅಧ್ಯಕ್ಷ ಡಾ.ಶೇಖರ ಅಜೆಕಾರು ಪ್ರಸ್ತಾವಿಕ ಮಾತನಾಡಿದರು. ಹಿರ್ಗಾನ ಪಂಚಾಯತ್ ಅಧ್ಯಕ್ಷ ಸಂತೋಷ ಶೆಟ್ಟಿ ಸ್ವಾಗತಿಸಿದರು. ಸಮ್ಮೇಳನ ಸಮಿತಿ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಅಜೆಕಾರು ವಂದಿಸಿದರು. ಯುವ ಕವಯತ್ರಿ ಕಾವ್ಯ ಕಣಂಜಾರು ಕಾರ್ಯಕ್ರಮ ನಿರೂಪಿಸಿದರು.
ಕವಿಗೋಷ್ಠಿ: ಉದಯೋನ್ಮುಖ ಭರವಸೆಯ ಕವಿ ಬೆಂಗಳೂರಿನ ಶ್ರೀನಿವಾಸ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಯುವ ಸಾಧಕ ಪ್ರದ್ಯುಮ್ನಮೂರ್ತಿ ಕಡಂದಲೆ ಉದ್ಘಾಟಿಸಿದರು. ವಿಷ್ಣುಪ್ರಸಾದ್ ಕೊಡಿಬೆಟ್ಟು, ಅಶ್ವಿನಿ ಕುಲಾಲ್ ಕಡ್ತಲ, ಚೈತ್ರ ಕಬ್ಬಿನಾಲೆ, ಡಾ.ಸುಮತಿ ಪ್ರಭು ಮೊದಲಾದವರು ತಮ್ಮ ಕಾವ್ಯ ವಾಚನ ಮಾಡಿದರು. ಶಿಕ್ಷಕ ಅಣ್ಣಪ್ಪ ವಂದಿಸಿದರು. ಪುಟಾಣಿ ವಂಡರ್ ಶೋ: ೬ ವರ್ಷದ ಒಳಗಿನ ಮಕ್ಕಳ ಪ್ರತಿಭಾ ಪ್ರದರ್ಶನದಲ್ಲಿ ವಿಶ್ವದಾಖಲೆಯ ಆದ್ಯ ಎ.ಮಂಗಳೂರು, ಕೊರಗಜ್ಜ ಹಾಡಿನ ಖ್ಯಾತಿಯ ಮಾಸ್ಟರ್ ಕಾರ್ತಿಕ್ ಹಿರ್ಗಾನ, ೨ ವರ್ಷದ ಬಾಲಕಿ ಸಾನ್ನಿಧ್ಯ್ಯ ಕವತ್ತಾರು, ತನಿಶಾ ಕಾರ್ಕಳ, ಆದ್ಯ ಕಾರ್ಕಳ, ತನ್ವಿ ನಾಯಕ್ ಬೆಂಗಳೂರು, ಸುನಿಜ ಅಜೆಕಾರು ಪ್ರದರ್ಶನ ನೀಡಿ ಗಮನಸೆಳೆದರು. ಸುನಿಧಿ ಎಸ್.ಅಜೆಕಾರು ಕಾರ್ಯಕ್ರಮ ನಿರೂಪಿಸಿದರೆ, ಬಾಲಕರಾದ ದಿಯಾ ಉದಯಕುಮಾರ್ ಮತ್ತು ಪ್ರದ್ಯಮ್ನ ಆಚಾರ್ಯ ಪುಟಾಣಿಗಳನ್ನು ಗೌರವಿಸಿದರು.
ಮುಂಬಯಿಯ ಕನ್ನಡ ಶಿಕ್ಷಕ ದಂಪತಿ ಮಾಜಿವಾಡ ಆದಿಶಕ್ತಿ ಕನ್ನಡ ಶಾಲೆಯ ಲೋಕನಾಥ ಜೈನ್ ಮತ್ತು ಸುಜಯ ಎಲ್ ಜೈನ್ ಅವರನ್ನು ಭಾರತ ಸಾಧನಾ ದಂಪತಿ ಗೌರವ ನೀಡಿ ಸನ್ಮಾನಿಸಲಾಯಿತು. ಸ್ವಚ್ಚ ಕಾರ್ಕಳ ಬ್ರಿಗೇಡ್, ಫ್ರೆಂಡ್ಸ್ ಕ್ಲಬ್ (ರಿ) ಕುಂದಾಪುರ ಮತ್ತು ಶಾಂತಿನಿಕೇತನ ಯುವ ವೃಂದ ಕುಚ್ಚೂರು ಕುಡಿಬೈಲು ಈ ಸಂಸ್ಥೆಗಳಿಗೆ ಭಾರತ ಸಾಧನಾ ಸಂಘ ಸಿರಿ ಗೌರವ ನೀಡಿ ಸನ್ಮಾನಿಸಲಾಯಿತು.
# ರೂಪಾ ವಸುಂಧರಾ ಆಚಾರ್ಯ ಅವರ ಕಲಾಕೃತಿಗಳ ಪ್ರದರ್ಶನ ಪುಷ್ಷಾಂಜಲಿ ವಿಶೇಷ ಗಮನಸೆಳೆಯಿತು. ಪುಸ್ತಕ ಪ್ರದರ್ಶನವಿತ್ತು.
# ಹಿರ್ಗಾನ ಪ್ರೌಢಶಾಲೆಯಿಂದ ಬಿ,ಎಂ ಶಾಲೆಯವರೆಗೆ ಭವ್ಯ ಮೆರವಣಿಗೆ ನಡೆಯಿತು. ಚೆಂಡೆ, ಬ್ಯಾಂಡು, ಕೊಂಬು, ಗರ್ನಲ್ ಸಹಿತ ಸಂಭ್ರಮವಿತ್ತು. ಅಜೆಕಾರು ಪೇಟೆ ಗರಡಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಅಧ್ಯಕ್ಷರನ್ನು ವಾಹನ ಜಾಥದಲ್ಲಿ ಹಿರ್ಗಾನದವರೆಗೆ ಕರೆದೊಯ್ಯಲಾಯಿತು.
# ೩೦ ಮಂದಿ ಸಾಧಕರು, ೬ ಸಂಸ್ಥೆಗಳು, ಇಬ್ಬರು ದಂಪತಿಗಳಿಗೆ ಸಮ್ಮೇಳನದ ಗೌರವ ಸನ್ಮಾನಗಳಿದ್ದವು.
# ಮೂಜೂರು- ಹಿರ್ಗಾನದಲ್ಲಿ ನಡೆದ ಮೊದಲ ಸಮ್ಮೇಳನ ಸಾಹಿತ್ಯೇತರ ಜನರಿಗೂ ಸಾಹಿತ್ಯದ ಬಗೆಗೆ ಒಲವನ್ನು ಮೂಡಿಸಿತು.
# ಬಿ.ಎಂ ಶಾಲೆಯ ವಿದ್ಯಾರ್ಥಿ ಸಂಘಟನೆಗಳು ನಾಡ ಗೀತೆ ಹಾಡಿ ಕನ್ನಡ ತಾಯಿಯ ಪ್ರೀತಿ ಗೌರವ ಸಮರ್ಪಿಸಿದ್ದಾರೆ.