ಹೊಸದಿಲ್ಲಿ: ದೇಶದ ಗಡಿಯಲ್ಲಿ ನಡೆಸುತ್ತಿರುವ ಅತಿರೇಕದ ಪ್ರಯತ್ನಗಳನ್ನು ನಿಲ್ಲಿಸದಿದ್ದರೆ ನೆರೆಯ ದೇಶ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಎಚ್ಚರಿಸಿದ್ದಾರೆ. ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಜಮ್ಮು-ಕಾಶ್ಮೀರದ ಗಡಿ ಗ್ರಾಮಗಳತ್ತ ಪಾಕಿಸ್ತಾನ ನಡೆಸುತ್ತಿರುವ ದಾಳಿಯ ವಿರುದ್ಧ ರಕ್ಷಣಾ ಸಚಿವರು ಗುರುವಾರ ಕಠಿಣ ಎಚ್ಚರಿಕೆ ರವಾನಿಸಿದ್ದಾರೆ.

ಗಡಿಯಲ್ಲಿ ಗುಂಡಿನ ದಾಳಿ ಮತ್ತು ಉಗ್ರ ಒಳನುಸುಳುವಿಕೆಗೆ ನೇರ ಸಂಬಂಧವಿರುವುದರಿಂದ ಕೂಡಲೇ ಗಡಿಯಲ್ಲಿ ನಡೆಸುತ್ತಿರುವ ಗುಂಡಿನ ದಾಳಿಯನ್ನು ನಿಲ್ಲಿಸಬೇಕೆಂದು ತಾಕೀತು ಮಾಡಿದ್ದಾರೆ. ಅಲ್ಲದೆ ಅತಿರೇಕದ ಪ್ರಯತ್ನಗಳನ್ನು ಪಾಕಿಸ್ತಾನ ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಅದಕ್ಕೆ ಏನು ಮಾಡಬೇಕಿದೆಯೋ ಅದನ್ನು ಭಾರತ ಮಾಡಲಿದೆ ಎಂದು ಹೇಳಿದರು.

India's new Finance and Defence Minister Arun Jaitley speaks during news conference in Srinagar

ಭಾರತ ಒಂದು ಜವಾಬ್ದಾರಿಯುತ ದೇಶ. ಅದು ಪಕ್ಕದ ರಾಷ್ಟ್ರಗಳ ಮೇಲೆ ಅತಿಕ್ರಮಣ, ದಾಳಿ ಮಾಡುವುದರಲ್ಲಿ ನಂಬಿಕೆ ಹೊಂದಿಲ್ಲ ಎಂದ ಅವರು, ಗಡಿಯಲ್ಲಿ ಗುಂಡಿನ ಚಕಮಕಿ ನಡೆಸುತ್ತಿರುವಾಗ ಮಾತುಕತೆ ನಡೆಸುವುದು ಹೇಗೆ ಸಾಧ್ಯ ಎಂದು ಪಾಕ್‌ ಜತೆಗಿನ ಮಾತುಕತೆಯನ್ನು ತಳ್ಳಿಹಾಕಿದರು.

ಪ್ರಧಾನಿ ಗಮನಿಸುತ್ತಿದ್ದಾರೆ:

ಗಡಿಯಲ್ಲಿರುವ ಗ್ರಾಮಗಳ ರಕ್ಷಣೆಗಾಗಿ ಪಾಕ್ ಸೇನೆಗೆ ತಕ್ಕ ಪ್ರತ್ಯುತ್ತರವನ್ನು ನಮ್ಮ ರಕ್ಷಣಾ ಪಡೆಗಳು ನೀಡುತ್ತಿದ್ದು, ನಮ್ಮ ದೇಶ ಯಾರ ಮುಂದೆಯೂ ತಲೆತಗ್ಗಿಸಿ ಶರಣಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಪ್ರಧಾನಿಯವರು ಪರಿಸ್ಥಿತಿಯ ಬಗ್ಗೆ ತೀವ್ರ ನಿಗಾ ಇರಿಸಿದ್ದಾರೆ. ಅವರು ನಮ್ಮ ದೇಶದ ಸೇನೆ ಅಥವಾ ಬಿಎಸ್‌ಎಫ್‌ ಜತೆ ನೇರ ಮಾತನಾಡುವ ಅಗತ್ಯವಿಲ್ಲ. ರಕ್ಷಣಾ ಪಡೆಗಳು ಪಾಕ್‌ ದಾಳಿಗೆ ಸೂಕ್ತ ಪ್ರತಿಕ್ರಿಯೆ ನೀಡುತ್ತಿವೆ. ಆ ಬಗ್ಗೆ ನಮಗೆ ಸಮಾಧಾನವಿದೆ ಎಂದು ಸಿಂಗ್‌ ಗುರುವಾರ ಹೇಳಿದರು.

ಜಮ್ಮು ಹಾಗೂ ಸಾಂಬ ಜಿಲ್ಲೆಗಳ ಆರ್ಣಿಯಾ, ಆರ್.ಎಸ್. ಪುರ, ಕನಚಕ ಹಾಗೂ ಪರ್ಗಾವಾಲ್ ಸೇರಿದಂತೆ ಅಂತಾರಾಷ್ಟ್ರೀಯ ಗಡಿಯ 192 ಕಿ.ಮೀ. ಉದ್ದಕ್ಕೂ ಪಾಕಿಸ್ತಾನಿ ಪಡೆಗಳು ಅಪ್ರಚೋದಿತ ಮಾರ್ಟರ್ ಶೆಲ್ ದಾಳಿ ನಡೆಸಿವೆ. ಇದುವರೆಗೆ ಪಾಕ್ ಸೈನಿಕರ ಗುಂಡಿಗೆ 8 ಮಂದಿ ಭಾರತೀಯರು ಅಸು ನೀಗಿದ್ದಾರೆ. ಯೋಧರು, ಸಾರ್ವಜನಿಕರು ಸೇರಿದಂತೆ 80 ಮಂದಿ ಗಾಯಗೊಂಡಿದ್ದಾರೆ. ಸುಮಾರು 30 ಸಾವಿರ ಮಂದಿಯನ್ನು ಸೇನೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ. 2003ರ ಬಳಿಕ ಇದು ಅತಿ ಕೆಟ್ಟ ಕದನ ವಿರಾಮ ಉಲ್ಲಂಘನೆ ಇದಾಗಿದೆ.

By suddi9

Leave a Reply

Your email address will not be published. Required fields are marked *