ಮಂಗಳೂರು: ಟಿಕೆಟ್ ಕೈ ತಪ್ಪಿರುವ ನಾಯಕರ ಮನಸ್ಸಿನ ನೋವನ್ನು ಸಮಾಧಾನಪಡಿಸಿ ಸೂಕ್ತ ಸ್ಥಾನಮಾನ ನೀಡಲು ಬಿಜೆಪಿ ನಿರ್ಧರಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಲ್ಲವರಿಗೆ ಅನ್ಯಾಯವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ. ಕೆಲ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ಸಿಗದೇ ಇರುವುದರಿಂದ ನೋವಾಗಿರುವುದು ನಿಜ ಎಂದರು.
ಬಿಜೆಪಿ ಪಕ್ಷದ ಜತೆ ಯಾವುದೇ ಅಸಮಾಧಾನ, ವೈಮನಸ್ಸು ಬಿಲ್ಲವರಿಗಿಲ್ಲ. ನಾವೆಲ್ಲರೂ ಒಟ್ಟಾಗಿ ಸೇರಿ ಪಕ್ಷಕ್ಕಾಗಿ, ಪಕ್ಷದ ಗೆಲುವಿಗೆ ದುಡಿಯುತ್ತೇವೆ. ಮಾತ್ರವಲ್ಲ ಸತ್ಯಜಿತ್ ಸುರತ್ಕಲ್ ಪಕ್ಷದ ಗೆಲುವಿಗೆ ದುಡಿಯುವ ಎಲ್ಲಾ ಭರವಸೆಯನ್ನು ನೀಡಿದ್ದಾರೆ. ಪಕ್ಷದಲ್ಲಿ ಅವರಿಗೆ ಉನ್ನತ ಸ್ಥಾನವನ್ನು ನೀಡುವ ಭರವಸೆ ನೀಡಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ನಮ್ಮದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಶಾಲಾ ಮಕ್ಕಳ ಅನ್ನವನ್ನು ಕಸಿದುಕೊಂಡಿದೆ. ಮಕ್ಕಳ ಅನ್ನ ಕಿತ್ತುಕೊಂಡ ಸರ್ಕಾರ ಸಮಾಜವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಈ ಸಂದರ್ಭ ಹರಿಕೃಷ್ಣ ಬಂಟ್ವಾಳ, ರುಕ್ಮಯ ಪೂಜಾರಿ, ಜೀತೆಂದ್ರ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.

