ಅಗರ್ತಲಾ: ತೀವ್ರ ಕುತೂಹಲ ಕೆರಳಿಸಿದ್ದ ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾ ರೂಢ ಸಿಪಿಐ ಪಕ್ಷಕ್ಕೆ ಭಾರಿ ಮುಖಭಂಗವಾಗಿದ್ದು, ಬಿಜೆಪಿ ಪಕ್ಷ ಅಭೂತಪೂರ್ವ ಮುನ್ನಡೆ ಸಾಧಿಸುವ ಮೂಲಕ ಸ್ಪಷ್ಟ ಬಹುಮತದತ್ತ ಧಾಪುಗಾಲಿರಿಸಿದೆ.
ತ್ರಿಪುರಾದ ಒಟ್ಟು 59 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಬರೊಬ್ಬರಿ 39 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಬಹುಮತದತ್ತ ದಾಪುಗಾಲಿರಿಸಿದೆ. ಆದರೆ ಆಡಳಿತಾ ರೂಢ ಸಿಪಿಎಂ ಮೈತ್ರಿಕೂಟಕ್ಕೆ ಭಾರಿ ಮುಖಭಂಗವಾಗಿದ್ದು, ಎಡಪಕ್ಷಗಳ ಒಕ್ಕೂಟ ಕೇವಲ 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ಸರ್ಕಾರ ರಚನೆಯತ್ತ ಬಿಜೆಪಿ ನೇತೃತ್ವದ ಮೈತ್ರಿಕೂಟ ದಾಪುಗಾಲಿರಿಸಿದ್ದು, ಉತ್ತರ ಪ್ರದೇಶ ಚುನಾವಣಾ ಫಲಿತಾಂಶಕ್ಕಿಂತ ತ್ರಿಪುರಾ ಚುನಾವಣಾ ಫಲಿತಾಂಶ ಬಿಜೆಪಿ ಹೊಸ ಹುರುಪು ನೀಡಿದೆ ಎಂದು ಹೇಳಲಾಗುತ್ತಿದೆ.
ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ 20 ಸ್ಥಾನ ಗಳಿಸಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಬಿಜೆಪಿ ಮುಂದೆ ಮಂಕಾದಂತೆ ಕಂಡುಬಂದಿದ್ದು, ಈ ಬಾರಿ ಖಾತೆ ತೆರೆಯುವಲ್ಲೇ ವಿಫಲವಾಗಿದೆ. ಇನ್ನು ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪಕ್ಷ 60 ಸ್ಥಾನಗಳ ಪೈಕಿ ಒಟ್ಟು 51 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಪೈಕಿ ಬಿಜೆಪಿ 39 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಇನ್ನು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಪ್ರಚಾರ ಕಾರ್ಯತಂತ್ರ ವರ್ಕೌಟ್ ಆಗಿದ್ದು, ತ್ರಿಪುರಾ ಜನತೆಗೆ ಹಲವು ಆಶ್ವಾಸನೆಗಳನ್ನು ನೀಡಿದ್ದರು. ಈ ಪೈಕಿ ಯುವಕರಿಗೆ ಸ್ಮಾರ್ಟ್ ಫೋನ್, 7ನೇವೇತನ ಆಯೋಗದ ಶಿಫಾರಸ್ಸು ಜಾರಿ, ಚಿಟ್ ಫಂಡ್ ಹಗರಣಗಳ ವಿರುದ್ಧ ಕಠಿಣ ಕ್ರಮ ಮತ್ತು ಪ್ರತೀಯೊಂದು ಮನೆಗೂ ಉದ್ಯೋಗ ನೀಡುವ ಭರವಸೆಯನ್ನು ಅಮಿತ್ ಶಾ ನೀಡಿದ್ದರು.

