ಚೆನ್ನೈ: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂರನ್ನು
ಚೆನ್ನೈ ವಿಮಾನ ನಿಲ್ದಾಣದಲ್ಲಿ ಬುಧವಾರ ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಿಬಿಐ ಕೈಗೊಂಡಿದ್ದ ತನಿಖೆಗೆ ಕಾರ್ತಿ ಚಿದಂಬರಂ ಅವರು ಸಹಕರಿಸಲಿಲ್ಲ ಎಂಬ ಕಾರಣದ ಮೇಲೆ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದ್ದು, ಈ ಮೊದಲು ಕಾರ್ತಿ ಚಿದಂಬರಂ, ಪೀಟರ್ ಮತ್ತು ಇಂದ್ರಾಣಿ ಮುಖರ್ಜಿಯಾ ಅವರ ವಿರುದ್ಧ ಕ್ರಿಮಿನಲ್ ಷಡ್ಯಂತ್ರ, ಮೋಸ, ಅನೈತಿಕವಾಗಿ ಹಣ ಪಡೆದ, ಕ್ರಿಮಿನಲ್ ದುರ್ವರ್ತನೆ ಮತ್ತು ಪಬ್ಲಿಕ್ ಸರ್ವಂಟ್ ಮೇಲೆ ಪ್ರಭಾವ ಬೀರಿದ ಆರೋಪಗಳ ಮೇಲೆ ಸಿಬಿಐ ಎಫ್ಐಆರ್ ದಾಖಲಿಸಿತ್ತು.
ಫಾರಿನ್ ಇನ್ವೆಸ್ಟ್ಮೆಂಟ್ ಪ್ರಮೋಷನ್ ಬೋರ್ಡ್ ನಿಮಯಗಳನ್ನು ಉಲ್ಲಂಘಿಸಿ ಮಾರಿಷಸ್ ನಿಂದ 300 ಕೋಟಿ ರೂ. ಹೆಚ್ಚು ವಿದೇಶಿ ಹಣವನ್ನು ಐಎನ್ಎಕ್ಸ್ ಮೀಡಿಯಾ ಪಡೆದಿತ್ತು. ಇದಕ್ಕಾಗಿ ಇವರ ಮೇಲೆ ಕೇಸನ್ನೂ ಜಡಿಯಲಾಗಿತ್ತು. ವಿಚಾರಣೆಯನ್ನು ತಪ್ಪಿಸಿಕೊಳ್ಳಲು ಇವರಿಬ್ಬರು ಕಾರ್ತಿ ಅವರ ಸಹಾಯ ಪಡೆದಿದ್ದರು. ಆಗ ಕಾರ್ತಿ ಅವರ ತಂದೆ ಪಿ. ಚಿದಂಬರಂ ಅವರು ಕೇಂದ್ರದ ಹಣಕಾಸು ಸಚಿವರಾಗಿದ್ದರು.

