ದುಬೈ: ದುಬೈನಲ್ಲಿ ಸಾವನ್ನಪ್ಪಿರುವ ಮೋಹಕತಾರೆ ನಟಿ ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಇಂದು ರಾತ್ರಿ ಮುಂಬೈಗೆ ತರಲಾಗುತ್ತಿದೆ.
ನಟಿ ಶ್ರೀದೇವಿ ನಿಧನಕ್ಕೆ ಸಂಬಂಧಪಟ್ಟಂತೆ ದುಬೈನಲ್ಲಿ ಎಲ್ಲ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಪಾರ್ಥಿವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಲು ಅಲ್ಲಿನ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಸದ್ಯ ಅವರ ಪಾರ್ಥಿವ ಶರೀರವನ್ನು ದುಬೈನ ಏರ್ಪೋರ್ಟ್ಗೆ ಆಂಬ್ಯುಲೆನ್ಸ್ ಮೂಲಕ ತರಲಾಗಿದೆ. ಕೆಲ ಗಂಟೆಗಳಲ್ಲಿಯೇ ಭಾರತಕ್ಕೂ ಆಗಮಿಸಲಿದೆ.
ಅನಿಲ ಅಂಬಾನಿಗೆ ಸೇರಿದ ಖಾಸಗಿ ವಿಮಾನದಲ್ಲಿ ಅವರ ಶ್ರೀದೇವಿ ಶರೀರವನ್ನು ಮುಂಬೈಗೆ ತರಲಾಗುತ್ತಿದೆ.
ತನಿಖೆ ಪೂರ್ಣ: ಆಕಸ್ಮಿಕವಾಗಿ ಬಾತ್ ಟಬ್ ಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪ್ರಕರಣವನ್ನು ಮುಕ್ತಾಯಗೊಳಿಸಿರುವುದಾಗಿ ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಸ್ಪಷ್ಟಪಡಿಸಿದೆ.
ಇಂತಹ ಪ್ರಕರಣಗಳನ್ನು ಕ್ರಮಬದ್ಧವಾಗಿ ಪೂರ್ಣಗೊಳಿಸಲಾಗಿದೆ, ನಟಿ ಆಕಸ್ಮಿಕವಾಗಿ ಬಾತ್ ಟಬ್ ಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಫೋರೆನ್ಸಿಕ್ ವರದಿ ನೀಡಿದ್ದು ಅದರಂತೆ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಹೇಳಿದೆ.
ನಂತರ ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕೊಂಡೊಯ್ಯಲು ದುಬೈ ಪೊಲೀಸರು ಶ್ರೀದೇವಿ ಕುಟುಂಬಕ್ಕೆ ನಿರಪೇಕ್ಷಣಾ ಪತ್ರವನ್ನು ನೀಡಿದ್ದಾರೆ.

