ಕೈಕಂಬ: ಒಂದು ಸಂಸ್ಥೆ ಸ್ಥಾಪಿಸುವುದು ಸುಲಭ. ಅದನ್ನು ಮುನ್ನಡೆಸುವುದು ಕಷ್ಟ. ಹಳೆ ವಿದ್ಯಾರ್ಥಿ ಸಂಘ ಶಾಲೆಯ ಬೆನ್ನೆಲುಬಾಗಿದ್ದರೂ, ಸಂಘದಿಂದಲೇ ಶಾಲಾಭಿವೃದ್ಧಿಯಾಗುತ್ತದೆ ಎಂದೇನಿಲ್ಲ. ಬೇರೆಲ್ಲಿಯಾದರೂ ಇರುವವರು ಸಹಕರಿಸಿದರೂ ಶಾಲೆಯ ಅಭಿವೃದ್ಧಿ ಸಾಧ್ಯ. ಮುಂದೆ ಸಂಸಾರವೆಂದು ಹೇಳಿಕೊಂಡು ಸಂಘ ತೊರೆಯದೆ, ಸಂಸಾರ-ಸಂಘದೊಂದಿಗೆ ಮುಂದುವರಿಯಬೇಕು ಎಂದು ಕೂಸಪ್ಪ ಮಾಸ್ತರ್ ಹೇಳಿದರು.
ಜ. 28ರಂದು ಗುರುಪುರ ಸಂಯುಕ್ತ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಒಂದು ಸಂಘದಲ್ಲಿರುವ ಎಲ್ಲರೂ ಮನುಷ್ಯರೆಂಬ ಭಾವನೆ ಹಾಗೂ ಸಹೋದರತೆಯಿಂದ ಕೆಲಸ ಮಾಡಬೇಕು. ಕಚ್ಚಾಟವಿದ್ದಲ್ಲಿ ಸಂಘ ಬೆಳೆಯುವುದಿಲ್ಲ. ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಕಿಟ್ಟಣ್ಣ ರೈ ನುಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಶವಂತ ಆಳ್ವ ಮಾತನಾಡುತ್ತ, ಹಿಂದೆ ಇಲ್ಲಿ ಹಳೆ ವಿದ್ಯಾರ್ಥಿ ಸಂಘ ಇತ್ತು. ಸಮಾಜ ಸೇವೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದ್ದ ಆ ಸಂಘ ಕಾರಣಾಂತರಗಳಿಂದ ವರ್ಷಗಳ ಬಳಿಕ ಬರ್ಕಾಸ್ತುಗೊಂಡಿದೆ. ಹೊಸದಾಗಿ ಸ್ಥಾಪನೆಯಾಗಿರುವ ಈ ಸಂಘ ನಾಯಕತ್ವದ ಗುಣ ಬೆಳೆಸಿಕೊಂಡು ಮುಂದುವರಿಯಲಿ. ಕೇವಲ ವಾರ್ಷಿಕೋತ್ಸವ ಅಥವಾ ಫ್ಲಡ್-ಲೈಟ್ ಕ್ರಿಕೆಟ್ ಟೂರ್ನಿಗಷ್ಟೇ ಸಂಘಗಳು ಸೀಮಿತವಾಗಿರ ಕೂಡದು. ಸಮಾಜಸೇವೆ-ಶ್ರಮದಾನದೊಂದಿಗೆ ಹೈಸ್ಕೂಲ್ ಜೊತೆಗಿಟ್ಟುಕೊಂಡು ಕಾಲೇಜಿನ ಅಭಿವೃದ್ಧಿಗೆ ಸಂಘ ಶ್ರಮಿಸುವಂತಾಗಲಿ ಎಂದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿ ಸಂಘದ ಅವಶ್ಯಕತೆ ಇದೆ. ಎಲ್ಲರೂ ಶಾಲಾಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದಾರೆಂಬುದು ಸಂತೋಷದ ಸಂಗತಿ. ನಿಮ್ಮೊಂದಿಗೆ ನಾವಿದ್ದೇವೆ. ಸಂಘದಲ್ಲಿ ಹೆಚ್ಚೆಚ್ಚು ಹಳೆ ವಿದ್ಯಾರ್ಥಿಗಳು ಕೈಜೋಡಿಸುವಂತಾಗಲಿ ಎಂದು ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ರೂಪಾ ಡಿ ಎನ್ ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ತಾಪಂ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಶೇಕಬ್ಬ ಗುರುಪುರ, ಕಾಲೇಜು ಪ್ರಾಂಶುಪಾಲ ವಾಸುದೇವ ಕಾಮತ್ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್ ಗುರುಪುರ ಇದ್ದರು.
ಪ್ರಾಂಶುಪಾಲ ಕಾಮತ್, ಶಿಕ್ಷಕ ವೃಂದದ ರೂಪಾ, ಅನಸೂಯ, ವೀಣಾ ಕುಮಾರಿ, ಸೀತಾಲಕ್ಷ್ಮೀ, ಜಯಲಕ್ಷ್ಮೀ, ಅಹ್ಮದ್ ಹುಸೇನ್ ಶಫಿಕ್, ಕೇಶವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಸಂಘದ ವತಿಯಿಂದ ಕಾಲೇಜು ಸಮಿತಿಗೆ 50,000 ರೂ ದೇಣಿಗೆ ಚೆಕ್ ಹಾಗೂ ಪದರೆಯೊಂದು ನೀಡಲಾಯಿತು. ಭರತ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರೆ, ಸಂಘದ ಸದಸ್ಯೆ ಶ್ವೇತಾ ವಂಸಿದಿದರು. ಬಳಿಕ ಮನೋರಂಜನೆಯಂಗವಾಗಿ ಗುರುಪುರದ `ಗುರುದಯ’ ಕಲಾವಿದರಿಂದ `ದಾಯೆ ಬದ್ಕೆರಾಪುಜಿ’ ನಾಟಕ ಪ್ರದರ್ಶನಗೊಂಡಿತು. ಶ್ರೀ ಜಿ.ಎಸ್.ಗುರುಪುರ, ಹಾಗೂ ಮಧುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.

