ಸಿನೆಮಾ ಜಗತ್ತಿಗೆ ಹಲವು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿರುವ ತುಳುನಾಡು ನಿಜಕ್ಕೂ ಧನ್ಯವೇ ಸರಿ. ಏಕೆಂದರೆ ಅಂತಹ ಪ್ರತಿಭೆಗಳು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ನೆಲದ ಘನತೆ – ಗೌರವವನ್ನು ಎತ್ತಿ ಹಿಡಿಯುವ ರೀತಿಯಲ್ಲಿ ತಮ್ಮ ಕರ್ಮಭೂಮಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನೇಕ ಕಲಾವಿದರು ಬಹುಬೇಗನೆ ಪ್ರಸಿದ್ಧಿಯನ್ನು ಪಡೆದು ಯಶಸ್ವಿಯಾದರೆ ಇನ್ನು ಕೆಲವರು ಕಡಿಮೆ ಅವಕಾಶಗಳ ಕಾರಣ ನಿಧಾನವಾಗಿ ಪ್ರಸಿದ್ಧಿಗೆ ಬರುತ್ತಿರುವುದು ಸತ್ಯ ಸಂಗತಿ. ಅವರು ಸಿನೆಮಾವೆಂಬ ಬಣ್ಣದಲೋಕದಲ್ಲಿ ಸಿಕ್ಕಿದ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವ ಕಡೆಗೆ ಸಾಗುತ್ತಿದ್ದರೆ ಇನ್ನು ಕೆಲವರು ಒಂದು ಅವಕಾಶ ತಪ್ಪಿದರೂ ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿರುವಂತಿದೆ.
ತುಳುನಾಡಿನ ಹೆಮ್ಮೆಯ ಕುವರ, ನಟ, ಬಹುಮುಖ ಪ್ರತಿಭೆ ರಾಜೇಶ್ ಮೂಲ್ಯ ಬೆಳ್ಳಿ ಪರದೆಯ ಮೇಲೆ ನಿಧಾನವಾಗಿ ಮಿಂಚುತ್ತಿದ್ದು, ತುಳು – ಕನ್ನಡಿಗರ ಪಾಲಿಗೆ ಹತ್ತಿರದ ವ್ಯಕ್ತಿಯಾಗಿ `ನಮ್ಮ ಮನೆ ಹುಡುಗ’ನೆಂದು ಗುರುತಿಸಿಕೊಳ್ಳಲು ಪ್ರಯತ್ನಶೀಲರಾಗಿದ್ದಾರೆ.
ರಾಜೇಶ್ ಮೂಲತಃ ಕಾರ್ಕಳದ ಮುಂಡ್ಕೂರಿನವರಾಗಿದ್ದು, ಕಾಲೇಜು ಜೀವನವನ್ನು ಊರಿನಲ್ಲೇ ಮುಗಿಸಿ ಜೀವನೋಪಾಯಕ್ಕಾಗಿ ಎಲ್ಲರಂತೆ ಮುಂಬಯಿ ಸೇರಿದವರು. ಆರಂಭದಿಂದಲೂ ಸಿನೆಮಾ ರಂಗದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ರಾಜೇಶ್ ಅದಕ್ಕೆ ತಕ್ಕಂತೆ ಆಕರ್ಷಕ ಮೈಕಟ್ಟು ಹೊಂದಿರುವುದು ಕೂಡ ವಿಶೇಷ. ದೇಹದಾಢ್ರ್ಯ ಸ್ಪರ್ಧೆಗಳಲ್ಲಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚು ಜತೆಗೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡಿರುವುದು ತುಳುನಾಡಿನ ಈ ಮಣ್ಣಿನ ಮಗನ ಸಾಧನೆಯೆನ್ನಬೇಕು. ದೇಹದಾಢ್ರ್ಯ ಸ್ಪರ್ಧೆಯಲ್ಲಿ ಮೂರು ಬಾರಿ ಮಿಸ್ಟರ್ ಬಾಂಬೆ, ಮಿಸ್ಟರ್ ಮಹಾರಾಷ್ಟ್ರ ಮತ್ತು ಮಿಸ್ಟರ್ ಇಂಡಿಯಾ ಗೌರವ ಪಡೆದು ಡ್ಯಾನ್ಸ್ ಕ್ಲಾಸ್, ಕಿಕ್ ಬಾಕ್ಸ್ ತರಬೇತಿ ಜತೆಗೆ ಬ್ಲ್ಯಾಕ್ ಸ್ಪೇಡ್ನಲ್ಲಿ ಅಭ್ಯಾಸ ಪಡೆದಿರುವರು.

ಮುಂಬಯಿಯಲ್ಲಿ ಅನುಪಮ್ ಖೇರ್ ಅವರ ನಟನಾ ಕಲಿಕಾ ಕೇಂದ್ರದಲ್ಲಿ ಡಿಪೆÇ್ಲೀಮಾ ಮಾಡಿ ಹಿಂದಿ ಚಿತ್ರರಂಗದಲ್ಲಿ ಕಿರುತೆರೆ ನಟನಾಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡ ರಾಜೇಶ್, ಫರ್ಹಾ ಖಾನ್ ನಿರ್ದೇಶಿಸಿದ `ಹ್ಯಾಪಿ ನ್ಯೂ ಇಯರ್’ ಅಮ್ಜದ್ ಖಾನ್ ನಿರ್ದೇಶನದ `ಗುಲ್ ಮಕಾಯಿ’ (ಮಲಾಲ) ಹಿಂದಿ ಚಿತ್ರದಲ್ಲಿ ನಟಿಸುವ ಮೂಲಕ ತುಳುನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕೇವಲ ಸಿನೆಮಾಕ್ಕೆ ತನ್ನ ಪ್ರತಿಭೆಯನ್ನು ಸೀಮಿತಗೊಳಿಸದೆ ಇತರ ಕ್ಷೇತ್ರಗಳಲ್ಲೂ ಅವಕಾಶಗಳನ್ನು ಅರಸಿಕೊಂಡು ಹೋದ ಯುವ ಕಲಾವಿದ ಅವರು. ಜನಪ್ರಿಯ ಹಿಂದಿ ಧಾರಾವಾಹಿಗಳಾದ `ಎಫ್ಐಆರ್’ `ಸಿಐಡಿ’ ಕ್ರೈಂ ಪೆಟ್ರೋಲ್, ಸಾವ್ದನ್ ಇಂಡಿಯಾಗಳಲ್ಲಿ ರಾಜೇಶ್ ಕಾಣಿಸಿಕೊಂಡಿರುವುದು ವಿಶೇಷವೆನ್ನಬೇಕು.
`ಶ್ರೀ ಚಕ್ರಂ’ ಚಿತ್ರದ ಮೂಲಕ ಪ್ರಧಾನ ಪಾತ್ರದಲ್ಲಿ `ಸ್ಯಾಂಡಲ್ ವುಡ್’ಗೆ ಎಂಟ್ರಿ ಕೊಟ್ಟಿರುವ ಅವರು ಪ್ರಸ್ತುತ `ರಾ… ರಾ…’ ಚಿತ್ರದ ಮೂಲಕ ತುಳು ಸಿನೆಮಾ ರಂಗದಲ್ಲೂ ನಿಗೂಢವಾಗಿ ಸದ್ದು ಮಾಡುತ್ತಿದ್ದಾರೆ. ಎನ್ನಾರ್ ಕೆ. ವಿಶ್ವನಾಥ್ ನಿರ್ಮಾಪಕರಾಗಿರುವ ಈ ಸಿನೆಮಾಕ್ಕೆ ಲಲಿತಶ್ರೀ ನಿರ್ದೇಶನ ನೀಡಿದ್ದಾರೆ. ಈ ಸಿನೆಮಾದ ಪ್ರೊಮೊಷನ್ ಆರಂಭಗೊಂಡಿದ್ದು, ಚಿತ್ರವು ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ.
ಹಿಂದಿ, ತುಳು ಬಳಿಕ ರಾಜೇಶ್ಗೆ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಅವಕಾಶ ಸಿಕ್ಕಿದೆ. ತಾರಾನಾಥ ಶೆಟ್ಟಿ ನಿರ್ಮಾಣದ ದೇವರಾಜ್ ಕುಮಾರ್ ನಿರ್ದೇಶಿಸಿರುವ `ನಿಶ್ಯಬ್ಧ 2′ ಚಿತ್ರದಲ್ಲಿ ರಾಜೇಶ್ ಖಳನಾಯಕನಾಗಿ ನಟಿಸುವ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ. ಅಲ್ಲದೆ ತಾನು ಯಾವುದೇ ಪಾತ್ರವನ್ನು ನಿರ್ವಹಿಸಲು ರೆಡಿ ಎಂಬುದನ್ನು ಕೂಡ ತೋರಿಸಿಕೊಟ್ಟಿದ್ದಾರೆ. ಈ ಸಿನೆಮಾದಲ್ಲಿ ರೂಪೇಶ್ ಶೆಟ್ಟಿ ಹೀರೋ ಮತ್ತು ಆರಾಧ್ಯ ಹೀರೋಯಿನ್ ಆಗಿ ಪ್ರಧಾನ ಭೂಮಿಕೆಯಲ್ಲಿದ್ದು, ಚಿತ್ರದ ಆಡಿಯೋ ಈಗಾಗಲೇ ಬಿಡುಗಡೆಗೊಂಡಿದ್ದರೆ ಟ್ರೈಲರ್ ಮುಗಿದ ಸಿನೆಮಾ ನವೆಂಬರ್ 3 ರಂದು ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಭರ್ಜರಿ ಯಶಸ್ಸು ಕಾಣುತ್ತಿದೆ. ಸಿನೆಮಾ ಮತ್ತು ಸೀರಿಯಲ್ಗಳಲ್ಲಿ ಇಂತಹುದೇ ಪಾತ್ರಬೇಕೆಂಬ ಷರತ್ತು ಇರಿಸಿಕೊಳ್ಳದೆ ಸಿಕ್ಕಿದ ಅವಕಾಶಕ್ಕೆ ಸೈ ಎನ್ನುತ್ತಾ ಮುನ್ನಡೆದ ಫಲವಾಗಿ ರಾಜೇಶ್ ಈಗ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ. ಹಿಂದೆ `ಶ್ರೀ ಚಕ್ರಂ’ ಚಿತ್ರವನ್ನು ನಿರ್ಮಿಸಿದ್ದ ರಾಮ್ಪ್ರಸಾದ್ ಅವರ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ರಾಜೇಶ್ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಂದಿನ ತಿಂಗಳು ಆರಂಭವಾಗಲಿದೆ. ಇಷ್ಟು ಮಾತ್ರವಲ್ಲ ಹಲವು ಅವಕಾಶಗಳು ರಾಜೇಶ್ಗಾಗಿ ಕಾಯುತ್ತಿವೆ.
ಮುಂಡ್ಕೂರಿನ ವಿದ್ಯಾವರ್ಧಕ ಪಿಯು ಕಾಲೇಜಿನಲ್ಲಿ ಕಲಿತ ಹುಡುಗ ಬಾಲಿವುಡ್, ಸ್ಯಾಂಡಲ್ವುಡ್ ಮತ್ತು ಕೋಸ್ಟಲ್ವುಡ್ನಲ್ಲಿ ಪ್ರತಿಭಾನ್ವಿತ ನಟನಾಗಿ ಗುರುತಿಸಲ್ಪಡುತ್ತಿರುವುದು ತುಳುನಾಡಿನ ಜನತೆಗೆ ಗೌರವದ ಸಂಗತಿಯಾಗಿದೆ.
ನಟನೆಯಲ್ಲಿ ಸಾಕಷ್ಟು ಅನುಭವ ಹೊಂದಿದ್ದು, ಪ್ರತಿಭಾನ್ವಿತನಾಗಿರುವ ರಾಜೇಶ್ ಡಾನ್ಸ್, ಕಿಕ್ ಬಾಕ್ಸಿಂಗ್ನಲ್ಲೂ ಪಳಗಿದ್ದು, ದೊಡ್ಡ ಕನ್ನಡ ಸಿನೆಮಾಗಳಲ್ಲಿ ನಟನಾಗಲು ಎಲ್ಲಾ ರೀತಿಯ ಅರ್ಹತೆಯನ್ನು ಹೊಂದಿದ್ದಾರೆ.
– ವಿಶ್ವನಾಥ್ ಅವಿೂನ್, ನಿಡ್ಡೋಡಿ.

Super sir God bless in ur whole life.