ಬಜ್ಪೆ: ಇಂದಿನ ಯುವ ಸಮುದಾಯ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಇನ್ನಷ್ಟು ತಮ್ಮ ಶಕ್ತಿಯನ್ನು ವಿನಿಯೋಗಿಸಬೇಕೆಂದು ನಿವೃತ್ತ ಪೊಲೀಸ್ ಅಧಿಕಾರಿ ಶಾಂತಪ್ಪ ಮುಗ್ಡಾಲ್ ಹೇಳಿದರು. ಅವರು ಬಜ್ಪೆ ಬಿಲ್ಲವ ಸಂಘದಲ್ಲಿ ನಡೆದ ಬಜ್ಪೆ ಯುವವಾಹಿನಿ ಘಟಕದ ಈ ಸಾಲಿನ ಪದಗ್ರಹಣ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಶುಭವನ್ನು ಹಾರೈಸುತ್ತಾ ಮಾತನಾಡಿದರು.
ಹಿಂದುಳಿದ ಸಮಾಜದಲ್ಲಿ ತೀರಾ ಬಡತನದ ಬೇಗೆಯಲ್ಲಿ ಕೆಂಗಟ್ಟು ಮುಂದೆ ಸಾಗಲು ಪರದಾಟ ನಡೆಸುವ ಮಂದಿಗೆ ಇದೇ ಸಮಾಜದ ಸ್ಥಿತಿವರಿತರು ಮತ್ತಷ್ಟು ಸಕ್ರೀಯತೆಯಿಂದ ತೊಡಗಿಸಿಕೊಂಡು ತಮ್ಮ ಹೃದಯ ಶ್ರೀಮಂತಿಕೆಯನ್ನು ವ್ಯಕ್ತಪಡಿಸಿ ಆ ಮೂಲಕ ಸಶಕ್ತ ಯುವ ಸಮಾಜವನ್ನು ಕಟ್ಟುವಲ್ಲಿ ತಮ್ಮ ಕಾಣಿಕೆಯನ್ನು ಸದಾ ಜಾರಿಯಲ್ಲಿರಿಸಬೇಕಾಗಿದೆಯೆಂದು, ಶ್ರೀ ಜಯಾನಂದ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಮೆಸ್ಕಾಂ ಇವರು ತಮ್ಮ ದಿಕ್ಸೂಚಿ ಭಾಷಣದ ಮೂಲಕ ನಿವೇದಿಸಿಕೊಂಡರು.
ಇದೇ ಸಂದರ್ಭದಲ್ಲಿ ಘಟಕದ ಮಾಜಿ ಸಲಹೆಗಾರರಾದ ಸಾಧು ಪೂಜಾರಿ ಇವರನ್ನು ಅಭಿನಂದಿಸಲಾಯಿತು. ಗೂಡುದೀಪ ಕಲಾವಿದ, ಕಲಾ ಸಂಘಟಕ ಜಗದೀಶ್ ಅಮೀನ್ ಸುಂಕದಕಟ್ಟೆ, ರಾಷ್ಟ್ರೀಯ ಕ್ರೀಡಾಳು ಕು. ಪುಷ್ಪಾವತಿ ಪೂಜಾರಿ ಮುಚ್ಚೂರು ಇವರಿಬ್ಬರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಬಜ್ಪೆ ವೆಸ್ಟ್ ಕೋಸ್ಟ್ ವೈನ್ಸ್ ನ ಮಾಲಕರಾದ ಉಮೇಶ್, ಬಜ್ಪೆ ಬಿಲ್ಲವ ಸಂಘದ ಕೋಶಾಧಿಕಾರಿಯಾದ ಬಾಲಕೃಷ್ಣ ಪೂಜಾರಿ, ಯುವವಾಹಿನಿ ಬಜ್ಪೆ ಘಟಕದ ಸಲಹೆಗಾರರಾದ ರವಿಚಂದ್ರ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಅಮೀನ್ ಮುಂತಾದವರು ಉಪಸ್ಥಿತರಿದ್ದರು. ಬಜ್ಪೆ ಘಟಕದ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಪದಗ್ರಹಣ ಕಾರ್ಯಕ್ರಮದ ಪೂರ್ವದಲ್ಲಿ ಬಜ್ಪೆ ಮತ್ತು ಕೆಂಜಾರು-ಕರಂಬಾರು ಯುವಾಹಿನಿ ಘಟಕದ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಘಟಕದ ಕಾರ್ಯದರ್ಶಿ ಕನಕಾ ಮೋಹನ್ ವಾರ್ಷಿಕ ವರದಿ ವಾಚಿಸಿದರು. ಕೇಂದ್ರಾಧ್ಯಕ್ಷ್ಯ ಯಶವಂತ ಪೂಜಾರಿ ಪ್ರತಿಜ್ಞಾವಿಧಿ ಬೋಧಿಸಿದರು. ನೂತನ ಅಧ್ಯಕ್ಷ ದೇವರಾಜ್ ಅಮೀನ್ ಮುನ್ನೋಟ ಬೀರಿದರು.
ಕು| ಗ್ರೀಷ್ಮಾ ಹಾಗೂ ಕು| ಶ್ರೇಯ ಸನಿಲ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ನಿರ್ಗಮನ ಅಧ್ಯಕ್ಷರಾದ ಚಂದ್ರಶೇಖರ್ ಪೂಜಾರಿ ಅತಿಥಿಗಳನ್ನು ಸ್ವಾಗತಿಸಿದರು. ವಿಶ್ವನಾಥ್ ಪೂಜಾರಿ ರೆಂಜಾಳ ನೂತನ ಪದಾಧಿಕಾರಿಗಳ ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ವಿನೀತ್ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ನೂತನ ಕಾರ್ಯದರ್ಶಿ ಸುನಿತಾ ವಂದಿಸಿದರು.

Nice report.keep it up.