ಮುಂಬಯಿ: ತುಳುನಾಡೋಚ್ಚಯ-2017 ಸಂಭ್ರಮದಲ್ಲಿ ಪ್ರದಾನಿಸಲಾಗುವ ‘ತುಳು ರತ್ನ’ ಪ್ರಶಸ್ತಿಗೆ ಮುಂಬಯಿಯ ಹಿರಿಯ ಸಾಹಿತಿ ಹಾಗೂ ಅತ್ತಿಮಬ್ಭೆ ಸಾಹಿತ್ಯ ಪ್ರಶಸ್ತಿ ಪುರಸ್ಕೃತೆ ಡಾ. ಸುನಿತಾ ಎಂ. ಶೆಟ್ಟಿ ಭಾಜನರಾಗಿದ್ದಾರೆ.
ವಿಶ್ವ ತುಳುವೆರೆ ಆಯನೊ ಕೂಟ, ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಡಿ.23 ಮತ್ತು 24ರಂದು ದ.ಕ.ಜಿಲ್ಲೆಯ ಪಿಲಿಕುಳದಲ್ಲಿ ‘ತುಳು ತುಳುನಾಡೋಚ್ಛಯ-2017 ಸಂಭ್ರಮ’ ಜರಗಲಿದೆ ಎಂದು ತುಳುನಾಡೋಚ್ಚಯ ಸಮಿತಿ ಅಧ್ಯಕ್ಷ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ತಿಳಿಸಿದ್ದಾರೆ.
ಡಿ.24ರಂದು ಮಧ್ಯಾಹ್ನ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಸುನಿತಾ ಶೆಟ್ಟಿ ಹಾಗೂ ಮತ್ತಿತರ ಗಣ್ಯರಿಗೆ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು ಎಂದು ತುಳುನಾಡೋಚ್ಚಯ ಪ್ರಧಾನ ಕಾರ್ಯದರ್ಶಿ ಶಮೀನ ಆಳ್ವ ಮಾಹಿತಿನಿಡಿದ್ದಾರೆ.
‘ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಮೆಮೋರಿಯಲ್’ ಪ್ರಶಸ್ತಿಗೂ ಸುನಿತಾ ಶೆಟ್ಟಿ ಆಯ್ಕೆ: ಮುಂಬಯಿನಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಚೆಂಬೂರು ಕರ್ನಾಟಕ ಸಂಘ ಇದರ ವಾರ್ಷಿಕ ಸಾಹಿತ್ಯ-ಸಂಸ್ಕೃತಿ, ಸನ್ಮಾನ ಸಂಭ್ರಮ ‘ಸಾಹಿತ್ಯ ಸಹವಾಸ-2017-18’ ಕಾರ್ಯಕ್ರಮ ಡಿ.23 ರಂದು ಆಯೋಜಿಸಿದ್ದು, ಈ ವೇಳೆ ತುಳುವ ಕನ್ನಡಿಗರಿಗಾಗಿ ವಾರ್ಷಿಕವಾಗಿ ನೀಡುವ ಮೇರು ಪುರಸ್ಕಾರ ‘ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಮೆಮೋರಿಯಲ್’ ಪ್ರಶಸ್ತಿಯನ್ನು ಪ್ರಸಿದ್ಧಿ ಲೇಖಕಿ, ಸಾಹಿತಿ ಡಾ.ಸುನೀತಾ ಎಂ.ಶೆಟ್ಟಿ ಅವರಿಗೆ ಪ್ರದಾನಿಸಲಾಗುತ್ತದೆ ಎಂದು ಸಂಘವು ಪ್ರಕಟನೆಯಲ್ಲಿ ತಿಳಿಸಿದೆ.
ಡಾ.ಸುನಿತಾ ಮಹಾಬಲ ಶೆಟ್ಟಿ: ಡಾ.ಸುನೀತಾ ಶೆಟ್ಟಿ ಅವರು ಶಿವರಾಮ ಕಾರಂತ ಕಾದಂಬರಿಗಳಲ್ಲಿ ‘ಸ್ತ್ರೀ’ ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಮುಂಬಯಿ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದಿಂದ ಪಿಎಚ್ಡಿ ಪದವಿ ಪಡೆದಿದ್ದಾರೆ. ನಾಗ ಸಂಪಿಗೆ, ಪಿಂಗಾರ, ಸಂಕ್ರಾಂತಿ, ಕರಜನ, ಪದಪಣ್ ಕಣ್ಣಾರೋ ಮೊದಲಾದ ಕವನ ಸಂಕಲನ ಪ್ರಕಟಿಸಿದ್ದಾರೆ. ಹಲವು ಪ್ರವಾಸ ಕೃತಿಗಳನ್ನೂ ಹೊರ ತಂದಿರುವರು. ಇವರ ಕವನಗಳ ಧ್ವನಿ ಬಹಳ ಜನಪ್ರಿಯವಾಗಿವೆ.

