ಕಾರ್ಕಳ: ದಿ| ಪ್ರಧಾನಿ ಇಂದಿರಾಗಾಂಧಿ ಈ ದೇಶದ ಇತಿಹಾಸದಲ್ಲಿ ಶಾಶ್ವತ ನೆನಪಿಡುವ ಶಕ್ತಿ. ಧೀರ ಮಹಿಳೆಯಾಗಿ, ಸುಧೀರ್ಘ ಕಾಲ ಪ್ರಧಾನಮಂತ್ರಿಯಾಗಿ ಸಾಕಷ್ಟು ಸುಧಾರಣೆಗಳ ಹರಿಕಾರರಾಗಿ ಗಮನ ಸೆಳೆದಿದ್ದರು. ಈ ದೇಶದ ಐಕ್ಯತೆ-ಸಮಗ್ರತೆಗಾಗಿ ಬಲಿದಾನವಾದ ಇಂದಿರಾ ಸದಾಕಾಲ ಜನ ಮಾನಸದಲ್ಲಿ ಸ್ಥಿರವಾಗಿ ಉಳಿದಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಹೇಳಿದ್ದಾರೆ. ಅವರು ಕಾರ್ಕಳ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಇಂದಿರಾ ಜನ್ಮಶತಾಬ್ಧಿ ಸ್ಮರಣಾರ್ಥ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದರು.
ಬ್ಯಾಂಕ್ ರಾಷ್ಟ್ರೀಕರಣಗೊಳಿಸಿ ಭಾರತದ ಆರ್ಥಿಕತೆಗೆ ಹೊಸ ದಿಕ್ಕು ನೀಡಿದ ಅವರು ರಾಜ್ಯದಲ್ಲಿ ಭೂ ಸುಧಾರಣಾ ಕ್ರ್ರಾಂತಿಗೆ ಹರಿಕಾರರಾದರು. ಬಾಂಗ್ಲಾ ವಿಮೋಚನೆ, ಖಲಿಸ್ಥಾನ ವಿರುದ್ಧ ಬ್ಲೂ ಸ್ಟಾರ್ ಸೈನಿಕ ಕಾರ್ಯಾಚರಣೆಗಳ ದಿಟ್ಟ ನಿರ್ಧಾರಗಳಿಂದ ದೇಶಕ್ಕೆ ಎದುರಾದ ಅಪಾಯಗಳಿಂದ ದೇಶ ರಕ್ಷಿಸಿದರು. ಪಾಕಿಸ್ತಾನದ ವಿರುದ್ಧ ಜಾಗತಿಕವಾಗಿ ಭಾರತದ ಪರವಾದ ನಿಲುವಿಗೆ ಸಮರ್ಥನೆ ದೊರಕಿಸಿ ಕೊಟ್ಟು ಆ ದೇಶದ ವಿರುದ್ಧದ ಸಮರಸದಲ್ಲಿ ಅಪೂರ್ವ ಗೆಲುವು ತಂದುಕೊಟ್ಟ ದಿಟ್ಟ ನಾಯಕಿಯಾಗಿದ್ದರು ಎಂದು ಅವರು ಹೇಳಿದರು.
ಈ ಸಂದರ್ಭ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ, ತಾಲೂಕು ಪಂಚಾಯತ್ ಸದಸ್ಯ ಸುಧಾಕರ ಶೆಟ್ಟಿ ಮುಡಾರು, ಪುರಸಭಾ ಸದಸ್ಯರಾದ ಸುಭಿತ್ ಎನ್.ಆರ್, ಶುಭದ ರಾವ್, ಮಿಯಾರು ಗ್ರಾಮ ಪಂಚಾಯತ್ ಸದಸ್ಯ ತಾರಾನಾಥ ಕೋಟ್ಯಾನ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕಿಣಿ, ಯುವ ಕಾಂಗ್ರೆಸ್ ಮುಖಂಡರಾದ ರಂಜಿತ್ ಸಿ.ಟಿ. ಮಾಳ, ಕೃಷ್ಣ ಎ. ಶೆಟ್ಟಿ ಬರ್ನಂತಲ್ ನಲ್ಲೂರು, ಸುಹಾಸ್ ಕಾವ ಕಡಾರಿ, ಪುಷ್ಪರಾಜ್ ಅಜೆಕಾರು, ಸಂತೋಷ್ ಪೂಜಾರಿ ಮಾಳ ಉಪಸ್ಥಿತರಿದ್ದರು.
