ಕೈಕಂಬ : ಮುಂಬೈಯ ಪರೇಲ್ ಮತ್ತು ಎಲಿಫಿಸ್ಟನ್ ರೋಡ್ ರೈಲು ನಿಲ್ದಾಣ ಸಂಪರ್ಕಿಸುವ ಪಾದಚಾರಿ ಮೇಲ್ಸೇತುವೆಯಲ್ಲಿ ಸೆ. 29ರಂದು ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ವಿಧಿವಶರಾದ ಮುಂಬೈಯ ಹವ್ಯಾಸಿ ನಾಟಕ, ಯಕ್ಷಗಾನ ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಸುಜಾತಾ ಆಳ್ವ(45) ಅವರಿಗೆ ಗುರುಪುರ ಬಂಟರ ಮಾತೃ ಸಂಘ(ರಿ) ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಹಾಗೂ ಪದಾಧಿಕಾರಿಗಳು ತೀವ್ರ ಶೋಕ ವ್ಯಕ್ತಪಡಿಸಿದರು.
ಸುಜಾತರ ಪತಿ ವಾಮಂಜೂರಿನ ತಿರುವೈಲಿನ ಪುರುಷೋತ್ತಮ ಆಳ್ವ ಮುಂಬೈಯಲ್ಲಿ ಉದ್ಯಮಿಯಾಗಿದ್ದಾರೆ. ಕಲಾವಿದೆಯಾಗಿದ್ದ ಸುಜಾತಾರು ನಮ್ಮ ಸಂಘದೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅವರ ಅಗಲಿಕೆಯಿಂದ ಕಲಾಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ ಎಂದು ಶೆಟ್ಟಿ ಶೋಕ ಸಂತಾಪ ವ್ಯಕ್ತಪಡಿಸಿದರು.
ಈ ದುರಂತದಲ್ಲಿ ಬಂಟ ಸಮಾಜದ ಸುಮಲತಾ ಚಂದ್ರಶೇಖರ್ ಶೆಟ್ಟಿ(43) ಎಂಬವರೂ ಮೃತಪಟ್ಟಿದ್ದು, ಇವರು ಕಾರ್ಕಳ ಕಡಂದಲೆ ಹೊೈಗೆಮನೆ ದಿ. ಕೃಷ್ಣ ಶೆಟ್ಟಿ-ಇನ್ನಾ ಪಡುಮನೆ ಲೀಲಾ ಕೆ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದಾರೆ. ಸುಜಾತಾ ಮತ್ತು ಸುಮಲತಾ ಕಾಂಜೂರುಮಾರ್ಗದಲ್ಲಿ ವಾಸಿತ್ತಿದ್ದಾರೆ. ಇವರು ಆತ್ಮೀಯ ಗೆಳತಿಯರಾಗಿದ್ದು, ದಸರ ಹಬ್ಬಕ್ಕೆ ಹೂ, ತರಕಾರಿ ಖರೀದಿಸಲು ಮಾಟುಂಗಾದತ್ತ ತೆರಳಿದ್ದಾಗ ಈ ದುರ್ಘಟನೆ ಸಂಭಿಸಿದೆ.
