ಮುತ್ತೂರು: ಶಿವಸ್ವರೂಪಿಯಾಗಿ ನಿಂತು, ಕ್ಷ-ಕಿರಣದೋಪಾದಿಯಲ್ಲಿ ಕರ್ಮವೆಸಗತಕ್ಕವನೇ- ಶಿಕ್ಷಕ. ಈ ನಿಟ್ಟಿನಲ್ಲಿ ಕಾರ್ಯವೆಸಗಿದಲ್ಲಿ ಅಂತವರನ್ನು ಊರಿಗೆ ಊರೇ ಕೊಂಡಾಡುವುದು.ಇಂತಹ ಹಾದಿಯಲ್ಲಿ ನಡೆದು ಮಾದರಿಯಾಗಿರುವ ಭೌತಶಾಸ್ತ್ರ ಉಪನ್ಯಾಸಕಿ ಕು.ರಶ್ಮಿ ಜಿ. ಇವರ ಸೇವೆ ಅನನ್ಯ, ಅವರಿಗೆ ಒಳಿತಾಗಲಿ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಹಿರಣ್ಯಾಕ್ಷ ಕೋಟ್ಯಾನ್ ನುಡಿದರು.
ಅವರು ಸರ್ಕಾರಿ ಪದವಿಪೂರ್ವ ಕಾಲೇಜು ಮುತ್ತೂರಿನಲ್ಲಿ ಏರ್ಪಡಿಸಲಾಗಿದ್ದ ಭೌತಶಾಸ್ತ್ರ ಉಪನ್ಯಾಸಕಿ ಕು.ರಶ್ಮಿ ಜಿ. ಇವರ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಗೊಂಡು, ಸರ್ಕಾರಿ ಪ್ರಥಮದರ್ಜೆ ಕಾಲೇಜು,ರಿಪ್ಪನ್ಪೇಟೆ, ಶಿವಮೊಗ್ಗ ಜಿಲ್ಲೆ- ಇಲ್ಲಿಗೆ ಸಹಾಯಕ ಪ್ರಾಧ್ಯಾಪಕರಾಗಿ ಕು.ರಶ್ಮಿ ಜಿ.ರವರು ತೆರಳುತ್ತಿರುವ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸಮಾರಂಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಶ್ರೀ ನಾಗೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಶ್ರೀ ಪ್ರವೀಣ್ ಆಳ್ವಾ, ಎಸ್.ಡಿ.ಎಂ.ಸಿ.ಅಧ್ಯಕ್ಷ ಶ್ರೀ ಚಂದ್ರಹಾಸ ಶೆಟ್ಟಿ ಹಾಗೂ ಶ್ರೀ ಜಬ್ಬಾರ್, ಶ್ರೀ ಅಬ್ದುಲ್ ಬಶೀರ್, ಶ್ರೀಮತಿ ರುಕ್ಮಿಣಿ, ಶ್ರೀ ಉಸ್ಮಾನ್ ಜಿ., ಶ್ರೀ ಸಿಪ್ರಿಯನ್ ಡಿ’ಸೋಜಾ, ಪ್ರಾಂಶುಪಾಲ ಶ್ರೀ ನಿರಂಜನ್ ಎ. ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಕಾಲೇಜು ವತಿಯಿಂದ ರಶ್ಮಿ ಜಿ. ರವರನ್ನು ಸನ್ಮಾನದೊಂದಿಗೆ ಬೆಳ್ಳಿಯ ದೀಪವನ್ನು ಸ್ಮರಣಿಕೆಯನ್ನಾಗಿ ನೀಡಿ, ಸನ್ಮಾನಪತ್ರದೊಂದಿಗೆ ವಿಶಿಷ್ಟವಾಗಿ ಗೌರವಿಸಲಾಯಿತು.
ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ವಿದಾಯ ಗೀತೆಗಳನ್ನು ಹಾಡಿದರು. ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕು.ರಶ್ಮಿ ಜಿ. ರವರು ಸಂಸ್ಥೆಯೊಂದಿಗಿನ ತಮ್ಮ ಒಡನಾಟದ ಅನುಭವಗಳನ್ನು ಹಂಚಿಕೊಂಡರು.
ಶ್ರೀಮತಿ ರಂಜಿತಾ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಕು.ಅಮೃತಾ ಸ್ವಾಗತಿಸಿದರು. ಶ್ರೀಮತಿ ಗಾಯತ್ರಿ ಸನ್ಮಾನಪತ್ರ ವಾಚಿಸಿದರು ಹಾಗೂ ಕು.ರೇಷ್ಮಾ ವಂದಿಸಿದರು.

