ಸುದ್ದಿ9 ಕೈಕಂಬ: ಭಸ್ಮ ಹಾಕಿದ್ದಾರೆ ಮಾಟ ಕಳೆಯುತ್ತೇನೆ ಎಂದು ಯುವತಿಯೋರ್ವಳ ಬೆನ್ನು ಬಿದ್ದ ಮಂತ್ರವಾದಿಯ ಭೂತ ಬಿಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ವಾಟ್ಸ್ಆಪ್ನಲ್ಲಿ ಹರಿದಾಡಿ ಭಾರೀ ಸುದ್ದಿ ಮಾಡುತ್ತಿದೆ. ಅಲ್ಲದೆ ಈತನನ್ನು ಪೊಲೀಸರಿಗೆ ಒಪ್ಪಿಸದೆ ತಾನೇ ಕಾನೂನುನ್ನು ಕೈಗೆತ್ತಿಕೊಂಡವರ ಬಗ್ಗೆಯೂ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಗಂಜಿಮಠ ಸಮೀಪದ ಸುರೇಶ್ ಆಚಾರ್ಯ(45) ಎಂಬಾತನೇ ಭಸ್ಮ ಹಾಕಿ ಜನರನ್ನು ನಂಬಿಸಿ ಹಣ ಪೀಕಿಸುತ್ತಿದ್ದ ನಕಲಿ ಮಂತ್ರವಾದಿ.

ಘಟನೆಯ ವಿವರ: ಸುರೇಶ್ ಆಚಾರ್ಯ ಗಂಜಿಮಠ ಪರಿಸರದಲ್ಲಿ ಹಾವಿಗೆ ವಿಷ ನೀಡುವ ಕೆಲಸ ಮಾಡುತ್ತಿದ್ದ. ಅಲ್ಲದೆ ಮೆಣಸು, ಸೋರೆಕಾಯಿ, ಹೀರೆಕಾಯಿ, ಬೆಂಡೆಕಾಯಿ ಮುಂತಾದುವುಗಳ ಮೂಲಕ ಭಸ್ಮ ಹಾಕಿ ಮಾಟ ಮಾಡುವ ಕಲೆಯನ್ನು ಸಿದ್ದಿಸಿಕೊಂಡು ಯಾರ್ಯಾರ ಮನೆಗೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ ಬಂಟ್ವಾಳ ಠಾಣಾ ವ್ಯಾಪ್ತಿಯ ಪಲ್ಲಿಪಾಡಿ ಸಮೀಪದಲ್ಲಿ ಯುವತಿಯೋರ್ವಳ ಮನೆಯವರಿಗೆ ನಿಮ್ಮ ಮನೆಗೆ ಮಾಟ ಮಾಡಲಾಗಿದೆ ಎಂದು ಈತ ಮನೆಯವರಲ್ಲಿ ಹೇಳಿ ಮಾಟ ತೆಗೆಯಲು ದಂಬಾಲು ಬಿದ್ದಿದ್ದ. ಇದರಂತೆ ಸುರೇಶ್ ಆಚಾರ್ಯ ಆ ಮನೆಗೆ ಬಂದು ಮಾಟ ಕಳೆಯುವ ಭರವಸೆ ಇತ್ತಿದ್ದ. ಅಲ್ಲದೆ ಯುವತಿಯ ಫೋನ್ ನಂಬ್ರವನ್ನು ಪಡೆದುಕೊಂಡು ಆಕೆಯ ಜೊತೆ ಮಾತಾಡುತ್ತಿದ್ದ ಎನ್ನಲಾಗಿದೆ.
ಒಂದು ದಿನ ಇದ್ದಕ್ಕಿದ್ದಂತೆ ಮಧ್ಯಾಹ್ನದ ವೇಳೆಗೆ ಯುವತಿಗೆ ಕರೆ ಮಾಡಿದ ಸುರೇಶ ನಾನು ನಿನ್ನ ಮನೆಗೆ ಮಾಟ ಕಳೆಯಲು ಬರುತ್ತೇನೆ, ಮನೆಯಲ್ಲಿ ಯಾರೂ ಇರಬಾರದು ಎಂದು ಹೇಳಿ, ಯುವತಿಯನ್ನು ಮಂಗ ಮಾಡಲು ನೋಡಿದ್ದ. ಯುವತಿಗೆ ಅಚ್ಚರಿಯಾದರೂ ಈತನ ಗ್ರಹಚಾರ ಬಿಡಿಸಬೇಕೆಂದು ಓಕೆ ಅಂದೇಬಿಟ್ಟಳು. ಆದರೆ ಈ ವಿಷಯವನ್ನು ಸ್ಥಳೀಯ ಯುವಕರಿಗೂ ತಿಳಿಸಿದ್ದಳು. ಯುವಕರು ಯುವತಿ ಮನೆಯಲ್ಲಿ ಮರೆಯಾಗಿ ಕೂತು ಸುರೇಶ್ ಆಚಾರ್ಯನ ಕಿತಾಪತಿಯನ್ನು ಲೈವ್ ಆಗಿ ನೋಡಲು ಮಹೂರ್ತ ಸಿದ್ಧಪಡಿಸಿದರು.
ಸಂಜೆಯಾಗುತ್ತಿದ್ದಂತೆ ವಕ್ಕರಿಸಿದ ಸುರೇಶ ಲಗುಬಗೆಯ ಬಣ್ಣಬಣ್ಣದ ನೀರನ್ನು ತಂದು ಮಾಟಕಳೆಯುವ ಭರವಸೆ ನೀಡಿದ. ಯುವತಿ ಆತ ಹೇಳಿದಂತೆ ಕೇಳಿದಳು ಎನ್ನಲಾಗಿದೆ. ಆಕೆಗೆ ಭಸ್ಮದ ನೀರು ಕುಡಿಸುವ ಯತ್ನದಲ್ಲಿದ್ದ ತನ್ನ `ಕೆಲಸ’ಕ್ಕೆ ಕೈ ಹಾಕುವ ಯತ್ನದಲ್ಲಿದ್ದಾಗಲೇ ಅಲ್ಲಿಗೆ ನುಗ್ಗಿ ಬಂದ ಸ್ಥಳೀಯ ಯುವಕರು ಆತನ ಮೇಲೆ ಹಿಗ್ಗಾಮಗ್ಗ ಥಳಿಸಿ ಗ್ರಹಚಾರ ಬಿಡಿಸತೊಡಗಿದರು.
ಆತನಿಗೆ ಚೆನ್ನಾಗಿ ಬೈಯ್ದು, ಗ್ರಹಾಚಾರ ಬಿಡಿಸಿದ್ದಷ್ಟೇ ಅಲ್ಲದೆ, ಮೊಬೈಲ್ ಮೂಲಕ ರೆಕಾರ್ಡ್ ಮಾಡಲಾರಂಭಿಸಿದ್ದಾರೆ. ಈ ವಿಡಿಯೋದಲ್ಲಿ ಆತನನ್ನು ಪೊಲೀಸರಿಗೆ ಒಪ್ಪಿಸುವ ಮತಾಡಿದರೂ ಹಾಗೆ ಮಾಡದ ಸ್ಥಳೀಯರು ಪೊಲೀಸರಿಗೆ ಒಪ್ಪಿಸದೆ ಅವನಿಗೆ ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ ಎನ್ನಲಾಗಿದೆ.


