ಬಂಟ್ವಾಳ: ನಮ್ಮ ಬದುಕು ಹೆಮ್ಮರವಾಗಿ ಬೆಳೆಯಬೇಕು, ಆ ಮೂಲಕ ಸ್ವಾರ್ಥ ರಹಿತ ನೆರಳನ್ನು ಸಮಾಜಕ್ಕೆ ನೀಡಬೇಕು. ಆಪತ್ತು ಹಾಗೂ ಸಂಪತ್ತು ಎರಡೂ ನಮ್ಮ ನಾಲಿಗೆಯ ತುದಿಯಲ್ಲಿದೆ. ಅವುಗಳನ್ನು ಬಳಸಿಕೊಳ್ಳುವ ವಿಧಾನ ನಮಗೆ ತಿಳಿದಿರಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಫರಂಗಿಪೇಟೆಯ ಹಿಂದೂ ಧಾರ್ಮಿಕ ಸೇವಾ ಸಮಿತಿಯ ವತಿಯಿಂದ ಸೇವಾಂಜಲಿ ಸಭಾಂಗಣದಲ್ಲಿ ನಡೆದ 11ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಲಕ್ಷ್ಮೀ ಚಲನಶೀಲೆ, ಸರಸ್ವತಿ ಸ್ಥಿರವಾದವಳು. ಜ್ಞಾನಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿಯ ಮೂಲಕ ಪರಿಶ್ರಮದಿಂದ ಬಂದ ಲಕ್ಷ್ಮೀ ಮಾತ್ರ ನಮ್ಮೊಂದಿಗೆ ಉಳಿಯಲು ಸಾದ್ಯವಿದೆ. ಲಕ್ಷ್ಮೀ ನಾರಾಯಣರಂತಹ ಆದರ್ಶ ದಾಂಪತ್ಯ ಜೀವನವನ್ನು ಸತಿಪತಿಗಳು ಬದುಕಬೇಕು ಎಂದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕಷ್ಣಕುಮಾರ್ ಪೂಂಜಾ ಮಾತನಾಡಿ ಹಿಂದೂ ಸಮಾಜದಲ್ಲಿನ ಮೇಲು, ಕೀಳು, ಸ್ಪ್ರಶ್ಯ ಅಸ್ಪ್ರಶ್ಯ ಭಾವನೆಗಳು ಧೂರವಾಗಬೇಕಾದರೆ ಇಂತಹ ಸಾಮೂಹಿಕ ಆಚರಣೆಗಳನ್ನು ನಡೆಸುವ ಅಗತ್ಯತೆ ಇದೆ. ಸಮಾಜದ ಒಳಿತಿಗಾಗಿ ಪ್ರತಿ ವರ್ಷವೂ ವರಮಹಾಲಕ್ಷ್ಮೀ ವೃತಚಾರಣೆಯನ್ನು ಮಾಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಸುಜೀರುಗುತ್ತು ಅಮರ್ಆಳ್ವ ದಂಪತಿ ಹಾಜರಿದ್ದರು. ಅಪಾರಸಂಖ್ಯೆಯಲ್ಲಿ ಮಹಿಳೆಯರು ವರಮಹಾಲಕ್ಷ್ಮೀ ವೃತಾಚರಣೆ ಕೈಗೊಂಡು ಪ್ರಸಾದ ಸ್ವೀಕರಿಸಿದರು.
