ಬಂಟ್ವಾಳ: ಬಿ.ಸಿ.ರೋಡಿನ ತಾಲೂಕು ಕಚೇರಿ ಬಳಿಯಿಂದ ಕೈಕುಂಜೆವರೆಗೆ ಸುಮಾರು 75 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮ ಣಗೊಳ್ಳುತ್ತಿರುವ ರಸ್ತೆಯ ಕಾಂಕ್ರೀಟ್ ಕಾಮಗಾರಿ ಅಧಿಕಾರಿಗಳು ಭರವಸೆ ನೀಡಿದ ಬಳಿಕವೂ ನೆನೆಗುದಿಗೆ ಬಿದ್ದಿರುವುದನ್ನು ಖಂಡಿಸಿ ಬಿ.ಸಿ.ರೋಡು ಹಾಗೂ ಕೈಕುಂಜೆ ಪರಿಸರದ ನಾಗರೀಕರು ಮಂಗಳವಾರ ದಿಢೀರ್ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.
ಹಲವು ವರ್ಷಗಳಿಂದ ಡಾಮಾರು ಕಾಣದೆ ಹೊಂಡಗಳಿಂದ ತುಂಬಿ ಹೋಗಿದ್ದ ಬಿ.ಸಿ.ರೋಡು- ಕೈಕುಂಜೆವರೆಗೆಗಿನ ಸುಮಾರು ಅರ್ಧ ಕಿ.ಮೀ ಉದ್ದದ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ದಿ ಹಾಗೂ ಕಾಂಕ್ರೀಟಿಕರಣಗೊಳಿಸಲು ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆಯಡಿ ಪುರಸಭೆ ಕಾಮಾಗರಿ ಕೈಗೊಂಡು ಗುತ್ತಿಗೆಯನ್ನು ಕೆಬಿಆರ್ ಇನ್ಫೋಟೆಕ್ ಸಂಸ್ಥೆಗೆ ವಹಿಸಿಕೊಂಡಿತ್ತು. ಸುಮಾರು ಎರಡು ತಿಂಗಳ ಕಾಲ ವಿಳಂಬವಾಗಿ ಆರಂಭಗೊಂಡ ಕಾಮಾಗರಿ ಕುಂಟುತ್ತಾ ಸಾಗಿತ್ತು. ಈ ನಡುವೆ ಕೇವಲ ಒಂದು ಪಾಶ್ರ್ವದ ಕಾಂಕ್ರೀಟ್ ಕಾಮಗಾರಿ ಮುಗಿಸಿರುವ ಗುತ್ತಿಗೆ ಸಂಸ್ಥೆ ಇನ್ನೊಂದು ಪಾಶ್ರ್ವದ ಕಾಮಗಾರಿ ಕೈಗೆತ್ತಿಕೊಳ್ಳದೆ ಸ್ಥಗಿತಗೊಳಿಸಿತ್ತು. ಅರೆಬರೆ ಕಾಮಗಾರಿಯಿಂದ ಆಕ್ರೋಶಗೊಂಡಿದ್ದ ಸ್ಥಳೀಯರು ಕಳೆದ ಮೇ 15ರಂದು ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದ್ದರು. ಈ ಸಂದರ್ಬ ಸ್ಥಳಕ್ಕೆ ಆಗಮಿಸಿದ್ದ ಪುರಸಭಾ ಅಧಿಕಾರಿಗಳಿಗೆ ಪ್ರತಿಭಟನಾಕಾರರು ದಿಗ್ಭಂದನ ಹಾಕಿದಾಗ ಬಂಟ್ವಾಳ ನಗರ ಎಸೈ ನಂದಕುಮಾರ್ ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಕಾಮಗಾರಿ ಮರು ಪ್ರಾರಂಭಿಸುವುದಾಗಿ ಭರವಸೆ ನೀಡಿ ಎರಡು ವಾರ ಸಮೀಪಿಸುತ್ತಾ ಬಂದರೂ ಕೆಲಸ ಆರಂಭವಾಗುವ ಯಾವುದೇ ಲಕ್ಷಣ ಕಾಣಿಸದೇ ಬೇಸತ್ತ ಸ್ಥಳೀಯ ನಾಗರೀಕರು ಮತ್ತೆ ಪ್ರತಿಭಟನೆ ನಡೆಸಿದರು. 2013ರ ಅಗಸ್ಟ್ 16 ರಿಂದ 2014 ಮೇ 31 ಕಾಮಾಗಾರಿ ಅವಧಿಯಾಗಿದೆ. ಆದರೆ ಅವಧಿ ಮುಗಿಯುತ್ತಾ ಬಂದರೂ ಇನ್ನೊಂದು ಪಾಶ್ರ್ವದ ಕಾಂಕ್ರೀಟ್ ಕಾಮಾಗರಿ, ಚರಂಡಿ ಕಾಮಗಾರಿಯೇ ಆರಂಭವಾಗದೇ ಇರುವುದು ವಿಪರ್ಯಾಸ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಅಂತಿಮವಾಗಿ ತಹಶೀಲ್ದಾರ್ ಮ್ಲಲೇಸ್ವಾಮಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬುದವಾರ ಬೆಳಿಗ್ಗೆ ಕಾಮಾಗರಿ ಆರಂಭಿಸಲು ಗುತ್ತಿಗೆ ಸಂಸ್ಥೆಗೆ ಸೂಚಿಸಿಲಾಗಿದೆ. ಗುತ್ತಿಗೆ ಸಂಸ್ಥೆಯ ನಿರ್ಲಕ್ಷ ಧೋರಣೆಯ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪುರಸಭಾ ಸದಸ್ಯ ಸುಗುಣ ಕಿಣಿ, ಪ್ರಮುಖರಾದ ಸುಷ್ಮಾ, ರಮೆಶ್ ಸಾಲ್ಯಾನ್, ರಾಮಚಂದ್ರ ರಾವ್, ಶಾಂತರಾಮ ಕೈಕುಂಜಾ, ಮಾಧವ ಕುಲಾಲ್, ವಿಶ್ವನಾಥ ಎನ್,ಆರ್. ಶಶಿಧರ ಕೈಕುಂಜಾ, ರೋನಾಲ್ಡ್ ಡಿಸೋಜಾ, ಯಾದವ ಅಗ್ರಬೈಲು, ಸುಕುಮಾರ್ ಮತ್ತಿತರರು ಹಾಜರಿದ್ದರು
