ಸುದ್ದಿ9 ಕಿನ್ನಿಗೋಳಿ; ಐಕಳ ಗ್ರಾಮ ಪಂಚಾಯಿತಿಯ ಪರವಾನಿಗೆ ಇಲ್ಲದಿದ್ದರೂ ಇಲ್ಲಿನ ಕೊರೆಗಳು ಅಕ್ರಮವಾಗಿ ಕಾರ್ಯಚರಿ ರಿಸುತಿದೆ. 2012ರಲ್ಲಿ ಸ್ಥಳೀಯ ಐಕಳ ಗ್ರಾಮಸ್ಥರು ಜಿಲ್ಲಾಡಳಿತ, ಪೋಲೀಸ್ ಕಮಿಷನರ್ ಹಾಗೂ ವಿಧಿ ವಿಜ್ಞಾನ ಇಲಾಖೆಗೆ ದೂರು ನೀಡಿ ಮನವಿ ಸಲ್ಲಿಸಿದರೂ ಯಾವುದೇ ಪ್ರತಿ ಸ್ಪಂದನೆ ದೊರಕಿಲ್ಲ ಎಂದು ಐಕಳ ಗ್ರಾಮ ಉಳಿಸಿ ಹೋರಾಟ ಸಮಿತಿ ಗೌರವಾಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.
ಸೋಮವಾರ ಸಂಜೆ ಐಕಳದ ನೆಲ್ಲಿಗುಡ್ಡೆಯಲ್ಲಿ ನಡೆದ ಐಕಳ ಗ್ರಾಮ ಉಳಿಸಿ ಹೋರಾಟ ಸಮಿತಿಯ ಸಭೆಯಲ್ಲಿ ಮಾತನಾಡಿದರು.
ಭಾನುವಾರ ಐಕಳದ ನೆಲ್ಲಿಗುಡ್ಡೆ ಕೋರೆಯಲ್ಲಿ ಅನಿರೀಕ್ಷಿತ ಸ್ಪೋಟ ಸಂಭವಿಸಿ ಇಬ್ಬರು ದಾರಣವಾಗಿ ಮೃತ ಪಟ್ಟಿದ್ದು ಈ ಹೃದಯ ವಿದ್ರಾವಕ ಘಟನೆಗೆ ಸಂಬಂಧ ಪಟ್ಟ ಇಲಾಖೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ನೇರ ಹೊಣೆಯಾಗಿದ್ದಾರೆ.
ಮೆಸ್ಕಂ ಇಲಾಖೆ ವಿದ್ಯುತ್ ನೀಡುವುದನ್ನು ಕಡಿತ ಮಾಡಿ ಕೆಲವು ತಿಂಗಳುಗಳು ಆದರೂ ಸಂಬಂಧ ಪಟ್ಟ ಇಲಾಖೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸದೇ ದಿವ್ಯ ನಿರ್ಲಕ್ಷ ಹೊಂದಿರುವುದು ಖಂಡನೀಯ. ಸುರಕ್ಷತಾ ಸ್ಥಳದಲ್ಲಿರಿಸದೇ ಅಕ್ರಮವಾಗಿ ಸ್ಪೋಟಕಗಳನ್ನು ದಾಸ್ತಾನು ಇರಿಸುವುದು, ಮತ್ತು ಮುಂಜಾಗ್ರತ ಕ್ರಮಗಳನ್ನು ವಹಿಸದಿರುವುದು, ಕಾನೂನು ಬಾಹಿರ. ಇಲ್ಲಿನ ಎಲ್ಲಾ ಕಲ್ಲಿನ ಕೋರೆಗಳನ್ನು ಸ್ಥಗಿತಗೊಳಿಸಬೇಕು ಇಲ್ಲವಾದಲ್ಲಿ ಕಾನೂನು ಬದ್ಧ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಇಲ್ಲಿ ಪ್ರಾಣ ಹೋಗುವಂತಹ ಸ್ಪೋಟ ಪ್ರಕರಣ ನಡೆದರೂ ಸಂಸದರು, ಸಚಿವರು, ಉಸ್ತುವಾರಿ ಸಚಿವರು ಭೇಟಿ ನೀಡಿ ಸಾಂತ್ವನ ನೀಡಿಲ್ಲ. ಸ್ಥಳೀಯ ಗ್ರಾಮಸ್ಥರು, ಕೂಲಿ ಕಾರ್ಮಿಕರು ಹಾಗೂ ಮೃತ ಪಟ್ಟ ತಮಿಳುನಾಡು ಮೂಲದ ಕೂಲಿಕಾರ್ಮಿಕರ ಬಗ್ಗೆ ಎಳ್ಳಷ್ಟು ಕಾಳಜಿ ವಹಿಸಿಲ್ಲ. ಪರವಾನಿಗೆ ಇರದ ಎಲ್ಲಾ ಕೋರೆಗಳನ್ನು ತಕ್ಷಣದಿಂದ ನಿಲ್ಲಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸಮಿತಿಯ ಅಧ್ಯಕ್ಷ ರಾಬರ್ಟ್  ರೋಸಾರಿಯೋ, ಸಂಚಾಲಕ ಚಿತ್ತರಂಜನ್ ಭಂಡಾರಿ, ಸಮಿತಿಯ ಪದಾಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *