ಮೂಲ್ಕಿ: ಕಿನ್ನಿಗೋಳಿ-ಐಕಳದ ನೆಲ್ಲಿಗುಡ್ಡೆಯ ಕಪ್ಪು ಕಲ್ಲಿನ ಕ್ವಾರೆಯ ಕಾಲೋನಿಯಲ್ಲಿನ ವಸತಿ ಪ್ರದೇಶದಲ್ಲಿ ಸ್ಪೋಟ ಸಂಭವಿಸಿ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಾರೆಯ ಮಾಲಕ ಹಾಗೂ ಮೆನೇಜರ್ನನ್ನು ಮೂಲ್ಕಿ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಮಂಗಳೂರಿನ ಬೊಂದೆಲ್ ನಿವಾಸಿ ಕ್ವಾರೆಯ ಮಾಲಕ ಸಂತೋಷ್ ಮಿನೇಜಸ್ ಹಾಗೂ ಕ್ವಾರೆಯ ಮೆನೇಜರ್ ಡೆನಿಸ್ ಮಿನೇಜಸ್ನನ್ನು ಬಂಧಿತ ಆರೋಪಿಗಳು.

ಇತ್ತೀಚೆಗೆ ಹರ್ಯಾಣದಲ್ಲಿ ಬಂಧಿತನಾದ ಕೇರಳ ಮೂಲದ ಬಿಜು ಥೋಮಸ್ ಕಾರ್ಕಳ ಪೊಲೀಸರ ವಶದಲ್ಲಿದ್ದು ಕ್ವಾರೆ ಮಾಲಿಕನಿಗೂ, ಬಿಜುವಿಗೂ ಒಬ್ಬರಿಗೊಬ್ಬರಿಗೆ ಲಿಂಕ್ ಇದೆಯಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ವಾರೆ ಕಾರ್ಮಿಕ ಶಿವಮೊಗ್ಗದ ನಾಗರಾಜ್ ದೂರಿನಂತೆ ಮೂಲ್ಕಿ ಪೊಲೀಸರು ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಸ್ಪೋಟದಲ್ಲಿ ಸಾವಿಗೀಡಾದ ತಮಿಳುನಾಡು ಮೂಲದ ಕೊನಗಪಾಡಿ ಸೇಲಂ ನಿವಾಸಿಗಳಾದ ಎರಿಚಮ್ಮ(53) ಹಾಗೂ ಆಕೆಯ ಪುತ್ರ ಪರಮನ್ ಉತ್ತಂಡಿ(25) ಶವವನ್ನು ಶವಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಿಕರಿಗೆ ಒಪ್ಪಿಸಲಾಗಿದೆ.
ಸ್ಫೋಟಕ್ಕೆ ಕಾರಣ ಇನ್ನೂ ನಿಗೂಢ!
ಈ ಸ್ಪೋಟಕ್ಕೆ ಸ್ಪಷ್ಟ ಕಾರಣ ಇನ್ನೂ ನಿಗೂಢವಾಗಿದ್ದು ತಜ್ಞರು ಹಾಗೂ ಶ್ವಾನದಳದ ಸಹಾಯದಿಂದ ತನಿಖೆ ನಡೆಸಲಾಗುತ್ತಿದೆ. ಸ್ಫೋಟಕ್ಕೆ ಕಾರಣವಾದ ವಸ್ತುವಿನ ಪತ್ತೆಗಾಗಿ ಛಿದ್ರಗೊಂಡ ದೇಹದ ಒಂದು ಭಾಗವನ್ನು ಜೊತೆಗೆ ಫೋರೆನ್ಸಿಕ್ ಲ್ಯಾಬ್ಗೆ ಕಳುಹಿಸಿಸಲಾಗಿದೆ. ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ನ ರೆಗ್ಯುಲೇಟರ್ ಮಾತ್ರ ಸಿಕ್ಕಿದ್ದು ಉಳಿದ ಅವಶೇಷ ಘಟನಾ ಸ್ಥಳದಲ್ಲಿ ಕಂಡು ಬಂದಿದೆ. ಆದರೆ ಕಲ್ಲಿನ ಕೋರೆಯನ್ನು ಸ್ಪೋಟಿಸುವ ವಸ್ತುಗಳಾದ ಅಮೊನಿಯಂ ನೈಟ್ರೇಟ್, ಜಿಲೇಟಿನ್ ಕಡ್ಡಿಗಳು, ಇನ್ನಿತರ ಸ್ಪೋಟಕ ಸಾಮಗ್ರಿಗಳು ಸಹ ಕೋಣೆಯಲ್ಲಿ ಪತ್ತೆಯಾಗಿದ್ದು, ಆರಂಭದಲ್ಲಿ ಗ್ಯಾಸ್ನ ಕಿಡಿ ಸ್ಪೋಟಕ ವಸ್ತುವಿಗೆ ಬಿದ್ದು ನಂತರ ಭೀಕರವಾಗಿ ಸ್ಪೋಟಗೊಂಡಿರಬಹುದು ಎಂಬ ಸಂಶಯವಿದೆ. ಇದೇ ಕಾರಣವಾಗಿ ಅಕ್ರಮವಾಗಿ ಸ್ಪೋಟಕ ದಾಸ್ತಾನನ್ನು ಹೊಂದಿದ್ದಾರೆ ಎಂಬ ನೆಲೆಯಲ್ಲಿ ಮಾಲೀಕರ ಸಹಿತ ಮೇಲ್ವಿಚಾರಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಕಳದ ಸುತ್ತಮುತ್ತ ಇರುವ ಕ್ವಾರೆಗಳಿಗೆ ಪಂಚಾಯತ್ ಅನುಮತಿ ಇದೆಯಾ? ಕ್ವಾರೆ ಮಲಕರು ಅದರ ಸುರಕ್ಷತೆಗೆಂದು ಏನು ಕ್ರಮ ಕೈಗೊಂಡಿದ್ದಾರೆ ಎಂಬುವುದರ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ವರದಿಯ ಆಧಾರದಲ್ಲಿ ನಿರ್ಧರಿಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ

