ಬಜ್ಪೆ: ಕುಡಿತದ ಮತ್ತಲ್ಲಿದ್ದ ಮೂವರು ದುಷ್ಕರ್ಮಿಗಳು ಬಸ್ನೊಳಗಡೆ ನುಗ್ಗಿ ಬಸ್ ಡ್ರೈವರ್ ಹಾಗೂ ಕಂಡಕ್ಟರ್ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬಸ್ ಗಾಜುಗಳನ್ನು ಪುಡಿಗಟ್ಟಿ ದಾಂಧಲೆ ನಡೆಸಿದ ಘಟನೆ ಶುಕ್ರವಾರ ಮಧ್ಯಾಹ್ನ ಕಟೀಲ್ ರಸ್ತೆಯ ಶಿಬರೂರು ದೈವಸ್ಥಾನದ ದ್ವಾರದ ಸಮೀಪದ ನಡೆದಿದೆ. ದುಷ್ಕರ್ಮಿಗಳಿಂದ ಹಲ್ಲೆಗೊಳಗಾದವರನ್ನು ಮಂಗಳೂರಿನಿಂದ ಕಿನ್ನಿಗೋಳೀಗೆ ಸಂಚರಿಸುವ ನವದುರ್ಗಾ ಬಸ್ ಡ್ರೈವರ್ ಸುನಿಲ್ ಹಾಗೂ ಕಂಡಕ್ಟರ್ ತಾರಾನಾಥ ಎಂದು ಗುರುತಿಸಲಾಗಿದೆ.
ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಇದೇ ರೂಟಿನಲ್ಲಿ ಸಂಚರಿಸುವ ಗೋಲ್ಡನ್ ಬಸ್ ಸಿಬ್ಬಂದಿ ಎಕ್ಕಾರು ದುರ್ಗಾ ನಗರದ ನಿವಾಸಿಗಳಾದ ಸುರೇಶ್ ಎಕ್ಕಾರು, ಪ್ರಸಾದ್ ಶೆಟ್ಟಿ ಮತ್ತು ಬಸ್ಸಿನ ಕ್ಲೀನರ್ ಉಮೇಶ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಬಜ್ಪೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕುಡಿತದ ಮತ್ತಲ್ಲಿದ್ದ ದುಷ್ಕರ್ಮಿಗಳು ಶಿಬರೂರು ದ್ವಾರದ ಸಮೀಪ ಬಸ್ಸನ್ನು ಅಡ್ಡಗಟ್ಟಿ ಬಸ್ಗೆ ಏಕಾಏಕಿ ನುಗ್ಗಿ ಮರದ ಸೋಂಟೆ, ಲಿವರ್ ಹಾಗೂ ಕಲ್ಲಿನಿಂದ ಜಜ್ಜಿ ಬಸ್ ಕನ್ನಡಿಗೆ ಹಾನಿಗೊಳಿಸಿ, ಡ್ರೈವರ್ಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಕಂಡಕ್ಟರ್ನನ್ನು ಬೆನ್ನಟ್ಟಿ ಅವರ ಕೌಂಟಿಂಗ್ ಮಿಶೀನನ್ನು ಹಾನಿಗೊಳಿಸಿದ್ದಾರೆ.
ಅಲ್ಲದೆ ಚಾಲಕ ಹಾಗೂ ಕಂಡಕ್ಟರ್ನ ಕಿಸೆಯಲ್ಲಿದ್ದ ಹಣ, ಡ್ರೈವರ್ನ ವಾಚ್, ಚೈನ್ ಉಂಗುರು ದರೋಡೆಗೈದು ಪರಾರಿಯಾಗಿದ್ದಾರೆಂದು ಹೇಳಲಾಗಿದೆ. ಬಸ್ ಕಂಡಕ್ಟರ್ನನ್ನು ಬೆನ್ನಟ್ಟಿದ ದುಷ್ಕರ್ಮಿಗಳು, ಅವರು ಇನ್ನೊಂದು ಬಸ್ ಹತ್ತಿದರೂ ಬಿಡದೆ ಹಲ್ಲೆ ನಡೆಸಲು ಮುಂದಾಗಿದ್ದಾರೆ.
ದುಷ್ಕರ್ಮಿಗಳ ರೌದ್ರಾವತಾರವನ್ನು ಕಂಡು ಬಸ್ ಪ್ರಯಾಣಿಕರುಮ ಶಾಲಾ ಮಕ್ಕಳು ಬೆಚ್ಚಿಬಿದ್ದಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ದುಷ್ಕರ್ಮಿಗಳನ್ನು ಬಸ್ನಿಂದ ಎಳೆದು ಪೊಲೀಸರಿಗೆ ಮಾಹಿತಿ ನೀಡಿ ಅವರಿಗೊಪ್ಪಿಸಿದ್ದಾರೆ. ಹಲ್ಲೆಗೊಳಗಾದವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಬಜ್ಪೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ




