ಮಿರ್ಪುರ: ಸತತವಾಗಿ ನಾಲ್ಕು ಗೆಲುವುಗಳಿಂದ ಟೀಂ ಇಂಡಿಯಾ ಆತ್ಮವಿಶ್ವಾಸ ಗರಿಗೆದರಿದೆ. ಆದರೆ ಯುವರಾಜ್ ಸಿಂಗ್ ಮೊಣಕಾಲಿಗೆ ಗಾಯವಾಗಿರುವುದು ಟೀಂ ಇಂಡಿಯಾಗೆ ಚಿಂತೆವುಂಟುಮಾಡಿದೆ. ಯುವರಾಜ್ ಫುಟ್ಬಾಲ್ ಅಭ್ಯಾಸದಲ್ಲಿ ತೊಡಗಿದ್ದಾಗ ಮೊಣಕಾಲಿಗೆ ಗಾಯವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಂತಿಮ 11 ಆಟಗಾರರ ಆಯ್ಕೆ ಟೀಂ ಇಂಡಿಯಾಗೆ ಒಗಟಾಗಿದೆ.ಅಷ್ಟೊಂದು ಫಾರ್ಮ್ ನಲ್ಲಿಲ್ಲದ ಯುವಿ ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಫಾರ್ಮ್ ಗೆ ಮರಳಿದ್ದರು.

ಅಜಿಂಕ್ಯಾ ರೆಹಾನೆ ಫಾರಂನಲ್ಲಿಲ್ಲದ ಶಿಖರ್ ಧವನ್ ಬದಲಿಗೆ ಮತ್ತು ಮೋಹಿತ್ ಶರ್ಮಾ ಅವರನ್ನು ಮೊಹ್ಮದ್ ಶಮಿ ಬದಲಿಗೆ ಉಳಿಸಿಕೊಳ್ಳಬಹುದೇ ಎನ್ನುವ ಗೊಂದಲದಲ್ಲಿ ಟೀಂ ಇಂಡಿಯಾ ಇದೆ. ಧವನ್ ವಿನಾಶಕಾರಿ ಬ್ಯಾಟ್ಸ್ಮನ್ ಆಗಿದ್ದರೂ ಫಾರಂನಲ್ಲಿಲ್ಲ. ಇದು ರಹಾನೆ ಅವರು ತಂಡದಲ್ಲಿ ಸ್ಥಾನ ಪಡೆಯಲು ಅನುಕೂಲ ಮಾಡಬಹುದು. ಯುವರಾಜ್ ಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೆ ರಹಾನೆ ಮತ್ತು ಧವನ್ 11 ಮಂದಿಯ ತಂಡದಲ್ಲಿ ಆಡಬಹುದು. ಶೇರ್ ಎ ಬಾಂಗ್ಲಾ ಸ್ಟೇಡಿಯಂನಲ್ಲಿ ಭಾರತದ ಸ್ಪಿನ್ನರ್ಗಳು ತಮ್ಮ ಪ್ರಾಬಲ್ಯವನ್ನು ಮತ್ತೆ ಮೆರೆಯುವ ಸಾಧ್ಯತೆಯಿದ್ದು, ಡಿ ವಿಲಿಯರ್ಸ್ ಮತ್ತು ಕ್ವಿಟಂನ್ ಡಿ ಕಾಕ್ಸ್ ಟೀಂ ಇಂಡಿಯಾ ಯೋಜನೆ ತಲೆಕೆಳಗು ಮಾಡುವ ಆಶಯ ಹೊಂದಿದ್ದಾರೆ.
