ಚೆನ್ನೈ: ಐಪಿಎಲ್ ಸ್ಪಾಟ್’ಫಿಕ್ಸಿಂಗ್ ಹಗರಣದಲ್ಲಿ ತನ್ನ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಷ್ಟೇ ಅಲ್ಲದೇ, ಇಂಡಿಯಾ ಸಿಮೆಂಟ್ಸ್ ಉಪಾಧ್ಯಕ್ಷ ಹುದ್ದೆಗೂ ಧೋನಿ ರಾಜೀನಾಮೆ ನೀಡಿದ್ದಾರೆ.
ಆದರೆ, ಧೋನಿ ಸಲ್ಲಿಸಿರುವ ರಾಜೀನಾಮೆಯನ್ನು ಸಿಎಸ್’ಕೆ ಮುಖ್ಯಸ್ಥ ಶ್ರೀನಿವಾಸನ್ ಇನ್ನೂ ಅಂಗೀಕರಿಸಿಲ್ಲ. ಧೋನಿ ಮಾತ್ರ ತಮ್ಮ ನಿರ್ಧಾರಕ್ಕೆ ಬದ್ಧವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಐಪಿಎಲ್ ಬೆಟ್ಟಿಂಗ್ ಮತ್ತು ಸ್ಪಾಟ್’ಫಿಕ್ಸಿಂಗ್ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದ ಮುದ್ಗಲ್ ಸಮಿತಿ ಮುಂದೆ ಧೋನಿ ಸುಳ್ಳು ಮಾಹಿತಿ ನೀಡಿದ ಆರೋಪ ಕೇಳಿಬರುತ್ತಿದೆ. ಮುಖ್ಯ ಆರೋಪಿ ಗುರುನಾಥ್ ಮೇಯಪ್ಪನ್ ಅವರು ಸಿಎಸ್’ಕೆ ತಂಡದಲ್ಲಿ ಯಾವುದೇ ಅಧಿಕೃತ ಹುದ್ದೆ ಹೊಂದಿಲ್ಲ ಎಂದು ಸಮಿತಿ ಮುಂದೆ ಧೋನಿ ಹೇಳಿಕೆ ನೀಡಿದ್ದರು. ಆದರೆ, ಧೋನಿ ನೀಡಿದ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ. ತನ್ನ ಮೇಲೆ ಕೇಳಿಬರುತ್ತಿರುವ ಆರೋಪಗಳಿಂದ ಧೋನಿ ಅತೀವ ಬೇಸರಗೊಂಡಿದ್ದಾರೆ. ಹೀಗಾಗಿ, ಚೆನ್ನೈ ತಂಡದ ನಾಯಕತ್ವ ಸ್ಥಾನ ಹಾಗೂ ಇಂಡಿಯಾ ಸಿಮೆಂಟ್ಸ್ ಸಂಸ್ಥೆಯ ಉಪಾಧ್ಯಕ್ಷ ಹುದ್ದೆ ಎರಡಕ್ಕೂ ರಾಜೀನಾಮೆ ನೀಡಿದ್ದಾರೆ.

