ಮುಂಬಯಿ, ಜೂ.09: ಇತ್ತೀಚೆಗೆ ಅಸ್ತಿತ್ವಕ್ಕೆ ತರಲಾದ ದಿ| ಚೆಲ್ಲಡ್ಕ ಭವಾನಿ ದೇರಣ್ಣ ಶೆಟ್ಟಿ ಸ್ಮರಣಾರ್ಥ ಯೋಜನೆಯ `ಭವಾನಿ ಫೌಂಡೇಶನ್’ ಇಂದಿಲ್ಲಿ ಮಂಗಳವಾರ ನವಿ ಮುಂಬಯಿ ಅಲ್ಲಿನ ಸಿಬಿಡಿ ಬೇಲಾಪುರನ ವಿ-ಟೈಂಸ್ ಸ್ಕ್ವಾರ್ ಕಟ್ಟಡದಲ್ಲಿನ ಭವಾನಿ ಶಿಪ್ಪಿಂಗ್ ಕಛೇರಿಯಲ್ಲಿ ಭವಾನಿ ಫೌಂಡೇಶನ್ನಿಂದ ಶೈಕ್ಷಣಿಕ ನೆರವು ವಿತರಿಸಿತು.
ಮಾತೃಶ್ರೀ ನಾಮದಲ್ಲಿ ರೂಪಿಸಿದ ಭವಾನಿ ಫೌಂಡೇಶನ್ನ ಸಂಸ್ಥಾಪಕ ಚೆಲ್ಲಡ್ಕ ಕುಸುಮೋಧರ ದೇರಣ್ಣ ಶೆಟ್ಟಿ (ಕೆ.ಡಿ.ಶೆಟ್ಟಿ) ತನ್ನ ಫೌಂಡೇಶನ್ ಮೂಲಕ ಸಂದೀಪ್ ಉದಣೆ ಮತ್ತು ದತ್ತಾತ್ರೇಯ ನವಳೆ ಅವರಿಗೆ ಆರೋಗ್ಯನಿಧಿ ಸಹಾಯವನ್ನೀಡಿ ಆಯುರಾರೋಗ್ಯ ಹಾರೈಸಿ ಭವಾನಿ ಫೌಂಡೇಶನ್ನನ್ನು ಚಾರೀಟೆಬಲ್ ಟ್ರಸ್ಟ್ ನೋಂದಣಿಗೆ ಕಾರ್ಯಾರಂಭಿಸಿದರು.
ಹತ್ತಾರು ನೌಕರರಿಗೆ ಪುನರ್ಜನ್ಮ ನೀಡಿದ ಸ್ವಸ್ಥ ಪ್ರೇಮಿ ಚೆಲ್ಲಡ್ಕ ಕುಸುಮೋಧರ ಡಿ.ಶೆಟ್ಟಿ
ದುಡಿಮೆಯ ಲಕ್ಷಾಂತರ ಹಣವನ್ನು ದುಂದುವೆಚ್ಚಗೊಳಿಸುವ ಬದಲಾಗಿ ಜನಸಾಮಾನ್ಯರ, ಬಡಪಾಯಿಗ ಳ ಆರೋಗ್ಯಕ್ಕಾಗಿ ವಿನಿಯೋಗಿಸಿದ್ದಲ್ಲಿ ಪುಣ್ಯವು ದೊರಕುವುದು. ಇದಕ್ಕಾಗಿ ನಮ್ಮೀ ಸಂಸ್ಥೆಯು ಇದೀಗಲೇ ನೂರಾರು ಜನರಿಗೆ ಆರೋಗ್ಯನಿಧಿಯಾಗಿರಿಸಿ ಸಹಾಯ ಮಾಡಿದೆ. ಅದರಲ್ಲಿ ಸಂದೀಪ್ ಉದಣೆ ಮತ್ತು ದತ್ತಾತ್ರೇಯ ನವಳೆ ಅವರ ಆರೋಗ್ಯದ ದುಸ್ಥಿತಿ ವರ್ಣಿಸಲಾಗದು. ಆ ವೇಳೆಗೆ ತತ್ಕ್ಷಣವೇ ಸ್ಪಂದಿಸಿದ ನಾವು ಅವರ ಜೀವವನ್ನು ರಕ್ಷಿಸುವತ್ತ ಧಾವಿಸಿ ವಿಶೇಷ ಕಾಳಜಿ ವಹಿಸಿದ ಪರಿಣಾಮವಾಗಿ ಅವರು ನಮ್ಮ ಮುಂದಿದ್ದಾರೆ. ಜೊತೆಗೆ ಚಿತ್ರಾ ಆರ್.ಶೆಟ್ಟಿ ಕಲ್ಯಾಣ್, ಡಾ| ಸಾಗರ್ ಶೆಟ್ಟಿ ಕಲ್ಯಾಣ್ ಅವರುಗಳ ಸಹಯೋಗವನ್ನು ಮನವರಿಸುತ್ತಾ ಸಮಾಜದ ಆರೋಗ್ಯದ ಹಿತದೃಷ್ಟಿಯನ್ನಿರಿಸಿ ತಮ್ಮಿಂದ ಸಾಧ್ಯವಾದಷ್ಟು ಸಹಕಾರ ನೀಡಿವಲ್ಲಿ ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದೇವೆ. ಭವಿಷ್ಯತ್ತಿನ ದಿನಗಳಲ್ಲಿ ಹಳ್ಳಿ ಜನರಿಗಾಗಿ ಆರೋಗ್ಯ ಶಿಬಿರ ಅಲ್ಲದೆ ಆಸ್ಪತ್ರೆ ಒಂದನ್ನು ರೂಪಿಸುವ ಯೋಜನೆಯನ್ನೂ `ಭವಾನಿ ಫೌಂಡೇಶನ್’ ಹೊಂದಿದೆ ಎಂದು ಫೌಂಡೇಶನ್ನ ಸಂಸ್ಥಾಪಕ ಕೆ.ಡಿ ಶೆಟ್ಟಿ ತಿಳಿಸಿದರು.
ಏಳು ತಿಂಗಳ ಹಿಂದೆ ಜೆಎನ್ಪಿಟಿ ಬಳಿ ನನ್ನ ಬೈಕಿಗೆ ಟನ್ ಗಟ್ಟಲೆ ಭಾರಹೊತ್ತ ಟ್ರೈಲರ್ ಢಿಕ್ಕಿ ಹೊಡೆದು ನನ್ನ ಬಲಕೈ ಮೇಲೆ ಚಲಾಯಿಸಿ ಜೀವನ್ಮರಣದಲ್ಲಿ ಹೋರಾಡುತ್ತಿದ್ದಾಗ ನನ್ನ ಸಹೋದ್ಯೋಗಿ ಕೆ.ಡಿ.ಶೆಟ್ಟಿ ಅವರನ್ನು ಸಂಪರ್ಕಿಸಿದರು. ತತ್ಕ್ಷಣವೇ ನನ್ನನ್ನು ಎಂಜಿಎಂ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರು ನನ್ನ ಬಲಕೈಯನ್ನೇ ಕತ್ತರಿಸುವಂತೆ ಎಷ್ಟೇ ಒತ್ತಾಯಿಸಿದರೂ ಅದನ್ನು ಒಪ್ಪದ ಕೆ.ಡಿ.ಶೆಟ್ಟಿ ಅವರು ನನ್ನ ಕೈಯನ್ನೇ ತುಂಡರಿಸಿ ಎಂದು ಹಟ ಹಿಡಿದರು. ಅಲ್ಲದೆ ಹೊರಗಿನಿಂದ ನುರಿತ ತಜ್ಞ ರನ್ನು ಕರೆಸಿ ವಿಶೇಷ ಚಿಕಿತ್ಸೆಗೆ ನಡೆಸಿದ ಪರಿಣಾಮ ನಾನು ಬದುಕುಳಿದೆ. ನನ್ನನ್ನೇ ಅವಲಂಬಿತ ಪತ್ನಿ, ಇಬ್ಬರು ಪುಟಾಣಿ ಮಕ್ಕಳು, ಪರಿವಾರಕ್ಕೆ ದೇವರಾಗಿ ಪರಿಣಮಿಸಿರುವು ದಾಗಿ ಅವಘಡದಿಂದ ಪಾರಾಗಿ ಇಂದಿಲ್ಲಿ ಉಪಸ್ಥಿತ ಸಂದೀಪ್ ಉದಣೆ ತನ್ನ ಪುನರ್ಜೋಡಿತ ಕೈಯ ನೋವನ್ನು ಕಣ್ಣೀರಿಟ್ಟು ಜೀವನ ಕಥೆಯನ್ನು ಭಿತ್ತರಿಸಿದರು.
ನಾನು ಕುಟುಂಬ ಸಮೇತ ರಾತ್ರಿ ವಿಶ್ರಾಂತಿ ಪಡೆಯುತ್ತಿರುವ ವೇಳೆಗೆ ಗ್ಯಾಸ್ ಸಿಲಿಂಡರ್ ಸ್ಪೋಟಿಸಿದ ಪರಿಣಾಮ ನನ್ನ ಪತ್ನಿ 60% ಸುಟ್ಟು ಕರಟಿದ್ದು ಅಷ್ಟರಲ್ಲೇ ಆಕೆಯ ರಕ್ಷಣೆಗೆ ಧಾವಿಸಿದ ನನ್ನನ್ನು ಆಕೆ ಅಪ್ಪುಗೆಯಿಂದ ಹಿಡಿದ ಪರಿಣಾಮ ನನಗೂ ಬೆಂಕಿ ತಗುಳಿ ನನ್ನ ಎರಡು ಹಸ್ತಗಳೂ ನಿಷ್ಕ್ರೀಯ ಗೊಂಡವು. ಆಕೆಯಂತೂ ವಿಧಿವಶವಾದಳು. ಆದರೆ ನನ್ನ ಪುಟ್ಟ ಕಂದಮ್ಮಳ ಮತ್ತು ಪರಿವಾರದ ರಕ್ಷಣೆ ಮತ್ತು ನನ್ನ ಅನಾರೋಗ್ಯವು ನನ್ನನ್ನೂ ಅನಾಥಗೊಳಿಸಿತು. ಆದರೆ ನನ್ನ ಯಜಮಾನ ಕೆ.ಡಿ.ಶೆಟ್ಟಿ ಅವರು ನನ್ನ ಕುಟುಂಬಕ್ಕೆ ಆಧಾರವಾಗಿದ್ದು ಕೆಲಸಕ್ಕೆ ಹಾಜರಾಗದ ಅದೆಷ್ಟೋ ತಿಂಗಳುಗಳ ಸಂಬಳ ನಿಗದಿಯಂತೆ ಪ್ರತೀ ತಿಂಗಳು ಮನೆ ಬಾಗಿಲಿಗೆ ತಲುಪಿಸುವುದರೊಂದಿಗೆ ವಾರಕ್ಕೊಮ್ಮೆ ಆದರೂ ಫೋನಾಯಿಸಿ ಆರೋಗ್ಯವನ್ನು ವಿಚಾರಿಸುತ್ತಿರುವುದು ನಮ್ಮ ಹಿರಿಮೆಯಾಗಿದೆ ಎಂದು ಇದೇ ವೇಳೆ ಉಪಸ್ಥಿತ ದತ್ತಾತ್ರೇಯ ನವಳೆ ತನ್ನ ಭಯಾನಕ ಬದುಕಿನ ಮಾಹಿತಿಯನ್ನಿತ್ತರು.
ಈ ಸಂದರ್ಭದಲ್ಲಿ `ಭವಾನಿ ಫೌಂಡೇಶನ್’ನ ದಿಕ್ಷೀತ್ ಕುಸುಮೋಧರ್ ಶೆಟ್ಟಿ, ನವೀನ್ ಶೆಟ್ಟಿ, ಭವಾನಿ ಶಿಪ್ಪಿಂಗ್ ಸರ್ವೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ನಾಗೇಶ್ ಹೆಗ್ಡೆ, ಕ್ಯಾ| ಬಿಶ್ವಜಿತ್ ಚಕ್ರವರ್ತಿ, ಕು| ಮೀತಾ ಶೆಟ್ಟಿ, ಕು| ಸೀಮಾ ಪವಾರ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ ವರದಿ: ರೋನ್ಸ್ ಬಂಟ್ವಾಳ್




