ಮುಂಬಯಿ, ಜೂ.09: ಸುಮಧುರ ಕಂಠಸಿರಿಯ ಹಿನ್ನಲೆ ಗಾಯಕ, ಅಪ್ರತಿಮ ಕಲಾವಿದ ಪ್ರವೀಣ್ ಬೈಕಂಪಾಡಿ ಅವರು ಇಂದಿಲ್ಲಿ ಮಂಗಳವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ನಿಧನರಾದರು. 49 ವರ್ಷ ಪ್ರಾಯದ ಯುವ ಕಲಾಕಾರರಾಗಿದ್ದ ಪ್ರವೀಣ್ ಬೈಕಂಪಾಡಿ ಅವರು ಘಾಟ್ಕೋಪರ್ರ್ಪ ಪಶಿಮದ ಎಲ್ಬಿಎಸ್ ಮಾರ್ಗದಲ್ಲಿನ ಮೌಲನಾ ಕಾಂಪೌಂಡ್ ನಿವಾಸಿ ಆಗಿದ್ದು, ಮುಂಜಾನೆ ಸುಮಾರು 1.20ರ ವೇಳೆಗೆ ಎದೆ ನೋವಿನಿಂದ ಬಳಲುತ್ತಿದ್ದಂತೆಯೇ ತಕ್ಷಣವೇ ಅವರ ಪತ್ನಿ ಗೀತಾಪ್ರವೀಣ್ ಹಾಗೂ ಸಹೋದರ ನವೀನ್ ಸುವರ್ಣ ಘಾಟ್ಕೋಪರ್ ಪಶ್ಚಿಮದ ಲೋಕಂಡೆ ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆ ಫಲಕಾರಿ ಆಗದೆ ವಿಧಿವಶರಾದರು.

ಪ್ರವೀಣ್ ಬೈಕಂಪಾಡಿ ಅವರು ಪತ್ನಿ ಗೀತಾ ಪ್ರವೀಣ್ ಮತ್ತು ಏಕೈಕ ಸುಪುತ್ರಿ ದಿಷಿ ಪ್ರವೀಣ್ ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ. ಕಲಾವಿದ ಪ್ರವೀಣ್ ನಿಧನ ಸುದ್ದಿ ತಿಳಿದ್ದಂತೆ ಹೆಸರಾಂತ ಕಲಾವಿದರುಗಳಾದ ಮೋಹನ್ ಮಾರ್ನಾಡ್, ಪದ್ಮನಾಭ ಸಸಿಹಿತ್ಲು, ನಾರಾಯಣ ಶೆಟ್ಟಿ ನಂದಳಿಕೆ,ಸಾದಯಾ, ನವೀನ್ ಶೆಟ್ಟಿ ಇನ್ನಾ ಬಾಳಿಕೆ, ಮನೋಹರ್ ಶೆಟ್ಟಿ ನಂದಳಿಕೆ ಸೇರಿದಂತೆ ನೂರಾರು ಕಲಾವಿದರು ಅವರ ನಿವಾಸಕ್ಕೆ ಧಾವಿಸಿದ್ದು ಮರಣೋತ್ತರ ಕ್ರಿಯೆಯಲ್ಲಿ ಭಾಗವಹಿಸಿದ್ದರು. ಪ್ರವೀಣ್ ಅಂತ್ಯಕ್ರಿಯೆಯು ಇಂದಿಲ್ಲಿ ಪೂರ್ವಾಹ್ನ ಘಾಟ್ಕೋಪರ್ ಅಲ್ಲಿನ ರಾಜವಾಡಿ ಸ್ಮಶಾನ ಭೂಮಿಯಲ್ಲಿ ನೆರವೇರಿಸಲಾಯಿತು. ಚಿತ್ರನಟ ಸಾಯಿ ಬಲ್ಲಾಳ್, ದೇವದಾಸ್ ಸಾಲ್ಯಾನ್, ಅಶೋಕ್ಕಾ ನಾಯುಡ್, ಚಂದ್ರಾವತಿ ದೇವಾಡಿಗ, ಅನಿಲ್ ಸುವರ್ಣ, ರಾಜ್ಕುಮಾರ್ ಕಾರ್ನಾಡ್, ಕರುಣಾಕರ ಕಾಪು, ವಿಶ್ವನಾಥ ಶೆಟ್ಟಿ ಪೇತ್ರಿ, ಮೋಹನ್ ಸಾಲ್ಯಾನ್, ಜಗಧೀಶ್ ರೈ, ಬಾಲಕೃಷ್ಣ ಶೆಟ್ಟಿ, ಚಂದ್ರಕಾಂತ ಸಾಲ್ಯಾನ್, ಸುಧಾ ಶೆಟ್ಟಿ, ಓಂದಾಸ್ ಕಣ್ಣಂಗಾರ್ ಹಾಗೂ ಮೋಗವೀರ ವ್ಯವಸ್ಥಾಪಕ ಮಂಡಳಿಯ ಡೊಂಬಿವಿಲಿ ಸಮಿತಿಯ ಪದಾಧಿಕಾರಿಗಳು, ಮತ್ತಿತರ ಗಣ್ಯರು ಮರಣ ಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿ ಪ್ರವೀಣ್ ಕುಟುಂಬಕ್ಕೆ ಸಾಂತ್ವಾನ ಗೈದರು. ಪ್ರವೀಣ್ ಅಗಲಿಕೆಗೆ ಡಾ| ವ್ಯಾಸರಾವ್ ನಿಂಜೂರು, ಡಾ| ಸುನೀತಾ ಎಂ.ಶೆಟ್ಟಿ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಜ್ಯೂಲಿಯೆಟ್ ಪಿರೇರಾ, ಸರಳಾ ಶೆಟ್ಟಿ, ಪಿ.ಬಿ.ಚಂದ್ರಹಾಸ್, ಎಸ್.ಟಿ.ವಿಜಯಕುಮಾರ್, ಕೆ.ಕೆ ಶೆಟ್ಟಿ ಸೇರಿದಂತೆ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಪದಾಧಿಕಾರಿಗಳು, ಮಹಾನಗರದಲ್ಲಿನ ಹಿರಿ-ಕಿರಿಯ ಕಲಾವಿದರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
