ಬಂಟ್ವಾಳ :ತಾಲೂಕಿನ ಕೊಡ್ಮಾಣ್-ಪುದು ಗ್ರಾಮದ ಕಾಪಿಕಾಡ್ ನವಜ್ಯೋತಿ ಮಿತ್ರ ವೃಂದ ಇದರ ಮುಂದಿನ ವರುಷ ನಡೆಯುವ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ವಿವಿಧ ಪೂರಕ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.

ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ ತೇವು ಅವರು ಪರಿಸರ ಸಂರಕ್ಷಣೆಯ ಕುರಿತು ಮಾತನಾಡಿ, ಪುರಾಣ ಕಾಲದಿಂದಲೂ ಪ್ರಕೃತಿಯನ್ನು ಪೂಜಿಸಿಕೊಂಡು ಬಂದ ಸಂಸ್ಕೃತಿ ನಮ್ಮದು. ಅಂತಹ ಪ್ರಕೃತಿಯಲ್ಲಿ ನಾವು ಎಂದಿಗೂ ವಿಕೃತಿಯನ್ನು ಮೆರೆಯಬಾರದು. ಪರಿಸರವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ನೀಡುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಿದೆ ಎಂದರು.
ಫರಂಗಿಪೇಟೆ ಶ್ರೀರಾಮ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ದೇವದಾಸ್ ಕೆ.ಆರ್. ಕೊಡ್ಮಾಣ್ ಅವರು
ಸಂಘದ ಲಾಂಛನ ಹಾಗೂ ಧ್ಯೇಯ ವಾಕ್ಯವನ್ನು ಅನಾವರಣಗೊಳಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಲಾಂಛನ ಅನಾವರಣ, ‘ನವಜ್ಯೋತಿ ಸಹಾಯಹಸ್ತ ಯೋಜನೆ-3’ರ ಹಸ್ತಾಂತರ ಹಾಗೂ ‘ಪರಿಸರ ಸಂರಕ್ಷಣಾ ಮಾಹಿತಿ ಕಾರ್ಯಾಗಾರ’ ನಡೆಯಿತು.
ನವಜ್ಯೋತಿ ಸಹಾಯಹಸ್ತ ಯೋಜನೆ-3’ರಡಿಯಲ್ಲಿ ಕೊಡ್ಮಣ್ ಸರ್ಕಾರಿ ಶಾಲೆಗೆ ಮಕ್ಕಳ ಶಿಕ್ಷಣದ ಪೂರಕ ಚಟುವಟಿಕೆಗಳಿಗಾಗಿ ಸುಮಾರು 40 ಸಾ. ರೂ. ವೆಚ್ಚದ ಧ್ವನಿವರ್ಧಕ ಉಪಕರಣಗಳನ್ನು ಹಸ್ತಾಂತರಿಸಲಾಯಿತು ಹಾಗೂ ಸಾರ್ವಜನಿಕರಿಗೆ ಮನೆಗೊಂದು ಉಚಿತ ಸಸಿ ಮತ್ತು ಬಟ್ಟೆ ಕೈಚೀಲಗಳನ್ನು ವಿತರಿಸಲಾಯಿತು.
ನವಜ್ಯೋತಿ ಮಿತ್ರ ವೃಂದದ ಅಧ್ಯಕ್ಷ ಪುರುಷೋತ್ತಮ ಕುಲಾಲ್, ಕೊಡ್ಮಾಣ್ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮ ಎಂ, ಅನ್ನಪೂರ್ಣೇಶ್ವರಿ ಮಿತ್ರ ಮಂಡಳಿ ಅಧ್ಯಕ್ಷ ಉಮೇಶ್ ಪೂಜಾರಿ ಕಬೇಲ,ಆಶಾ ಕಾರ್ಯಕರ್ತೆ ಮಾಧವಿ ಕೊಡ್ಮಾಣ್ ವೇದಿಕೆಯಲ್ಲಿದ್ದರು.
ರತ್ನಕರ ಕುಲಾಲ್ ಸ್ವಾಗತಿಸಿ, ನಿರಂಜನ್ ಕುಲಾಲ್ ವಂದಿಸಿದರು,ಶಿವರಾಜ್ ಕುಲಾಲ್ ನಿರೂಪಿಸಿದರು.
