ಹೆದ್ದಾರಿ ಬದಿಯ ಗಿಡಗಂಟಿ ತೆರವು
ಗುರುಪುರ : ರಾಷ್ಟ್ರೀ ಯ ಹೆದ್ದಾರಿ ೧೬೯ರ ಗುರುಪುರ ಆಸುಪಾಸಿನಲ್ಲಿ ಆಳೆತ್ತರಕ್ಕೆ ಗಿಡಗಂಟಿ, ಕಳೆ ಗಿಡಗಳು ಬೆಳೆದು ಹೆದ್ದಾರಿ ಅಗಲ ಕಿರಿದಾಗಿದೆ. ಇದರಿಂದ ಹೆದ್ದಾರಿ ವಾಹನ ಸಂಚಾರ ಹಾಗೂ ಸ್ಥಳೀಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಸಹಿತ ಪಾದಚಾರಿಗಳಿಗೆ ನಡೆದಾಡಲು ಕಷ್ಟವಾಗುತ್ತಿದೆ. ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಸೂಕ್ಷವಾಗಿ ಗಮನಿಸಿದ ವಾಮಂಜೂರಿನ ಕಟ್ಟಡ ನಿರ್ಮಾಣ ಸಂಸ್ಥೆಯೊಂದರ ಮಾಲಕರು ಗುರುಪುರ ನಿಕಟಪೂರ್ವಸದಸ್ಯರ ಸಹಕಾರದೊಂದಿಗೆ ಜು. ೩೧ರಂದು ಗುರುಪುರ ಬಂಡಸಾಲೆಯಿಂದ ಸುಮಾರು ೨ ಕಿಮೀ ಉದ್ದಕ್ಕೆ ಹೆದ್ದಾರಿಯ ಎರಡೂ ಪಾರ್ಶ್ವಗಳಲ್ಲಿ ಬೆಳೆದಿದ್ದ ಗಿಡಗಂಟಿ ತೆರವು ಸ್ವಚ್ಛತಾ ಕಾರ್ಯ ನಡೆಸಿದರು.

ಕಳೆದ ೨ ವರ್ಷದಿಂದ ಈ ರಸ್ತೆ ಮೂಲಕ ಸಂಚರಿಸುತ್ತಿರುವ ತಾನು, ಗಿಡಗಂಟಿಯಿಂದ ವಾಹನ ಸಂಚಾರಕ್ಕಾಗುತ್ತಿರುವ ಸಮಸ್ಯೆ ಕಂಡಿದ್ದೇನೆ. ವಾಹನಗಳು ಸೈಡ್ ಕೊಡುವಾಗ ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದರೆ, ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿ ನಿಂತಿರುವ ನೀರು ಮೈಮೇಲೆ ಚಿಮ್ಮುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತನಾಗಿ ಹೆದ್ದಾರಿಯಲ್ಲಿ ಬದಿಯಲ್ಲಿ ಅಪಾಯಕಾರಿಯಾಗಿ ಬೆಳೆದಿರುವ ಗಿಡಗಂಟಿ ತೆರವುಗೊಳಿಸಲು ಮನಸ್ಸು ಮಾಡಿದ್ದೇನೆ ಎಂದು ವಾಮಂಜೂರಿನ ದಿವ್ಯಜ್ಯೋತಿ ಕನ್ಸ್ಟçಕ್ಶನ್ನ ಮಾಲಕರು ಹೇಳಿದರು.
ದಿನಪೂರ್ತಿ ನಡೆಸಲಾದ ಈ ಸ್ವಚ್ಛತಾ ಕಾರ್ಯದ ಬಳಿಕ ಬಂಡಸಾಲೆಯಿಂದ ಮೂಡಬಿದ್ರೆ ಭಾಗಕ್ಕೆ ಮುಂದುವರಿದಿರುವ ಹೆದ್ದಾರಿಯ ಎರಡೂ ಪಾರ್ಶ್ವದಲ್ಲಿ ಗಿಡಗಂಟಿ ತೆರವುಗೊಂಡಿದೆ. ಸಂಸ್ಥೆಯ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
