ಭಾಷೆಯನ್ನು ಸಮರ್ಥ ಬಳಸಿ ಸಾಹಿತ್ಯ ರಚಿಸಿದಾಗ ಸಾರ್ಥಕ ಭಾವ: ಅಬೂಬಕರ್ ಅಮ್ಮುಂಜೆ
ಬಂಟ್ವಾಳಃ ಭಾಷೆಯನ್ನು ಸಮರ್ಪಕವಾಗಿ ಬಳಕೆ ಮಾಡಿ ಉತ್ತಮ ಸಾಹಿತ್ಯ ರಚಸಿ ಓದುಗರ ಮನಸನ್ನು ಗೆದ್ದಾಗ ಉದ್ದೇಶ ಸಾರ್ಥಕ ಆಗುತ್ತದೆ ಎಂದು ಸಂಘಟಕ ,ಕವಿ ಅಬೂಬಕರ್ ಅಮ್ಮುಂಜೆ ಹೇಳಿದರು.

ಭಾನುವಾರ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿಟ್ಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕದ ಸಾರಥ್ಯವನ್ನು ನೀರ್ಪಾಜೆ ಭೀಮ ಭಟ್ಟರಿಂದ ವಿಶ್ವನಾಥ ಬಂಟ್ವಾಳ ತನಕ ಹಲವರು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳ ಪೈಕಿ ಬಂಟ್ವಾಳ ತಾಲೂಕಿನಲ್ಲಿರುವಷ್ಟು ದತ್ತಿ ಉಪನ್ಯಾಸಗಳು ಇನ್ನೆಲ್ಲೂ ಇಲ್ಲ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಕ್ಕೆ ಉತ್ತಮ ಸಾಹಿತಿ, ಕಲಾವಿದರು, ರಂಗಕರ್ಮಿಗಳು, ರಾಜಕಾರಣಿಗಳು, ಪತ್ರಕರ್ತರನ್ನು, ಶಿಕ್ಷಣ ತಜ್ಞರನ್ನು, ಸಾಮಾಜಿಕ, ಧಾರ್ಮಿಕ ಮುಖಂಡರನ್ನು ಬಂಟ್ವಾಳ ತಾಲೂಕು ನೀಡಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅವರು ಅಮ್ಮುಂಜೆಯಲ್ಲಿ ನಡೆದ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉಲ್ಲೇಖಿಸಿ ರಾಜ್ಯಕ್ಕೆ ಮಾದರಿ ಎನಿಸಿದ ಇಂತಹ ಸಮ್ಮೇಳನಗಳು ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ನಡೆಯಬೇಕು ಎಂದರು.
ಕಾರ್ಯಕಾರಿ ಸಮಿತಿ ಸದಸ್ಯ ಜಯರಾಮ ಪಡ್ರೆ ಸ್ವಾಗತಿಸಿ, ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವಿ.ಸು. ಭಟ್ ಕಾರ್ಯಕ್ರಮ ನಿರೂಪಿಸಿದರು.