ಬಂಟವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದ ಬ್ರಹ್ಮರಥೋತ್ಸವಕ್ಕೆ 200ನೇ ವರ್ಷಾಚರಣೆಯ ಸಂಭ್ರಮ
ಬಂಟ್ವಾಳ: ಸುಮಾರು ಐದು ಶತಮಾನಗಳ ಇತಿಹಾಸವುಳ್ಳ ಚಿನ್ನದ ಪೇಟೆ ಎಂದೇ ಖ್ಯಾತಿ ಹೊಂದಿರುವ ಮಲ್ಲಿಗೆ ಪ್ರಿಯ ಬಂಟವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದ ಬ್ರಹ್ಮರಥೋತ್ಸವಕ್ಕೆ ಇನ್ನೂರನೇ ವರ್ಷಾಚರಣೆಯ ಸಂಭ್ರಮವಾಗಿದ್ದು, ಮಾ.12 ರಿಂದ 17 ರವರೆಗೆ ದೇವಳದಲ್ಲಿ ವಿವಿಧ ವೈವಿಧ್ಯಮಯವಾಗಿ ರಥೋತ್ಸವದ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರರಾದ ಆಶೋಕ್ ಶೆಣೈ ತಿಳಿಸಿದ್ದಾರೆ.

ಬುಧವಾರ ಸಂಜೆ ದೇವಳದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಶ್ರೀ ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿ ಮತ್ತು ಅವರ ಮಾರ್ಗದರ್ಶನದಲ್ಲಿ ಪ್ರತಿಯೊಂದು ಕಾರ್ಯಕ್ರಮಗಳು ಜರಗಲಿದೆ ಎಂದರು.
ಶ್ರೀ ದೇವರಿಗೆ ಬ್ರಹ್ಮರಥ ಸಮರ್ಪಣೆಯಾಗಿ 200 ವರ್ಷ ಪೂರೈಕೆಯಾಗುವ ಹಿನ್ನಲೆಯಲ್ಲಿ ದೇವಳದ ವತಿಯಿಂದ ನಡೆಯುವ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ಶಾಲಾ ವಾಹನ, ದೇವಳದ ಪಟ್ಟದ ದೇವರು ಶ್ರೀನಿವಾಸ ಹಾಗೂ ಉತ್ಸವ ಮೂರ್ತಿ ಶ್ರೀ ವೆಂಕಟರಮಣನಿಗೆ ತಲಾ 50 ಪವನಿನ ಚಿನ್ನದ ಸರ, ಶ್ರೀ ವೀರಮಾರುತಿಗೆ ಅಭರಣ ಹಾಗೂ ಬ್ರಹ್ಮರಥದಲ್ಲಿ ಶ್ರೀದೇವರು ಕುಳಿತುಕೊಳ್ಳುವ ಪೀಠಕ್ಕೆ 10 ಕೆ.ಜಿ.ಬೆಳ್ಳಿಯ ಪ್ರಭಾವಳಿಯನ್ನು ಸಮರ್ಪಸಲಾಗುವುದು ಎಂದು ಆಶೋಕ್ ಶೆಣೈ ವಿವರಿಸಿದರು.
ಮಾ. 10 ರಂದು ಸಮಾಜ ಬಾಂಧವರಿಂದ ಶ್ರೀದೇವರಿಗೆ ಮಲ್ಲಿಗೆ ಹೂವಿನಿಂದಲೇ ಸಹಸ್ರನಾಮ ಪುಪ್ಪಾರ್ಚನೆ, ಸಂಜೆ ಬಡ್ಡಕಟ್ಟೆ ಹನುಮಾನ್ ದೇವಳದ ವಠಾರದಿಂದ ವಿಶೇಷವಾದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಮಾ. 11 ರಂದು ಚಕ್ರಾಬ್ದ ಮಂಡಲ ಪೂಜೆ, ಬಳಿಕ ಮಹಿಳೆಯರಿಂದ ಲಕ್ಷ ತುಳಸಿ ಅರ್ಚನೆ, ಕಾಶೀಮಠದ ವೃಂದಾವನದಲ್ಲಿರುವ ಶ್ರೀ ಹನುಮಂತ ದೇವರಿಗೆ ಗಂಧಲೇಪನ ಸೇವೆ ಜರಗಲಿದೆ.
ಹಾಗೆಯೇ ಸಂಜೆ ಕುಂಕುಮಾರ್ಚನೆ ಬಳಿಕ ಕಾಶೀಮಠಾಧೀಶರಿಂದ ನೇತ್ರಾವತಿ ನದಿಗೆ ಗಂಗಾರತಿ ಹಾಗೂ ವಿವಿಧ ಪೂಜೆಗಳು ನಡೆಯಲಿದೆ ಎಂದರು.
ಮಾ.12 ರಂದು ಗರುಡೋತ್ಸವ, 13 ರಂದು ಹನುಮಂತೋತ್ಸವ, 14 ರಂದು ಚಂದ್ರಮಂಡಲೋತ್ಸವ, 15 ರಂದು ಶ್ರೀದೇವರ ಜಲಕ್ರೀಡೆ, ಮೃಗಬೇಟೆ, ಸಣ್ಣ ರಥೋತ್ಸವ, 16 ರಂದು ಬ್ರಹ್ಮರಥೋತ್ಸವ, 17 ರಂದು ಅವಭೃತೋತ್ಸವ ಜರಗಲಿದ್ದು, ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ ಎಂದು ವಿವರಿಸಿದರು.
ಶ್ರೀ ದೇವರಿಗೆ ಪ್ರತಿನಿತ್ಯವು ವಿವಿಧ ಅಭಿಷೇಕ, ವಿವಿಧ ಸೇವೆಗಳು, ಉತ್ಸವಾದಿಗಳು ಭಜಕರ ಸಹಕಾರದಿಂದ ನಡೆಯತ್ತಾ ಬರುತ್ತಿದೆ.
ಶ್ರಾವಣ ಮಾಸದಲ್ಲಿ ಒಂದು ತಿಂಗಳ ಪರ್ಯಂತ ಯಕ್ಷಗಾನ ತಾಳಮದ್ದಳೆ ಸಹಿತ ಹಲವಾರು ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ನಡೆಯತ್ತಿದೆ.
ವಿದ್ಯಾದಾನ ದೇವಳದ ಪ್ರಮುಖ ಆದ್ಯತೆಯಾಗಿದ್ದು ಮೂರು ಶಿಕ್ಷಣ ಸಂಸ್ಥೆಗಳು ನಡೆಯುತ್ತಿದ್ದು 2024-25 ಸಾಲಿನಿಂದ ಪ.ಪೂ.ಕಾಲೇಜನ್ನು ಆರಂಭಿಸಲು ಸಿದ್ದತೆ ನಡೆಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ವಸಂತ ಪ್ರಭು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೊಕ್ತೇಸರರಾದ ಬಿ. ಸುರೇಶ್ ಬಾಳಿಗಾ, ಭಾಮಿ ನಾಗೇಂದ್ರಶೆಣೈ, ಲಯನ್ ಶಿವಾನಂದ ಬಾಳಿಗಾ, ರೋ. ಬಸ್ತಿ ಮಾಧವ ಶೆಣೈ ಮೊದಲಾದವರು ಉಪಸ್ಥಿತರಿದ್ದರು.