ಕಾರಿಗೆ ಡಿಕ್ಕಿ ಹೊಡೆದ ಜಲ್ಲಿ ಸಾಗಿಸುವ ಘನಗಾತ್ರದ ಲಾರಿ; ಕಾರು ಚಾಲಕ ಪ್ರಾಣಾಪಾಯದಿಂದ ಪಾರು
ಬಂಟ್ವಾಳ: ಕಂಪೆನಿ ಮತ್ತು ಲಾರಿ ಚಾಲಕರ ವಿರುದ್ದ ಸಾರ್ವಜನಿಕರು ರೊಚ್ಚಿಗೆದ್ದು, ಅಪಘಾತ ನಡೆದ ರಸ್ತೆಯಲ್ಲಿ ಬರುವ ಕಂಪೆನಿಯ ಎಲ್ಲಾ ಲಾರಿಗಳನನ್ನು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನ.9ದಂದು ಬೆಳಿಗ್ಗೆ ಬಂಟ್ವಾಳ ಸಮೀಪದ ಲೊರೆಟ್ಟೋ ಎಂಬಲ್ಲಿ ನಡೆದಿದೆ.
ಘಟನೆಯಿಂದ ಸ್ಥಳದಲ್ಲಿ ಜಮಾಯಿಸಿದ್ದ ಜನರನ್ನು ಪೋಲಿಸರು ಚದುರಿಸಿ, ಸ್ಥಳಕ್ಕೆ ಟ್ರಾಫಿಕ್ ಎಸ್.ಐ. ಸುತೇಶ್ ಮತ್ತು ಸಂಜೀವ ಹಾಗೂ ಎಎಸ್.ಐ ಸುರೇಶ್ ಪಡಾರ್, ಸಿಬ್ಬಂದಿಗಳಾದ ರಾಜು, ವಿವೇಕ್, ಸಂತೋಷ ಬೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರೂ ಕೆಲ ಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.
ಜಲ್ಲಿ ಸಾಗಿಸುವ ಬೃಹತ್ ಗಾತ್ರದ ಲಾರಿಯೊಂದು ಕಾರಿಗೆ ಡಿಕ್ಕಿಯಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಮೈಸೂರು ಮೂಲದ ಕೃಷ್ಣ ಅರಸ ಎಂಬವರ ಕಾರಿಗೆ ಕೆ.ಎನ್.ಆರ್.ಸಿ. ಕಂಪೆನಿಯ ಲಾರಿ ಡಿಕ್ಕಿ ಹೊಡೆದಿದೆ.
ಕೃಷ್ಣ ಅರಸ ಅವರು ಮೈಸೂರಿನಿಂದ ಬಂಟ್ವಾಳ ಕಡೆಯಿಂದ ಮೂಡಬಿದಿರೆ ಅಳ್ವಾಸ್ ಕಾಲೇಜಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಕೃಷ್ಣ ಅರಸ ಅವರ ಮಗಳು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದು ದೀಪಾವಳಿ ರಜೆ ನಿಮಿತ್ತ ಊರಿಗೆ ಕರೆದುಕೊಂಡು ಹೋಗುವ ಉದ್ದೇಶದಿಂದ ಮೂಡಬಿದಿರೆಯ ಕಡೆಗೆ ತೆರಳುವ ವೇಳೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದ ಕೆ.ಎನ್.ಆರ್.ಸಿ. ಕಂಪೆನಿಯ ಲಾರಿ ಎದುರಿನಿಂದ ಡಿಕ್ಕಿ ಹೊಡೆದಿದೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಕಾರು ಚಾಲಕ ಕೃಷ್ಣ ಅವರಿಗೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಸ್ಥಳದಲ್ಲಿ ಹಠಾತ್ ಪ್ರತಿಭಟನೆ
ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ.ಕಂಪೆನಿಯವರು ಕಾಮಗಾರಿ ನಡೆಸಲು ಜಲ್ಲಿಯನ್ನು ಕುಪ್ಪೆಪದವು ಎಂಬಲ್ಲಿರುವ ಜಲ್ಲಿ ಪ್ಲ್ಯಾಂಟ್ ನಿಂದ ಬೃಹತ್ ಗಾತ್ರದ ಲಾರಿಗಳ ಮೂಲಕ ತರುತ್ತಾರೆ.
ಆದರೆ ಕಂಪೆನಿಯ ಲಾರಿಯ ಚಾಲಕರು ಎ.ಸಿ. ಹಾಕಿಕೊಂಡು ಕಿವಿಗೊಂದು ಇಯರ್ ಪೋನ್ ಸಿಕ್ಕಿಸಿ ಹಾಡು ಕೇಳಿಕೊಂಡು ಅಥವಾ ಮೊಬೈಲ್ ನಲ್ಲಿ ಹರಟೆ ಹೊಡೆಯುತ್ತಾ ರಸ್ತೆಯಲ್ಲಿ ಬರುವ ಇತರ ವಾಹನಗಳ ಬಗ್ಗೆ ಗಮನವಿಲ್ಲದೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬರುತ್ತಾರೆ ಎಂಬುದು ಸ್ಥಳೀಯರ ವಾದ.
ಹಾಗಾಗಿ ಕಳೆದ ಎರಡು ವರ್ಷಗಳಿಂದ ಕಂಪೆನಿಯ ಲಾರಿಗಳು ಡಿಕ್ಕಿ ಹೊಡೆದು ಅನೇಕರಿಗೆ ಗಾಯವಾಗಿದೆ ಎಂದು ಅರೋಪ ಮಾಡಿದ್ದಾರೆ.
ಕಂಪೆನಿಯ ಘನಗಾತ್ರದ ವಾಹನಗಳ ಸಂಚಾರದಿಂದ ಪ್ರಾಣ ಹಾನಿಯ ಜೊತೆಗೆ ಉತ್ತಮವಾಗಿದ್ದ ಡಾಮರು ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ಬಿದ್ದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಪಘಾತ ನಡೆದ ಜಾಗದಲ್ಲಿ ಶಾಲೆಯಿದ್ದು, ಮಕ್ಕಳು ಶಾಲೆಗೆ ಬರುವ ಸಮಯದಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆ ಮಾಡಿದರೆ ಅನಾಹುತಗಳು ನಡೆಯಬಹುದು, ಎಂದು ಇಲ್ಲಿ ಸೇರಿದ ಜನರು ಅರೋಪ ಮಾಡಿದ್ದಾರೆ.
ಕಂಪೆನಿ ವಿರುದ್ದ ಪ್ರಕರಣ ದಾಖಲಿಸಿ ಮತ್ತು ಕಂಪೆನಿ ಲಾರಿಗಳಿಗೆ ಸ್ಪೀಡ್ ಕಂಟ್ರೋಲ್ ಕಿಟ್ ಹಾಕಿ ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.