ನ.5 ರಂದು ಕಾರಿಂಜ “ಯಕ್ಷಾವಾಸ್ಯಮ್” ನ ತೃತೀಯ ವಾರ್ಷಿಕೋತ್ಸವ, ಗಣೇಶ್ ಕೊಲೆಕಾಡಿ ಪ್ರಶಸ್ತಿಗೆ ಆಯ್ಕೆ
ಬಂಟ್ವಾಳ: ಬಂಟ್ವಾಳ ತಾಲೂಕಿನ ಕಾರಿಂಜ “ಯಕ್ಷಾವಾಸ್ಯಮ್” ಇದರ ತೃತೀಯ ವಾರ್ಷಿಕೋತ್ಸವವು ವಗ್ಗ ಕಾಡಬೆಟ್ಟು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನ.5 ರಂದು ಭಾನುವಾರ ಒಂದು ದಿನ ಪೂರ್ತಿ ನಡೆಯಲಿದ್ದು, 2023 ರ “ಯಕ್ಷಾವಾಸ್ಯಮ್ “ಪ್ರಶಸ್ತಿಗೆ ಯಕ್ಷಗಾನ ವಿದ್ವಾಂಸ, ಪ್ರಸಂಗಕರ್ತ ಗಣೇಶ್ ಕೊಲೆಕಾಡಿ ಅವರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸಂಚಾಲಕಿ ಸಾಯಿಸುಮಾ ಎಂ.ನಾವಡ ಅವರು ತಿಳಿಸಿದ್ದಾರೆ.

ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಅಂದು ಬೆಳಿಗ್ಗೆ ಮಾಜಿ ಸಚಿವ ಬಿ.ರಮಾನಾಥ ರೈ ದೀಪೋಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಸಾಮಾಜಿಕ ಮುಂದಾಳು ಜಿನರಾಜ ಆರಿಗ, ಮಧ್ವ ಯಕ್ಷಕೂಟದ ಸಂಚಾಲಕ ಭಾಸ್ಕರ ಶೆಟ್ಟಿ ಮಧ್ವ ಉಪಸ್ಥಿತರಿರುತ್ತಾರೆ ಎಂದರು.
ಬಳಿಕ ಯಕ್ಷಗಾನ ಪೂರ್ವರಂಗ ಮತ್ತು ಮಕ್ಕಳ ಯಕ್ಷಗಾನವನ್ನು ಸಂಸ್ಥೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಯಕ್ಷಗಾಯನ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ಶ್ರೀನಿವಾಸ ಬಳ್ಳಮಂಜ ಅವರ ನಿರ್ದೇಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಯಕ್ಷಗಾನದ ಹಾಡುಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದರು.
ಸಂಜೆ 4.30 ಕ್ಕೆ ನಡೆಯುವ ಸಭಾ ಪರ್ವದಲ್ಲಿ ಯಕ್ಷಾವಾಸ್ಯಮ್ ಪ್ರಶಸ್ತಿ ಪ್ರಧಾನ, ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ಕಾರಿಂಜ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಉದ್ಯಮಿ ನಾಗೇಶ್ ಶೆಟ್ಟಿ ಬಂಟ್ವಾಳ, ವಗ್ಗ ಶ್ರೀ ಶಾರದಾಂಭ ಭಜನಾ ಮಂದಿರದ ಗೌರವಾಧ್ಯಕ್ಷ ಪ್ರಮೋದ್ ಕುಮಾರ್ ರೈ, ಮಧ್ವ ಶಿವಾಜಿ ಬಳಗದ ಅಧ್ಯಕ್ಷ ನಿತಿನ್, ಕಾವಳಪಡೂರು ಗ್ರಾ.ಪಂ.ಅಧ್ಯಕ್ಷ ಲಕ್ಮೀನಾರಾಯಣ ಶರ್ಮ, ಕಾವಳಮೂಡೂರು ಗ್ರಾ.ಪಂ.ಅಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಾಯಿಸುಮಾ ಎಂ.ನಾವಡ ಅವರು ವಿವರಿಸಿದರು.
ಛಾಂದಸರು, ಪ್ರಸಂಗಕರ್ತರು, ಯಕ್ಷಗಾನ ವಿದ್ವಾಂಸರಾಗಿರುವ ಗಣೇಶ್ ಕೊಲೆಕಾಡಿ ಅವರಿಗೆ 2023 ರ ಯಕ್ಷಾವಾಸ್ಯಮ್ ಪ್ರಶಸ್ತಿಗೆ ಆಯ್ಕೆಯಾಗಿದ್ದು, ದೀವಿತ್ ಕೆ.ಎಸ್.ಪೆರಾಡಿ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ.
ಹಾಗೆಯೇ ಈ ಸಾಲಿನ ಹತ್ತನೇ ಮತ್ತು ಪಿಯುಸಿ ವಿಭಾಗದಲ್ಲಿ ಉತ್ತಮ ಅಂಕ ಗಳಿಸಿದ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ಬಳಿಕ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡವಿಕೆಯಲ್ಲಿ ಯಕ್ಷಗಾನ ನಡೆಯಲಿದೆ ಎಂದರು.
ಕಳೆದ ಮೂರು ವರ್ಷಗಳಿಂದ ಸಂಸ್ಥೆಯು ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಯಕ್ಷಗಾನದಲ್ಲಿ ಸಾಧನೆ ಮಾಡಿದ ವಿವಿಧ ಗಣ್ಯರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಹಾಗೂ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ನೀಡುತ್ತಾ ಬಂದಿದೆ.
ಸಂಸ್ಥೆಯು ತೆಂಕುತಿಟ್ಟು ಯಕ್ಷಗಾನ ಅಭ್ಯಾಸ ತರಗತಿಗಳನ್ನು ಮಾಡುತ್ತಾ ಸಮಾಜದಲ್ಲಿ ಒಂದಷ್ಟು ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಾಸ್ಕರ ಶೆಟ್ಟಿ ಮಧ್ವ, ಮಾಜಿ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಉಪಸ್ಥಿತರಿದ್ದರು.