ಗುರುಪುರ ಪಂಚಾಯತ್ನಲ್ಲಿ ರಾಷ್ಟ್ರೀಯ ರೇಬೀಸ್ ನಿಯಂತ್ರಣ, ಅಭಾ ಕಾರ್ಡ್ ನೋಂದಣಿ ಕಾರ್ಯಕ್ರಮ
ಕೈಕಂಬ : ಗುರುಪುರ ಗ್ರಾಮ ಪಂಚಾಯತ್ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಜಿಮಠ ಜಂಟಿ ಆಶ್ರಯದಲ್ಲಿ ‘ರಾಷ್ಟ್ರೀಯ ರೇಬೀಸ್ ನಿಯಂತ್ರಣ’ ಕಾರ್ಯಕ್ರಮ ನಡೆಯಿತು.
ಇದೇ ವೇಳೆ ಗುರುಪುರ ಪಂಚಾಯತ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಗಂಜಿಮಠ ಇವರ ಸಹಯೋಗದಲ್ಲಿ ಸಂಯುಕ್ತ ಆಶ್ರಯದಲ್ಲಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಆರೋಗ್ಯ ಕರ್ನಾಟಕ ಕಾರ್ಡ್(ಪಿಬಿಪಿಎಂಜೆಎವೈ-ಎಆರ್ಕೆ ಕಾರ್ಡ್-ಅಭಾ) ಉಚಿತ ನೋಂದಣಿ ಶಿಬಿರ ಹಾಗೂ ಸಾಂಕ್ರಾಮಿಕೇತರ ರೋಗಗಳ(ಎನ್ಸಿಡಿ) ಬಗ್ಗೆ ಮಾಹಿತಿ ಶಿಬಿರ ನಡೆಯಿತು.
ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮದ ಬಗ್ಗೆ ತಾಲೂಕು ಆರೋಗ್ಯ ಅಧಿಕಾರಿ ಡಾ. ಸುರೇಶ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯೊಂದರ ಪ್ರಕಾರ ದಿನಕ್ಕೆ ೧೬೦ ಮಂದಿ ರೇಬೀಸ್ ರೋಗದಿಂದ ಮರಣವಪ್ಪುತ್ತಿದ್ದಾರೆ. ಜನ ಜಾಗೃತಿಯಿಂದ ರೇಬೀಸ್ ರೋಗ ತಡೆ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾಯಿ ಕಚ್ಚಿದರೆ ಹಿಂದೆ ಹೊಕ್ಕುಳ ಸುತ್ತ ೧೪ ಇಂಜೆಕ್ಷನ್ ನೀಡಲಾಗುತ್ತಿದ್ದರೆ ಈಗ ೨೮ ದಿನದಲ್ಲಿ ನಾಲ್ಕು ಲಸಿಕೆ ತೆಗೆದುಕೊಂಡರೆ ಸಾಕಾಗುತ್ತದೆ.
ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ನಂತಹ ಸಾಂಕ್ರಾಮೀಕೇತರ ಕಾಯಿಲೆಗಳಿಗೆ ಕಾಲಕಾಲಕ್ಕೆ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು. ಈಗಿನ ಆಯುಷ್ಮಾನ್(ಅಭಾ) ಕಾರ್ಡ್ ದೇಶಕ್ಕೆ ಸೀಮಿತವಾಗಿದ್ದರೆ, ಹಿಂದಿನ ಕಾರ್ಡ್ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿತ್ತು ಎಂದರು.
ಸಂಪನ್ಮೂಲ ವ್ಯಕ್ತಿ, ಬಜ್ಪೆ ಪಶು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ್ ಮಾತನಾಡಿ, ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮ ೨೦೩೦ರವರೆಗೆ ಪ್ರತಿವರ್ಷ ಸೆಪ್ಟೆಂಬರ್ನಲ್ಲಿ ನಡೆಯುತ್ತದೆ. ನಾಯಿಗಳಿಗೆ ಉಚಿತವಾಗಿ ರೇಬೀಸ್ ಲಸಿಕೆ ನೀಡಲಾಗುತ್ತದೆ. ಪ್ರತಿ ವರ್ಷ ಹಳ್ಳಿಗಳಲ್ಲಿ ಶೇ. ೬೦-೬೨ರಷ್ಟು ರೇಬೀಸ್ ಪ್ರಕರಣಗಳು ದಾಖಲಾಗುತ್ತವೆ. ನಾಯಿ ಕಚ್ಚುವುದರಿಂದ ಅಥವಾ ಸ್ಪರ್ಶಿಸುವುದರಿಂದ ರೇಬೀಸ್ ಹರಡುತ್ತದೆ. ಸಾಕುಪ್ರಾಣಿಗಳು, ಕಾಡು ಪ್ರಾಣಿಗಳಿಂದಲೂ ರೇಬೀಸ್ ಹರಡುತ್ತದೆ. ದನಗಳಲ್ಲೂ ರೇಬೀಸ್ ಪತ್ತೆಯಾಗಿದೆ. ನಾಯಿ ಕಚ್ಚಿದರೆ ಮನೆಮದ್ದು ಬಿಟ್ಟು, ನೇರವಾಗಿ ವೈದ್ಯರ ಸಲಹೆ ಮತ್ತು ಸೂಕ್ತ ಔಷಧಿ ಪಡೆಯಿರಿ. ನಾಯಿಗಳ ಬಗ್ಗೆ ಎಚ್ಚರ ವಹಿಸಿ, ಅವುಗಳಿಂದ ಅನವಶ್ಯಕ ಅಪಾಯ ಎದುರಿಸಬೇಡಿ ಎಂದರು.
ಎರಡೂ ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ಮಾತನಾಡಿ, ಗ್ರಾಮೀಣ ಜನರ ಸ್ವಾಸ್ಥ್ಯ ಆಧರಿತ ಸರ್ಕಾರಿ ಕಾರ್ಯಕ್ರಮ ಇದಾಗಿದ್ದು, ಹೆಚ್ಚೆಚ್ಚು ಮಂದಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಬೀದಿ ನಾಯಿಗಳ ನಿಯಂತ್ರಣಕ್ಕೆ ಕಾಲಕಾಲಕ್ಕೆ ಪಂಚಾಯತ್ ಆಡಳಿತ ಆದ್ಯತೆ ನೀಡುತ್ತ ಬಂದಿದೆ ಎಂದರು.
ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತ್ರಾಜ್, ಪಿಡಿಒ ಅಬೂಬಕ್ಕರ್, ಕಾರ್ಯದರ್ಶಿ ಅಶೋಕ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ, ಪಂಚಾಯತ್ ಸದಸ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು. ಆಶಾ ಸುಗಮಕಾರರಾದ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರೆ, ಆರೋಗ್ಯ ಸಿಬ್ಬಂದಿ ಎಲಿಯಮ್ಮ ವಂದಿಸಿದರು.