ರಾಜಕಾಲುವೆ ಅತಿಕ್ರಮ ತೆರವು ಕಾರ್ಯಾಚರಣೆ – ಭೇದಭಾವದ ಪ್ರಶ್ನೆಯೇ ಇಲ್ಲವೆಂದ ಸಿಎಂ
ಬೆಂಗಳೂರು: ರಾಜಕಾಲುವೆ (Rajkaluve) ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಭೇದಭಾವ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾಲುವೆ ಮೇಲೆ ಕಟ್ಟಡ, ಮನೆ ಕಟ್ಟಿರುವವರು, ಜೊತೆಗೆ ಯಾರು ಕಾಲುವೆ ನೀರನ್ನು ಹರಿಸಲು ತೊಂದರೆ ಮಾಡಿದ್ದಾರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೆಲವರು ರಾಜಕಾಲುವೆಯನ್ನು (Rajkaluve) ಮುಚ್ಚಿದ್ದಾರೆ. ಮಳೆ ನೀರು ಚರಂಡಿಗೆ ಅಡ್ಡಿಯಾಗಿದ್ದರೆ, ಅವುಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಪ್ರವಾಹ ಬಂದಾಗ ಐಟಿಬಿಟಿಯವರು (ITBT) ಸೇರಿದಂತೆ ಎಲ್ಲರಿಗೂ ತೊಂದರೆಯಾಗಿದೆ. ಜನಸಾಮಾನ್ಯರು, ಕೆಳಹಂತದ ಮನೆಗಳಿಗೂ ತೊಂದರೆಯಾಗಿದೆ. ಇವುಗಳನ್ನು ತೆರವುಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದಿದ್ದಾರೆ.
ಹಲವಾರು ಪ್ರಕರಣಗಳು ನ್ಯಾಯಾಲಯದಲ್ಲಿ (Court) ದಾಖಲಾಗಿ ನಿರ್ದೇಶನ ಪಡೆಯಲಾಗಿದೆ. ನ್ಯಾಯಾಲಯದಲ್ಲಿಯೂ ಗಂಭೀರವಾಗಿ ಇವುಗಳ ಬಗ್ಗೆ ಮಾಹಿತಿ ನೀಡಲಾಗುವುದು. ನ್ಯಾಯಾಲಯವೂ ಪ್ರವಾಹದ ಪ್ರಕರಣದಲ್ಲಿ ನಿರ್ದೇಶನಗಳನ್ನು ನೀಡಿದೆ. ಈ ಬಾರಿ ದೊಡ್ಡ ಪ್ರಮಾಣದಲ್ಲಿ ಅತಿಕ್ರಮಣ ತೆರೆವುಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಪಿಎಸ್ಐ ನೇಮಕಾತಿ: ಪಿಎಸ್ಐ (PSI) ಅಕ್ರಮ ನೇಮಕಾತಿ ಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕರು ಮಾತನಾಡಿರುವ ವೀಡಿಯೊ (Video) ಬಿಡುಗಡೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಆಡಿಯೋನೋ, ವೀಡಿಯೋನೋ ಗೊತ್ತಿಲ್ಲ. ಅದನ್ನು ಪರಿಶೀಲಿಸಲಾಗುವುದು. ಹಾಗೇನಾದರೂ ತಪ್ಪು ಕಂಡುಬಂದಲ್ಲಿ ತನಿಖೆಗೆ ಆದೇಶಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.