ಕೈಕಂಬ : ಉಳಾಯಿಬೆಟ್ಟು ಗ್ರಾಮ ಪಂಚಾಯತ್ನ ೨೦೨೧-೨೨ರ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಮಂಗಳವಾರ ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು ಅಧ್ಯಕ್ಷತೆಯಲ್ಲಿ ಪಂಚಾಯತ್ನ `ಫಲ್ಗುಣಿ’ ಸಮುದಾಯ ಭವನದಲ್ಲಿ ನಡೆಯಿತು.
ಸಭೆ ಆರಂಭದಲ್ಲೇ ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆ ಇಲಾಖೆಗಳ ಅಧಿಕಾರಿಗಳ ಗೈರಿಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಮುಂದಿನ ಗ್ರಾಮಸಭೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಿರುವಂತೆ ನೋಡಿಕೊಳ್ಳಲಾಗುವುದು ಹಾಗೂ ಪಂಚಾಯತ್ನಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳ ಕಾರ್ಯಾಗಾರ ನಡೆಸಲಾಗುವುದು ಎಂದು ಪಂಚಾಯತ್ ಅಧ್ಯಕ್ಷರು ಭರವಸೆ ನೀಡಿದರು.
ಜಮೆ ಖರ್ಚು ವರದಿಯಲ್ಲಿ ಅನೇಕ ಲೋಪ-ದೋಷಗಳಿವೆ. ಮೆಸ್ಕಾಂ ಮತ್ತು ದೂರವಾಣಿ ಬಿಲ್ ಒಟ್ಟಿಗೆ ಹಾಕಲಾಗಿದ್ದರೆ, ಪ್ರಿಂಟಿAಗ್, ಪತ್ರಿಕಾ ಖರ್ಚು ಪ್ರತ್ಯೇಕ ಬರೆದಿಲ್ಲ ಎಂದು ಪಂಚಾಯತ್ನ ಮಾಜಿ ಅಧ್ಯಕ್ಷ ರಾಜೀವ ಶೆಟ್ಟಿ ಸಲ್ಲಾಜೆ ಆಕ್ಷೇಪಿಸಿದರು.
ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಿರಾಗ್ ಗ್ರಾಮಸ್ಥರೆಲ್ಲರೂ ಕೊರೋನಾ ಲಸಿಕೆ ಹಾಕಿಕೊಳ್ಳುವಂತೆ ಮನವಿ ಮಾಡಿದರೆ, `ಅರಣ್ಯ-ಕೃಷಿ ಪ್ರೋತ್ಸಾಹ’ ಯೋಜನೆ ಬಗ್ಗೆ ಮಂಗಳೂರು ಅರಣ್ಯ ಇಲಾಖಾಧಿಕಾರಿ ಸೋಮಲಿಂಗ ಹಿಪ್ಪರಗಿ ಮಾಹಿತಿ ನೀಡಿದರು.
ತ್ಯಾಜ್ಯ ವಿಲೇವಾರಿ, ಜಲಜೀವನ್ ಮಿಷನ್(ಜೆಜೆಎಂ) ಕುಡಿಯುವ ನೀರು, ಕೆರೆ ಅಭಿವೃದ್ಧಿ, ಸಾರ್ವಜನಿಕರಿಗೆ ತೊಂದರೆಯುಂಟು ಮಾಡುತ್ತಿರುವ ಅರ್ಧಂಬರ್ಧ ಕಾಮಗಾರಿ, ಹೊಸ ಅಂಗನವಾಡಿ ಮತ್ತು ಆರೋಗ್ಯ ಕೇಂದ್ರ ಕಟ್ಟಡ ಇತ್ಯಾದಿ ವಿಷಯಗಳ ಬಗ್ಗೆ ಗ್ರಾಮಸ್ಥರು ಸಭೆಯ ಗಮನಹರಿಸಿದರು. ಪಿಡಿಒ ಅನಿತಾ ಕ್ಯಾಥರಿನ್ ಸ್ವಾಗತಿಸಿ, ಗ್ರಾಮಸ್ಥರ ಮಹತ್ವದ ಪ್ರಶ್ನೆಗಳಿಗೆ ಉತ್ತರಿಸಿದರು.
ಶಿಕ್ಷಣ ಇಲಾಖೆ ಬಿಇಒ ಶಿವಶಂಕರ್, ಪಂಚಾಯತ್ ಸದಸ್ಯರು, ಪಂಚಾಯತ್ರಾಜ್ ಇಂಜಿನಿಯರ್ ಇಲಾಖೆಯ ಪ್ರದೀಪ್, ಮಕ್ಕಳು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆಯ ಉಳಾಯಿಬೆಟ್ಟು ಮೇಲ್ವಿಚಾರಕಿ ಶಾಲಿನಿ, ಗ್ರಾಮ ಕರಣಿಕ(ವಿಎ) ದಿನೇಶ್ ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿ ನೀಡಿದರು. ನೋಡೆಲ್ ಅಧಿಕಾರಿಯಾಗಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಶ್ ಗ್ರಾಮಸಭೆ ನಿರ್ವಹಿಸಿದರೆ, ಉಪಾಧ್ಯಕ್ಷೆ ರತ್ನಾ, ಆಶಾ, ಆರೋಗ್ಯ ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.
