ಕೈಕಂಬ : ಕುಪ್ಪೆಪದವು ಪಂಚಾಯತ್ ವ್ಯಾಪ್ತಿಯ ಗುರ್ಕಾರಗುಡ್ಡೆ ಎಂಬಲ್ಲಿ ಹಿಂದೂ ರುದ್ರಭೂಮಿಗೆ ಮೀಸಲಿಡಲಾದ ೫೦ ಸೆಂಟ್ಸ್ ಸರ್ಕಾರಿ ಜಾಗಕ್ಕೆ ಒಂದು ದಿನದೊಳಗೆ(ಜ. ೩೧) ಸರ್ವೆ ನಡೆಸಿ ಗಡಿ ಗುರುತು ಹಾಕುವಂತೆ ಕಂದಾಯ ನಿರೀಕ್ಷಕ(ಆರ್ಐ) ಪೂರ್ಣಚಂದ್ರ ತೇಜಸ್ವಿ ಮತ್ತು ಗ್ರಾಮ ಕರಣಿಕ(ವಿಎ) ದೇವರಾಜ್ ಅವರಿಗೆ ಶಾಸಕ ಡಾ. ಭರತ್ ಶೆಟ್ಟಿ ಸೂಚಿಸಿದರು.
ಕುಪ್ಪೆಪದವು ಪಂಚಾಯತ್ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಜಾಗದ ಸರ್ವೆ ನಡೆಸುವಲ್ಲಿ ವಿಳಂಬ ಮಾಡುತ್ತಿರುವ ಕಂದಾಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಜಾಗದ ಬಗ್ಗೆ ಸ್ಥಳೀಯರಿಂದ ವಿರೋಧ ಅಥವಾ ಆಕ್ಷೇಪಗಳಿಲ್ಲದ ಹೊರತಾಗಿಯೂ ವಿನಾ ಕಾರಣ ಸರ್ವೆ ವಿಳಂಬ ಮಾಡುವುದು ಸರಿಯಲ್ಲ ಎಂದರು.
ಹತ್ತಿರದಲ್ಲಿರುವ ವಾಸ್ತವ್ಯದ ಮನೆಗಳಿಗೆ ಯಾವುದೇ ಸಮಸ್ಯೆಯಾಗಬಾರದು. ಮೊದಲಾಗಿ ರುದ್ರಭೂಮಿ ನಿರ್ಮಾಣಕ್ಕೆ ಅಗತ್ಯವಿರುವ ೫೦ ಸೆಂಟ್ಸ್ ಜಾಗದ ಸರ್ವೆ ನಡೆಸಿ, ಉಳಿಕೆ ಜಾಗ ದಾಖಲಿಸಿಕೊಳ್ಳಿ. ಹತ್ತಿರದಲ್ಲಿ ನಿರ್ಮಾಣವಾಗಲಿರುವ ಘನತ್ಯಾಜ್ಯ ಘಟಕ ಮತ್ತು ಅದಕ್ಕೆ ಸೂಕ್ತ ರಸ್ತೆ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಹೇಳಿದರು.
ಚರ್ಚೆ ವೇಳೆ ಕುಪ್ಪೆಪದವು ಪಂಚಾಯತ್ ಅಧ್ಯಕ್ಷ ಡಿ ಪಿ ಹಮ್ಮಬ್ಬ, ಉಪಾಧ್ಯಕ್ಷೆ ವಿಮಲಾ ಜಿ, ಬಿಜೆಪಿ ಮುಖಂಡರಾದ ಜಗದೀಶ್ ಕುಲಾಲ್ ಪಾಕಜೆ, ಗಣೇಶ್ ಪಾಕಜೆ, ಆರ್ಐ ಪೂರ್ಣಚಂದ್ರ ತೇಜಸ್ವಿ, ವಿಎ ದೇವರಾಜ್, ತಾಲೂಕು ಸರ್ವೇಯರ್ ಧನಶೇಖರ್, ಪಂಚಾಯತ್ ಸದಸ್ಯರು, ಪಿಡಿಒ ಸವಿತಾ ಮಂದೋಲಿಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
