ಮುಂಬಯಿ: ಕಳೆದ ಸುಮಾರು ೩೭ ವರ್ಷಗಳಿಂದ ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಕ್ರೀಡಾ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳ ಮೂಲಕ ಸೇವಾ ನಿರತ ಬಂಟ್ವಾಳ ಪುಂಜಾಲಕಟ್ಟೆ ಇಲ್ಲಿನ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ೩೭ನೇ ವಾರ್ಷಿಕ ಸಂಭ್ರಮಾಚರಣೆಯಲ್ಲಿದೆ.ಆ ಪ್ರಯುಕ್ತ ಇದೇ ಡಿ.೧೮ ಮತ್ತು ೧೯ರ ದ್ವಿದಿನಗಳಲ್ಲಿ ಪುಂಜಾಲಕಟ್ಟೆ ಅಲ್ಲಿನ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಪ್ರೋ ಕಬಡ್ಡಿ ಪಂದ್ಯಾಟ ೨೦೨೧ ಆಯೋಜಿಸಿದೆ ಎಂದು ಕ್ಲಬ್ನ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ನ ಸಹಭಾಗಿತ್ವ ಹಾಗೂ ಮುಂಬಯಿ ಉದ್ಯಮಿ ಸುಂದರರಾಜ್ ಹೆಗ್ಡೆ ಮುಂಬಯಿ ಸಹಯೋಗದೊಂದಿಗೆ ಈ ಬಾರಿ ಅಂತರ್ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವನ್ನು ‘ಪುನೀತ್ ರಾಜ್ಕುಮಾರ್ ಯುವರತ್ನ ಪ್ರಶಸ್ತಿ’ ಸ್ವಸ್ತಿಕ್ ಪ್ರೋ ಕಬಡ್ಡಿ ಉತ್ಸವ ಆಗಿಸಿ ಹಮ್ಮಿಕೊಳ್ಳಲಾಗಿದೆ. ಪುರುಷರ ೬೦ ಕೆ.ಜಿ ವಿಭಾಗ, ಮಹಿಳೆಯರ ಹಾಗೂ ಪುರುಷರ ಮುಕ್ತ ವಿಭಾಗ ಮತ್ತು ಪ್ರೌಢ ಶಾಲಾ ಬಾಲಕ-ಬಾಲಕಿಯರ ಸ್ವಸ್ತಿಕ್ ಪ್ರೋ ಕಬಡ್ಡಿ ಪಂದ್ಯಾಟ ನಡೆಸಲಾಗುವುದು.
ಡಿ.೧೮ರಂದು ಶನಿವಾರ ಪೂರ್ವಾಹ್ನ ೧೦.೩೦ ಗಂಟೆಗೆ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅಧ್ಯಕ್ಷತೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ. ಶ್ರೀ ಸತ್ಯದೇವತೆ ದೈವಸ್ಥಾನ ಅಳದಂಗಡಿ ಇದರ ಆಡಳಿತದಾರ ಶಿವಪ್ರಸಾದ್ ಅಜಿಲ ಇವರು ಅಪ್ಪು ಕ್ರೀಡಾ ಜ್ಯೋತಿ ಪ್ರಜ್ವಲನೆಗೈಯಲಿದ್ದು, ರಾಬರ್ಟ್ ಬೆಂಗಳೂರು ಇದರ ಮಾನವ ಸಂಪನ್ಮೂಲ ಅಧಿಕಾರಿ ಜಯಂತ್ ಪೂಜಾರಿ ಪಡ್ಡಾಯೂರು ಪಂದ್ಯಾಟ ಉದ್ಘಾಟಿಸಲಿದ್ದಾರೆ.
ಸಂಜೆ ೪.೩೦ ಗಂಟೆಗೆ ಅಂತರ್ರಾಜ್ಯ ಮಟ್ಟದ ೬೦ ಕೆ.ಜಿ ವಿಭಾಗದ ಸ್ವಸ್ತಿಕ್ ಪ್ರೋ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಕರ್ನಾಟಕ ವಿಧಾನ ಪರಿಷತ್ನ ಶಾಸಕ ಕೆ. ಪ್ರತಾಪ್ಸಿಂಹ ನಾಯಕ್ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಮೀನುಗಾರಿಕೆ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಪಂದ್ಯಾಟ ಉದ್ಘಾಟಿಸಲಿದ್ದಾರೆ.
ಡಿ.೧೯ರ ಭಾನುವಾರ ಪೂರ್ವಾಹ್ನ ೧೦.೩೦ ಗಂಟೆಗೆ ಮಹಿಳೆಯರ ಮತ್ತು ಪುರುಷರ ಮುಕ್ತ ವಿಭಾಗದ ಪಂದ್ಯಾಟ ನಡೆಯಲಿದ್ದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಕತ್ತಲ್ಸಾರ್ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಜ್ಯೋತಿ ಪ್ರಜ್ವಲನೆಗೈಯಲಿದ್ದು, ಉಡುಪಿ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಕುಮಾರ್ಚಂದ್ರ ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ.
ಸುಮಾರು ೧೨ ಸ್ಥಾನೀಯ ಸಂಘ-ಸoಸ್ಥೆಗಳ ಸಹಯೋಗತ್ವದಲ್ಲಿ ಜರುಗುವ ಈ ಉತ್ಸವದಲ್ಲಿ ೫೦ಕ್ಕೂ ಅಧಿಕ ಮಹಾನೀಯರು ಅತಿಥಿü ಅಭ್ಯಾಗತರುಗಳಾಗಿ ಪಾಲ್ಗೊಳ್ಳಲಿದ್ದು, ಸಂಜೆ ೪.೩೦ ಗಂಟೆಗೆ ದ.ಕ ಜಿಲ್ಲಾ ಸಂಸದ, ಬಿಜೆಪಿ ಕರ್ನಾಟಕ ರಾಜ್ಯಧ್ಯಕ್ಷ ನಳಿನ್ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ. ಸುನೀಲ್ಕುಮಾರ್ ಆಗಮಿಸಿ ನಾಡಿನ ವಿವಿಧ ಸಾಧಕರಿಗೆ ೨೦೨೦ ಮತ್ತು ೨೦೨೧ ಸಾಲಿನ `ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ’ಗಳನ್ನು ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಪಿ.ಸುಬ್ರಹ್ಮಣ್ಯ ಎಡಪಡಿತ್ತಾಯ ಅವರು `ಅಪ್ಪು ಯುವರತ್ನ ಪ್ರಶಸ್ತಿ’ ಪ್ರದಾನಿಸುವರು.
ನಾಡಿನ ಸಮಸ್ತ ಕ್ರೀಡಾಭಿಮಾನಿಗಳು, ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸುವಂತೆ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಗೌರವಾಧ್ಯಕ್ಷ ಅಬ್ದುಲ್ ಪಿ.ಮಂಜಲಪಲ್ಕೆ, ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಪಂದ್ಯಾಟದ ಸಂಚಾಲಕ ರಾಜೇಶ್ ಪಿ.ಪುಂಜಲಕಟ್ಟೆ, ಸಹ ಸಂಚಾಲಕ ಅಬ್ದುಲ್ ಹಮೀದ್ ಮಲ್ಪೆ, ತಾಂತ್ರಿಕ ಸಮಿತಿ ಸಂಚಾಲಕ ಫ್ರಾನ್ಸಿಸ್ ವಿ.ವಿ ತಿಳಿಸಿದ್ದಾರೆ.
