ಮುಂಬಯಿ : ಭಾರತ ದೇಶದಲ್ಲಿ ಶಿಕ್ಷಣಕ್ಕೆ ದಾರಿದ್ರ್ಯವಿಲ್ಲ ಆದರೆ ಸದ್ಯ ಸಂಸ್ಕಾರದ ಕೊರತೆಯಿದೆ. ಇದನ್ನು ನೀಗಿಸಿ ಮನುಕುಲಕ್ಕೆ ಸಂಸ್ಕಾರ ನೀಡುವುದೇ ಶಿಕ್ಷಣವಾಗಿದೆ. ಪ್ರಸಕ್ತ ಶಿಕ್ಷಣದಲ್ಲಿ ಮೌಲ್ಯ ಕ್ಷೀಣಿಸುತ್ತಿರುವುದು ಶೋಚನೀಯ. ಅದ್ದರಿಂದ ಶಿಕ್ಷಣದ ಮಹತ್ವವನ್ನು ನಾವೆಲ್ಲರೂ ಸೂಕ್ಷ್ಮವಾಗಿ ಗ್ರಹಿಸಬೇಕು. ಇವೆಲ್ಲವನ್ನು ಸರಿದೂಗಿಸಲು ನಾವು ಯಾರನ್ನು ದೋಷಣೆ ಮಾಡದೆ ವ್ಯವಸ್ಥೆಯ ಬಗ್ಗೆ ಹೋರಾಡುವ ಅಗತ್ಯವಿದೆ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಸ್ಥಾಪಕಧ್ಯಕ್ಷ, ನಿವೃತ್ತ ಪ್ರಾಧ್ಯಾಪಕ ಪ್ರೊ| ಡಾ| ತುಕಾರಾಮ ಪೂಜಾರಿ ಕರೆಯಿತ್ತರು.
ಗುಜರಾತ್ ಬಿಲ್ಲವರ ಸಂಘ (ಜಿಬಿಎಸ್)ವು ಇಂದಿಲ್ಲಿ ಆದಿತ್ಯವಾರ ಬರೋಡಾ ಅಲ್ಕಾಪುರಾ ಇಲ್ಲಿನ ಸಂಘದ ಶ್ರೀ ಬೈದ್ಯಶ್ರೀ ಸಾಂಸ್ಕೃತಿಕ ಸಭಾ ಭವನದಲ್ಲಿ ಆಯೋಜಿಸಿದ್ದ ಸಮಾಜ ಬಂಧುಗಳಿಗೆ ಸ್ವಾಸ್ಥ್ಯ ಬಿಮಾ ಪಾಲಿಸಿ ಮತ್ತು ಉನ್ನತ ಶಿಕ್ಷಣದ ವಿದ್ಯಾರ್ಥಿ ವೇತನ ವಿತರಣೆ ಹಾಗೂ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ರಜತೋತ್ಸವದ ಸಂಸ್ಮರಣಾ ಗ್ರಂಥ `ಸಿರಿಕಂಡ’ ಬಿಡುಗಡೆ ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರಾಗಿದ್ದು `ಉನ್ನತ ಶಿಕ್ಷಣದ ಮಹತ್ವ’ ಡಾ| ತುಕಾರಾಮ ಪೂಜಾರಿ ವಿಷಯವಾಗಿ ಮಾತನಾಡಿದರು.
ಜಿಬಿಎಸ್ ಅಧ್ಯಕ್ಷ ವಿಶ್ವನಾಥ್ ಜಿ.ಪೂಜಾರಿ ಬಾರ್ಡೋಲಿ (ಸೂರತ್) ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭಕ್ಕೆ ಸೂರತ್ನ ಹಿರಿಯ ಉದ್ಯಮಿ ಶಿವರಾಮ ಬಿ.ಶೆಟ್ಟಿ ಹಾವಂಜೆ ದೀಪ ಬೆಳಗಿಸಿ ಚಾಲನೆಯನ್ನಿತ್ತರು. ಅತಿಥಿ ಅಭ್ಯಾಗತರಾಗಿದ್ದ ಗುಜರಾತ್ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ (ಗುರುವಾಯನಕೆರೆ) ಬರೋಡ ಇವರು ‘ಸಿರಿಕಂಡ’ ಸಂಸ್ಮರಣಾ ಗ್ರಂಥ ಬಿಡುಗಡೆ ಗೊಳಿಸಿದರು. ಗೌರವ ಅತಿಥಿಗಳಾಗಿ ರಾಣಿ ಅಬ್ಬಕ್ಕ ಕೇಂದ್ರದ ಕಾರ್ಯದರ್ಶಿ ಮತ್ತು ಪ್ರಾಧ್ಯಾಪಕಿ ಡಾ| ಆಶಾಲತ ತುಕರಾಮ ಪೂಜಾರಿ, ತುಳು ಸಂಘ ಅಂಕ್ಲೇಶ್ವರ್ ಅಧ್ಯಕ್ಷ ರವಿನಾಥ್ ಶೆಟ್ಟಿ, ಅಂಕ್ಲೇಶ್ವರ್ನ ಉದ್ಯಮಿ ಅಜಿತ್ ಶೆಟ್ಟಿ, ಸದಾನಂದ ಅಮೀನ್ ಬನ್ನಂಜೆ, ಶೋಭಾ ದಯಾನಂದ ಬೋಂಟ್ರಾ ವೇದಿಕೆಯಲ್ಲಿದ್ದು ಸಮಾಜದ ಮಕ್ಕಳಿಗೆ ವಿದ್ಯಾಥಿವೇತನ, ಸಮಾಜ ಬಂಧುಗಳಿಗೆ ಸ್ವಾಸ್ಥ ್ಯ ಬಿಮಾ ಪಾಲಿಸಿ ವಿತರಿಸಿದರು.
ಜಿಬಿಎಸ್ ಗೌರವಾಧ್ಯಕ್ಷ ದಯಾನಂದ ಬೊಂಟ್ರ (ಬೆಳ್ಮಣ್ಣು), ಮಾಜಿ ಅಧ್ಯಕ್ಷ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್, ನಿಕಟಪೂರ್ವ ಅಧ್ಯಕ್ಷ ಮನೋಜ್ ಸಿ.ಪೂಜಾರಿ, ಉಪಾಧ್ಯಕ್ಷರುಗಳಾದ ವಿ.ಡಿ ಅಮೀನ್, ವಾಸುದೇವ ಪೂಜಾರಿ, ಸದಾಶಿವ ಪೂಜಾರಿ, ಹರೀಶ್ ಪೂಜಾರಿ, ಲೋಕಯ್ಯ ಪೂಜಾರಿ, ಗೌ| ಪ್ರ| ಕಾರ್ಯದರ್ಶಿ ವಾಸು ವಿ.ಸುವರ್ಣ, ಗೌ| ಪ್ರ| ಕೋಶಾಧಿಕಾರಿ ಸುದೇಶ್ ವೈ.ಕೋಟ್ಯಾನ್, ಜೊತೆ ಕಾರ್ಯದರ್ಶಿ ದಯಾನಂದ ಸಾಲಿಯಾನ್, ಜೊತೆ ಕೋಶಾಧಿಕಾರಿ ರವಿ ಸಾಲಿಯಾನ್, ಮಹಿಳಾ ವಿಭಾಗಧ್ಯಕ್ಷೆ ಸರಿತಾ ಸೋಮನಾಥ ಪೂಜಾರಿ, ಸಂಚಾಲಕರಾದ ರೋಹಿದಾಸ್ ಪೂಜಾರಿ, ಪ್ರಭಾಕರ್ ಪೂಜಾರಿ (ಸೂರತ್), ರಮೇಶ್ ಪೂಜಾರಿ (ವಾಪಿ-ವಲ್ಸಾಡ್), ಹರೀಶ್ ಪೂಜಾರಿ (ಅಂಕ್ಲೇಶ್ವರ), ಚಂದ್ರಿಕಾ ಕೋಟ್ಯಾನ್ ವಾಪಿ ಮತ್ತಿತರರು ವೇದಿಕೆಯಲ್ಲಿದ್ದು ಅತಿಥಿüಗಳು ಜಿಬಿಎಸ್ ಮುಖ್ಯ ಸಂಚಾಲಕ ಜಿನರಾಜ್ ಪೂಜಾರಿ (ಪತ್ನಿ ಜಯಶ್ರೀ ಜೆ.ಪೂಜಾರಿ ಅವರೊಂದಿಗೆ) ಇವರನ್ನು ಸನ್ಮಾನಿಸಿ ಅಭಿನಂದಿಸಿದರು.
ಶಿಕ್ಷಣ ಸೇವೆ ನಿರಂತರವಾಗಿ ನಡೆದಾಗ ಸಾಕ್ಷರತೆ ಸಿದ್ಧಿಸಿ ದೇಶವು ಬಲಾಢ್ಯಗೊಳ್ಳುವುದು. ಸುಶಿಕ್ಷಣದಿಂದ ಮಾತ್ರ ಭಾವೀ ಜನಾಂಗದ ಬದುಕು ಹಸನಾಗುವುದು. ಪ್ರಸಕ್ತ ಮಕ್ಕಳ ಶಿಕ್ಷಣಕ್ಕೆ ವಿಪುಲ ಅವಕಾಶಗಳಿದ್ದು ಮಕ್ಕಳು ಇದನ್ನು ಸದುಪಯೋಗ ಪಡೆಯುವಲ್ಲಿ ಪೋಷಕರು ಮತ್ತು ಸಂಸ್ಥೆಗಳು ಪ್ರೇರೆಪಿಸಬೇಕು. ಇಂತಹ ಪ್ರೇರಣೆಗೆ ವಿದ್ಯಾರ್ಥಿ ವೇತನವು ಪೂರಕವಾಗಿದೆ ಎಂದು ಶಶಿಧರ ಬಿ.ಶೆಟ್ಟಿ ತಿಳಿಸಿದರು.
ಡಾ| ಆಶಾಲತ ಅವರು ‘ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಿಯ ಪಾತ್ರ’ ವಿಷಯವಾಗಿ ಮಾರ್ಗದರ್ಶನ ನೀಡಿ ನಾರಿಯರು ಮುನಿದರೆ ವಾಘ್ರ್ಯಕ್ಕೂ ಬಲಿಷ್ಠರಾಗಿರುತ್ತಾರೆ. ಒಂದು ಕಾಲದ ತಾಯಿ ಮಕ್ಕಳ ಕರುಳುಬಳ್ಳಿಯ ಸಂಬಂಧ ಇಂದು ಮಾಯವಾಗುತ್ತಿರುವುದು ದುರದೃಷ್ಟಕರ. ಮಕ್ಕಳ ಮೇಲಿನ ವ್ಯಾಮೋಹ ಹೆತ್ತ ತಾಯಿಯ ತ್ಯಾಗದಲ್ಲಿ ಅಡಗಿರುತ್ತದೆ. ಆದರೆ ಆಧುನಿಕ ಜೀವನಶೈಲಿ ಇದಕ್ಕೆ ಮಾರಕವಾಗಿದೆ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಮಕ್ಕಳಲ್ಲಿ ರೂಢಿಸಿದರೆ ತಾಯಿ, ಮಕ್ಕಳ ಸಂಬಂಧ ಕೊನೆತನಕ ಶಾಶ್ವತವಾಗಿರುವುದು ಎಂದು ಸಲಹಿದರು.
ದಯಾನಂದ ಬೊಂಟ್ರ ಪ್ರಸ್ತಾವಿಕ ನುಡಿಗಳನ್ನಾಡಿ ವಿದ್ಯಾರ್ಥಿವೇತನ ಪ್ರೇರಣೆಯ ಸಂಕೇತವಾಗಿದೆ. ಕೊಡುಗೈ ವಿದ್ಯಾದಾನಿಗಳ ಪುಣ್ಯದ ಫಲ ಇದಾಗಿದೆ. ಮಕ್ಕಳು ಸುಶಿಕ್ಷಿತರಾದರೆ ರಾಷ್ಟ್ರವೇ ಸುರಕ್ಷಿತ ಹೊಂದುವುದು ಎಂದರು.
೨೪ರ ನಡೆಯಲ್ಲಿನ ಈ ಸಂಘವು ಸಮಾಜದ ಹಿತದೃಷ್ಟಿಯನ್ನಿರಿಸಿ ಸೇವೆ ಸಲ್ಲಿಸಿದೆ. ಸಹಾಯಸ್ತವೇ ಸಂಸ್ಥೆಗಳ ಉದ್ದೇಶವಾಗಿರುವಂತೆಯೇ ಸಮಾಜದ ಮಕ್ಕಳನ್ನು ಪ್ರೇರೆಪಿಸುವ ಸಹಯೋಗವು ಶ್ರೇಷ್ಠವಾಗಿದೆ ಎಂದು ಮೋಹನ್ ಪೂಜಾರಿ ಅಹ್ಮದಾಬಾದ್ ತಿಳಿಸಿದರು.
ಹಣಕಾಸಿನಿಂದ ಶಿಕ್ಷಣ ವಂಚಿತವಾಗುವ ಕಾಲ ಇದಲ್ಲ. ಇಲ್ಲಿ ಪ್ರತಿಭಾನ್ವೇಷಣೆಗೆ ವಿಪುಲ ಅವಕಾಶಗಳಿವೆ. ಆದರೆ ಸರ್ವೋನ್ನತ ಶಿಕ್ಷಣ ಪಡೆಯಲು ಹಣಕಾಸು ನೆರವಿಗೆ ವಿದ್ಯಾರ್ಥಿವೇತನ ಪ್ರೋತ್ಸಾಹವಾಗಿದೆ ಇದನ್ನು ಈ ಸಂಸ್ಥೆ ನೆರವೇರಿಸಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ವಿಶ್ವನಾಥ್ ಪೂಜಾರಿ ತಿಳಿಸಿದರು.
ಅಮೀತಾ ವಿಶ್ವನಾಥ್ (ಸೂರತ್), ನೂತನ ಶ್ಯಾಮ ಸುವರ್ಣ ಪುಣೆ, ಸದಾಶಿವ ವಾಪಿ, ಹಿತೇಸ್ ಕುಮಾರ್ ಶಂಕರಪುರ, ರಾಜೇಂದ್ರ ರೈ ಮತ್ತಿತರರು ಸೇರಿದಂತೆ ಜಿಬಿಎಸ್ನ ಇತರ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದು ಆದಿಯಲ್ಲಿ ಸಂಘದ ಮಂದಿರದಲ್ಲಿನ ಕುಲಗುರು ಕೋಟಿ ಚೆನ್ನಯರು, ಕುಲದೇವತೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರು, ಮಾತೆ ಗಾಯತ್ರಿದೇವಿಗೆ ಗಣ್ಯರು ಆರತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕು| ಪ್ರೇಮ ಪೂಜಾರಿ, ಕು| ಭವ್ಯ ಪೂಜಾರಿ, ಕು| ನಿಶ್ಚಿತಾ ಎನ್.ಪೂಜಾರಿ, ಕು| ಜಯಶ್ರಿ ಪೂಜಾರಿ ಪ್ರಾರ್ಥನೆಯ ನ್ನಾಡಿದರು. ರಾಷ್ಟ್ರವನ್ನಗಲಿದ ವೀರಸೇನಾನಿಗಳಿಗೆ ಹಾಗೂ ಸಂಘದ ಹಿರಿಯ ಚೇತನ ನ್ಯಾಯವಾದಿ ಲಕ್ಷ ್ಮಣ ಪೂಜಾರಿ ಮತ್ತಿತರರಿಗೆ ಶ್ರದ್ಧಾಂಜಲಿ ಕೋರಲಾಯಿತು. ವಿಶ್ವನಾಥ್ ಜಿ.ಪೂಜಾರಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಲಕ್ಷ ್ಮಣ್ ಪೂಜಾರಿ ವಿದ್ಯಾರ್ಥಿವೇತನ ಬಗ್ಗೆ ಮಾಹಿತಿ ನೀಡಿದರು. ವಾಸು ವಿ.ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸರಿತಾ ಸೋಮನಾಥ್ ವಂದನಾರ್ಪಣೆಗೈದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಘದ ಸದಸ್ಯರು ವೈವಿಧ್ಯಮಯ ನೃತ್ಯಾವಳಿಗಳನ್ನು ಮತ್ತು ಉಮೇಶ್ ಮಿಜಾರ್ ಬಳಗವು ತೆಲಿಕೆದ ಗೊಂಚಿಲ್ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

