ಕೋಲಾರ: ನಗರಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಿ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕೆಂದು ಆಗ್ರಹಿಸಿ ನಗರದ ಎಂಬಿ ರಸ್ತೆಯಲ್ಲಿನ ಹಳ್ಳಿಗಳ ಬಳಿ ಸಾಮೂಹಿಕ ನಾಯಕತ್ವದ ರೈತಸಂಘದಿಂದ ಹೋರಾಟ ಮಾಡಿ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ನಗರಾದ್ಯಂತ ಹದಗೆಟ್ಟಿರುವ ರಸ್ತೆಗಳು ವಾಹನ ಸವಾರರಿಗೆ ಯಮ ದರ್ಶನ ಮಾಡುವ ರಸ್ತೆಗಳಾಗಿ ಮಾರ್ಪಟ್ಟಿವೆ. ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾಧೆಯಂತೆ ಸರ್ಕಾರಗಳಿಂದ ಕೋಟ್ಯಾಂತರರೂಪಾಯಿ ಅನುದಾನ ರಸ್ತೆಗಳ ಅಭಿವೃದ್ಧಿಗೆ ಬಿಡುಗಡೆಯಾಗುತ್ತಿದ್ದರೂ ರಸ್ತೆಗಳು ಮಾತ್ರ ಕಾಡುಗಳ ರಸ್ತೆಗಳಿಗಿಂತ ಕಡೆಯಾಗಿ ಹದಗೆಟ್ಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲವಾರು ವರ್ಷಗಳಿಂದ ನಗರದಲ್ಲಿ ಅಮೃತ್ಸಿಟಿ, ನಗರೋತ್ಥಾನ ಯೋಜನೆಗಳಡಿ ಸಾಕಷ್ಟು ರಸ್ತೆಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದರಿಂದಾಗಿ ನಗರದ ಒಳ ಭಾಗದ ಬಹುತೇಕ ರಸ್ತೆಗಳನ್ನು ಅಗೆಯಲಾಗಿತ್ತು. ಆದರೆ, ಕೆಲವೇ ಕೆಲವು ರಸ್ತೆಗಳಿಗೆ ಬೇಕಾಬಿಟ್ಟಿ ಎಂಬಂತೆ ಡಾಂಬರು ಹಾಕಲಾಗಿದ್ದು, ಸಾಕಷ್ಟು ರಸ್ತೆಗಳು ಹಾಗೆಯೇ ಉಳಿದಿವೆ. ಇದರ ಜೊತೆಗೆ ಮುಖ್ಯರಸ್ತೆಗಳ ಅಭಿವೃದ್ಧಿ ಕಾರ್ಯಕ್ಕೂ ಚಾಲನೆ ನೀಡಲಾಗಿದ್ದು, ಅಭಿವೃದ್ಧಿ ಕಾಮಗಾರಿ ಆರಂಭದಲ್ಲಿ ಚುರುಕಾಗಿತ್ತಾದರೂ ಆನಂತರ ಸಾಕಷ್ಟು ವಿಳಂಭ ನೀತಿಯನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ, ಇನ್ನು ಕೆಲವು ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಒತ್ತುವರಿದಾರರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದು ಒಂದು ರೀತಿಯ ಸಮಸ್ಯೆಯಾಗಿದ್ದರೆ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಕೂಡಲೇ ತಡೆಯಾಜ್ಞೆ ತೆರವುಗೊಳಿಸಿಕೊಂಡು ಕೆಲಸ ಆರಂಭಿಸಲು ಮುಂದಾಗದೇ ಇರುವ ಅಧಿಕಾರಿಗಳ ನಿರ್ಲಕ್ಷ್ಯತನ ಮತ್ತೊಂದು ಸಮಸ್ಯೆಯಾಗಿದೆ ಎಂದು ದೂರಿದರು.
ಒಟ್ಟಾರೆ ಕೋಲಾರ ನಗರದಲ್ಲಿ ಬಹುತೇಕ ರಸ್ತೆಗಳು ಹಳ್ಳಕೊಳ್ಳಗಳಿಂದ ಕೂಡಿದ್ದು, ಈಗಾಗಲೇ ಮಳೆ ಆರಂಭವಾಗಿದ್ದು, ರಸ್ತೆಗಳು ಕೆರೆ-ಕುಂಟೆಗಳAತೆ ಕಾಣುತ್ತಿದ್ದು, ಇದರಿಂದ ದ್ವಿಚಕ್ರ ವಾಹನಗಳ ಸವಾರರು ಸಮರ್ಪಕವಾಗಿ ರಸ್ತೆ ಕಾಣಿಸದೆ ಹಳ್ಳಕೊಳ್ಳಗಳಲ್ಲಿ ಗಾಡಿಗಳನ್ನು ಬಿಟ್ಟು ಅಪಘಾತಗಳಾಗಿ ಅಂಗವಿಕಲರಾಗುವ ಜೊತೆಗೆ ಕೆಲವು ಪ್ರಕರಣಗಳು ಪೊಲೀಸ್ ಮೆಟ್ಟಿಲೇರಿವೆ.
ಆದ್ದರಿಂದ ಮಾನ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತು ನಗರಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸುವವರೆಗೂ ಸಣ್ಣಪುಟ್ಟ ಹಳ್ಳಗಳಿಗಾದರೂ ಜಲ್ಲಿಯನ್ನು ಹಾಕಿ ವಾಹನ ಸವಾರರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕಾಗಿ ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಲೋಕೋಪಯೋಗಿ ಇಲಾಖೆ ಅಧಿಕಾರಿ, ಕೊರೊನಾ ೨ನೇ ಅಲೆಯಿಂದ ರಸ್ತೆ ಅಭಿವೃದ್ಧಿ ಹಣ ಬಿಡುಗಡೆಯಾಗದ ಕಾರಣ ರಸ್ತೆಗಳ ಅಭಿವೃದ್ಧಿ ಕುಂಠಿತವಾಗಿದೆ. ಜನಸಾಮಾನ್ಯರ ಹಿತದೃಷ್ಠಿಯಿಂದ ೨೪ ಗಂಟೆಯಲ್ಲಿ ಪ್ರಮುಖ ರಸ್ತೆಗಳ ಹಳ್ಳಗಳನ್ನು ಜಲ್ಲಿ ಹಾಕಿ ಮುಚ್ಚುವ ಭರವಸೆ ನೀಡಿದರು.
ಹೋರಾಟದಲ್ಲಿ ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ಚಾಂದ್ಪಾಷ, ಮಂಗಸಂದ್ರ ತಿಮ್ಮಣ್ಣ, ಪುವಣ್ಣ, ಅಶ್ವತ್ಥಪ್ಪ, ವೆಂಕಟೇಶಪ್ಪ, ಮರಗಲ್ ಮುನಿಯಪ್ಪ, ಮಾಸ್ತಿ ಯಲ್ಲಪ್ಪ, ಮಾಸ್ತಿ ಹರೀಶ್, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮುಂತಾದವರಿದ್ದರು.
