ಕೋಲಾರ: ವೈದ್ಯರ ದಿನಾಚರಣೆ ಪ್ರಯುಕ್ತ ರೈತಸಂಘದಿಂದ ನಗರದ ಎಸ್ಎನ್ಆರ್ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕಳೆದ ಒಂದು ವರ್ಷದಿಂದಲೂ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಸಂಕಷ್ಟದ ಸಮಯದಲ್ಲಿಯೂ ವೈದ್ಯರು ಜನರ ಆರೋಗ್ಯಕ್ಕಾಗಿ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಿರುವುದು ಶ್ಲಾಘನೀಯವಾಗಿದೆ.
ಕೊರೊನಾ ಸೋಂಕು ಕಾಣಿಸಿಕೊಂಡರೂ ಚಿಕಿತ್ಸೆ ಪಡೆದುಕೊಂಡು ಪುನಃ ಜನರ ಆರೋಗ್ಯದ ಸೇವೆಗೆ ವೈದ್ಯರು ಮುಂದಾಗುತ್ತಿದ್ದು, ವೈದ್ಯೋ ನಾರಾಯಣಿ ಹರಿ ಎಂಬಂತೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದ ಅನೇಕ ವೈದ್ಯರು ಈಗಾಗಲೇ ಕೊರೊನಾಗೆ ಬಲಿಯಾಗಿರುವುದು ವಿಷಾಧಕರ ಸಂಗತಿಯಾಗಿದೆ ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ರವಿಕುಮಾರ್, ವೈದ್ಯರಾದ ಡಾ.ಬಾಲಸುಂದರ್, ಡಾ.ಶಾಂತಾ, ಡಾ.ಶ್ರೀನಾಥ್, ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ವಕ್ಕಲೇರಿ ಹನುಮಯ್ಯ ಮತ್ತಿತರರಿದ್ದರು.
