ಕೈಕಂಬ : ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗದ ಸೂಚನೆಯಂತೆ ಮಂಗಳೂರು-ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿಯ ಕಡಿದಾದ ತಿರುವುಗಳಲ್ಲಿ ಅನಧಿಕೃತವಾಗಿ ಅಳವಡಿಸಲಾದ ಬೃಹತ್ ಫ್ಲೆಕ್ಸ್ ತೆರವು ಕಾರ್ಯಾಚರಣೆ ಗುರುವಾರ ದಿನಪೂರ್ತಿ ಮುಂದುವರಿಯಿತು. ಹೆದ್ದಾರಿ ವಿಭಾಗವು ಎರಡು ವಾರಗಳ ಹಿಂದೆ ಹೆದ್ದಾರಿಯ ತಿರುವುಗಳಲ್ಲಿ ನಾಯಿಕೊಡೆಯಂತೆ ತಲೆ ಎತ್ತಿರುವ ಖಾಸಗಿ ಉದ್ಯಮ ಕ್ಷೇತ್ರದ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಸಂಬಂಧಿತ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಆಗ ಗಂಜಿಮಠ, ಗುರುಪುರ ಕೈಕಂಬದ ಹೆದ್ದಾರಿ ತಿರುವುಗಳಲ್ಲಿ ರಾರಾಜಿಸುತ್ತಿದ್ದ ಕೆಲವು ಫ್ಲೆಕ್ಸ್ ತೆರವುಗೊಳಿಸಲಾಗಿತ್ತು. ಹೆದ್ದಾರಿಯಲ್ಲಿ ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಅನಧಿಕೃತ ಫ್ಲೆಕ್ಸ್ ಗಳ ಬಗ್ಗೆ ವಿಜಯವಾಣಿಯಲ್ಲಿ ಸಚಿತ್ರ ಸುದ್ದಿ ಪ್ರಕಟಗೊಂಡಿತ್ತು.
ಒಂದೊಮ್ಮೆ ಇಲಾಖೆಯೇ ಈ ಕಾರ್ಯಕ್ಕೆ ಇಳಿದರೆ ಎಲ್ಲ ಫ್ಲೆಕ್ಸ್ ಗಳು ಹರಿದು ಹೋಗಬಹುದು. ಇದರಿಂದ ಜಾಹೀರಾತು ಸಂಸ್ಥೆಗಳಿಗಳಿಗೆ ನಷ್ಟವಾಗಲಿದೆ ಎಂದು ಸೂಚಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಂಸ್ಥೆಗಳು ಒಂದು ವಾರದ ಕಾಲಾವಕಾಶ ಕೇಳಿತ್ತು. ಅದರಂತೆ ಇಂದು ಆರ್ ಆ್ಯಂಡ್ ಡಿ, ಶಿಲಾ ಸಂಸ್ಥೆಯ ಸಿಬ್ಬಂದಿಯೇ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೆಸಿದೆ. ಇವರಂತೆ ಕಲ್ಕೂರ ಸಂಸ್ಥೆಯವರೂ ತಮ್ಮ ಜಾಹೀರಾತು ತೆರವುಗೊಳಿಸಲು ಮುಂದೆ ಬಂದಿದ್ದಾರೆ” ಎಂದು ಇಲಾಖೆಯ ಸಹಾಯಕ ಇಂಜಿನಿಯರ್ ಮುರುಗೇಶ್ ತಿಳಿಸಿದರು. ಗುರುವಾರ ವಾಮಂಜೂರು, ಗುರುಪುರ ಕೈಕಂಬ, ಪೊಳಲಿ ದ್ವಾರ, ಸೂರಲ್ಪಾಡಿ, ಗಂಜಿಮಠ ಹಾಗೂ ಇನ್ನೂ ಒಂದೆರಡು ಕಡೆಗಳಲ್ಲಿ ಫ್ಲೆಕ್ಸ್ ತೆರವು ಕಾರ್ಯಾಚರಣೆ ನಡೆಯಿತು. ಈ ಕಾರ್ಯಾಚರಣೆ ನಾಳೆಯೂ ಮುಂದುವರಿಯಲಿದೆ.
ಅಪಘಾತಕ್ಕೆ ಆಹ್ವಾನ ! ಹೆದ್ದಾರಿ ತಿರುವುಗಳಲ್ಲಿ ಫ್ಲೆಕ್ಸ್ ಅಳವಡಿಕೆಯಿಂದ ವಾಹನಿಗರಿಗೆ ಅಪಾಯ ತಪ್ಪಿದ್ದಲ್ಲ. ವಾಹನಿಗರು ಈ ಜಾಹೀರಾತುಗಳನ್ನು ಓದುತ್ತ ಮುಂದೆ ಸಾಗುವಾಗ, ಮುಂದಿನಿAದ ಅಥವಾ ಹಿಂದಿನಿAದ ಬರುವ ವಾಹನಗಳು ಡಿಕ್ಕಿ ಹೊಡೆಯುತ್ತಿವೆ. ಹೆದ್ದಾರಿಯಲ್ಲಿ ಈಗಾಗಲೇ ಇಂತಹ ಹಲವು ಅಪಘಾತಗಳು ಸಂಭವಿಸಿವೆ. ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಮಹತ್ವದ್ದಾಗಿದೆ.
ಹೆದ್ದಾರಿ ಪಕ್ಕದಲ್ಲಿ ಯಾವುದೇ ಫ್ಲೆಕ್ಸ್ ಅಳವಡಿಸುವಂತಿಲ್ಲ ಅಥವಾ ಹೆದ್ದಾರಿಯಲ್ಲಿ ಫ್ಲೆಕ್ಸ್ ಅಳವಡಿಸಲು ಪರವಾನಿಗೆ ನೀಡುವ ಅಧಿಕಾರ ಪಂಚಾಯತ್ಗಳಿಗೆ ಇಲ್ಲ. ಎನ್ಎಚ್ ಮಂಗಳೂರು ವಿಭಾಗ ಈಗಿರುವ ಯಾವುದೇ ಜಾಹೀರಾತುಗಳಿಗೆ ಪರವಾನಿಗೆ ಕೊಟ್ಟಿಲ್ಲ. ಈ ವಿಷಯದಲ್ಲಿ ಸ್ಥಳೀಯ ಪಂಚಾಯತ್ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಎನ್ಎಚ್ ಮಂಗಳೂರು ವಿಭಾಗ ಕ್ರಮಕ್ಕೆ ಮುಂದಾಗಿದೆ.
ಹೆದ್ದಾರಿ ಪಕ್ಕದಲ್ಲಿ ಅಳವಡಿಸಲಾಗುವ ಅನಧಿಕೃತ ಫ್ಲೆಕ್ಸ್ ಗಳು ತಿಂಗಳುಗಟ್ಟಲೆ ಹಾಗೆಯೇ ಉಳಿದುಕೊಳ್ಳುತ್ತವೆ. ಇದರಿಂದ ಹೆದ್ದಾರಿ ಅಂದ ಕೆಡುತ್ತಿದೆ. ಇಂತಹ ಜಾಹೀರಾತುಗಳ ವಿರುದ್ಧ ಹೆದ್ದಾರಿ ವಿಭಾಗ, ಗ್ರಾಪಂ ಆಡಳಿತ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂಬುದು ಜನಸಾಮಾನ್ಯರ ಅನಿಸಿಕೆಯಾಗಿತ್ತು.
