ಕೈಕಂಬ : ಅಡ್ಡೂರು ಜಂಕ್ಷನ್ನಲ್ಲಿ ಸ್ಥಾಪಿಸಲಾದ `ಪ್ರಿಯದರ್ಶಿನಿ ಹೆಲ್ಫ್ಲೈನ್ ಜನಸೇವಾ ಕೇಂದ್ರ’ ಇದರ ನೂತನ ಕಚೇರಿಯನ್ನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಶನಿವಾರ ಉದ್ಘಾಟಿಸಿದರು. ಕಾಂಗ್ರೆಸ್ ಪಕ್ಷದ ಧ್ಯೇಯ ವಾಕ್ಯದಂತೆ ಜನಪರ ಕಾಳಜಿಯಿಂದ ಸೇವೆಗೈಯುತ್ತಿರುವ ಅಡ್ಡೂರಿನ ಯುವ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ ನಲಪಾಡ್, ಕಾಂಗ್ರೆಸ್ ಪಕ್ಷವು ೭೦ ವರ್ಷದಲ್ಲಿ ಈ ದೇಶದ ಒಳಿತಿಗಾಗಿ ಮಾಡಿರುವ ಅತ್ಯಮೂಲ್ಯ ಸೇವೆಗಳಿಗೆ ಮಸಿ ಬಳಿಯುವ ಬಿಜೆಪಿ ಮತ್ತು ಮೋದಿ ಸರ್ಕಾರ, ಈ ದೇಶದ ಒಂದೊಂದೇ ಪ್ರಗತಿ ಕ್ಷೇತ್ರ ಮತ್ತು ಸಂಪತ್ತನ್ನು ಮಾರಾಟ ಮಾಡುತ್ತಿದೆ. ದೇಶದ ಬಗ್ಗೆ ಅಂಬೇಡ್ಕರ್, ಗಾಂಧೀಜಿ ಕಂಡ ಕನಸುಗಳು ನುಚ್ಚುನೂರಾಗುತ್ತಿವೆ. ಬಿಜೆಪಿ ಎಂಬ ಕೋಮುವಾದಿ ಪಕ್ಷದ ವಿರುದ್ಧ ಯುವ ಕಾಂಗ್ರೆಸ್ ಸಟೆದು ನಿಂತು ದೇಶದ ಆಸ್ತಿ ರಕ್ಷಿಸಬೇಕು ಎಂದರು.
ಮಾಜಿ ಶಾಸಕ ಮ್ಮೊದಿನ್ ಬಾವ ಮಾತನಾಡಿ, ಅಡ್ಡೂರು ಭಾಗದ ಜನರ ಕೊರತೆ ನೀಗಿಸುವ ಮಹತ್ವದ ಕೆಲಸ ಇದಾಗಿದೆ. ಇದರಲ್ಲಿ ಯು ಪಿ ಇಬ್ರಾಹಿಂ ಮತ್ತು ಎ ಕೆ ಅಶ್ರಫ್ ಶ್ರಮ ಮರೆಯಲಾಗದು. ಪ್ರಸಕ್ತ ದೇಶವನ್ನಾಳುತ್ತಿರುವ ಮೋದಿ ಸರ್ಕಾರ ಜನರ ಮಧ್ಯೆ ಕಂದಕ ಹುಟ್ಟಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಕಿತ್ತೊಗೆಯಲು ಕಾಂಗ್ರೆಸ್ನ ಹಳೆ ಬೇರು, ಹೊಸ ಚಿಗುರು ಮತ್ತೊಮ್ಮೆ ಒಗ್ಗೂಡಬೇಕು ಎಂದರು. ದಕ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಮಾತನಾಡಿ, ನಾವು ಜನಪರ ಕೆಲಸಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಸರ್ಕಾರದ ಯೋಜನೆಗಳು ಬಡವರ ಸಹಿತ ಎಲ್ಲ ವರ್ಗದವರಿಗೆ ತಲುಪಿಸುವಲ್ಲಿ ಯುವ ಕಾಂಗ್ರೆಸ್ ಇನ್ನೂ ಹೆಚ್ಚಿನ ಆಸಕ್ತಿ ತೋರಿಸಬೇಕು ಎಂದರು.
ಯುವ ಕಾಂಗ್ರೆಸ್ ಮುಖಂಡ ಸೋಯಿಲ್ ಕಂದಕ್ ಮಾತನಾಡಿ, `ಸಮುದಾಯದ ಪ್ರಗತಿ’ ಎಂಬ ಲೇಬಲ್ ಹಚ್ಚಿಕೊಂಡು ಪ್ರಚಾರದಲ್ಲಿ ತೊಡಗಿರುವ ಪಕ್ಷವೊಂದು ಜನರ ಭಾವನೆ ಕೆರಳಿಸುವ ಕೆಲಸ ಮಾಡುತ್ತಿದೆ. ಇಂದಿಲ್ಲಿ ಸ್ಥಾಪನೆಯಾಗಿರುವ ಹೆಲ್ಫ್ಲೈನ್ಗೆ ಯಾವುದೇ ಜಾತಿ-ಮತ ಇಲ್ಲ. ಈ ಪ್ರದೇಶದ ಅಭಿವೃದ್ಧಿಯೇ ನಮ್ಮ ಗುರಿ ಎಂದರು. ಹೆಲ್ಫ್ಲೈನ್ ಜನಸೇವಾ ಕೇಂದ್ರ ಸ್ಥಾಪನೆಯ ರೂವಾರಿ ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ಗುರುಪುರ ಗ್ರಾಪಂ ಸದಸ್ಯ ಎ ಕೆ ಅಶ್ರಫ್, ಅಡ್ಡೂರು ಯುವ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಸದಸ್ಯರ ಪರಿಶ್ರಮದಿಂದ ಈ ಕೇಂದ್ರ ಸ್ಥಾಪನೆಯಾಗಿದೆ.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ ಗೌಡ, ಲಾರೆನ್ಸ್ ಡಿ’ಸೋಜ, ಸುರೇಂದ್ರ ಕಂಬಳಿ, ಮುಫೀದ್, ಪುರುಷೋತ್ತಮ ಮಲ್ಲಿ, ನಿಜಾಂ, ತಮೀಮ್, ತೌಸೀಫ್, ಇಸ್ಮಾಯಿಲ್, ಮುಫಿದ್, ರಾಜು, ಸೂರ್ಯಭಾಸ್ಕರ, ಚಂದ್ರಹಾಸ ಪಲ್ಲಿಪಾಡಿ, ಮಂಜುನಾಥ ಶೆಟ್ಟಿ, ಗಿರೀಶ್ ಆಳ್ವ, ರಾಮಚಂದ್ರ, ಸವಾಝ್ ಉಪ್ಪಿನಂಗಡಿ, ಎಂ ಎಸ್ ಶೇಖಬ್ಬ ಮತ್ತಿತರರು ಉಪಸ್ಥಿತರಿದ್ದರು. ಅಡ್ಡೂರು ಯುವ ಕಾಂಗ್ರೆಸ್ ಅಧ್ಯಕ್ಷ ಕೆ ಉಮರ್ ಫಾರೂಕ್ ಸ್ವಾಗತಿಸಿದರು. ಅಡ್ವಕೇಟ್ ಮೊಹಮ್ಮದ್ ಗಝಾಲಿ ಕೆ ಬಿ ವಂದಿಸಿದರು.
